Wednesday, January 16, 2013

ಪ್ರಕಾಶಣ್ಣ ಅವರಿಗೆ ಜನುಮದಿನದ ಶುಭಾಶಯಗಳು

"ಪರತತ್ವವನು ಬಲ್ಲ ಪಂಡಿತನು ನಾನಲ್ಲ 
ಹರಿನಾಮವೊಂದುಳಿದು ನನಗೇನು ತಿಳಿದಿಲ್ಲ..
ಮಾನವಾ...ದೇಹವೂ ಮೂಳೆ  ಮಾಂಸದ ತಡಿಕೆ..
ಇದರ ಮೇಲಿದೆ ತೊಗಲಿನ ಹೊದಿಕೆ..
ತುಂಬಿದೆ ಒಳಗೆ ಕಾಮಾದಿ ಬಯಕೆ."

ಸಿಗರೇಟ್ ಸೇದುತ್ತ ಇದ್ದಾಗ ಒಂದು ಕಿಡಿ ಕೈ ಮೇಲೆ ಬಿದ್ದು ಚುರ್ರ್ ಎಂದಾಗ ಚಿತ್ರಬ್ರಹ್ಮ ಶ್ರೀ ಹುಣಸೂರು ಕೃಷ್ಣಮೂರ್ತಿಯವರ ಮೂಸೆಯಿಂದ ಅರಳಿದ ಮಹಾನ್ ಸಂದೇಶವುಳ್ಳ ಹಾಡು ಅಣ್ಣಾವ್ರ ಭಕ್ತ ಕುಂಬಾರ ಚಿತ್ರದ್ದು!

ಕೆಲವೇ ಪದದೊಳಗೆ ಜಗತ್ತೇ ತುಂಬುವಂತಹ ಸಾರಾಂಶವುಳ್ಳ ಹಾಡು ಏಕೋ ಕಾಣೆ  ಇಂದು ತುಂಬಾ ಕಾಡುತಿತ್ತು.  ಹಾಗೇ ಫೇಸ್ ಬುಕ್ ಓಪನ್ ಮಾಡಿದೆ ಅನೇಕ ಬ್ಲಾಗ್ ಲೋಕದ ಮಿತ್ರರು ಪ್ರಕಾಶ್ ಹೆಗ್ಗಡೆಯವರಿಗೆ ಜನುಮದಿನದ ಹಾರೈಕೆಗಳನ್ನು ಕಳಿಸುತ್ತಾ ಇದ್ದರು. ನನಗೆ ನಾಚಿಕೆಯಾಯಿತು...ಅರೆರೆ ಎಂತಹ ಕೆಲಸ ಮಾಡಿಬಿಟ್ಟೆ.ಹಿರಿಯಣ್ಣನ ಸ್ಥಾನದಲ್ಲಿ ಸದಾ ಸದಾಶಯ ಕೋರುವ ಪ್ರಕಾಶಣ್ಣನ ಹುಟ್ಟು ಹಬ್ಬವನ್ನೇ ಮರೆತು ಬಿಟ್ಟೆನಲ್ಲ ಎಂದು ಬೇಸರವಾಯಿತು.  ಆದರೂ ಒಂದು ಕೆಟ್ಟ ನಂಬಿಕೆ ನನ್ನ ಮೇಲೆ...ಸಾಧಾರಣ ಬಂಧು ಮಿತ್ರರ ಜೀವನದ ಮುಖ್ಯ ದಿನಗಳನ್ನು ನಾನು ಮರೆಯುವವನಲ್ಲ ..ಇರಲಿ ಎಂದು ಪ್ರಕಾಶಣ್ಣನ ಫೇಸ್ ಬುಕ್ ಪ್ರೊಫೈಲ್ ನೋಡಿದೆ..ಅದರಲ್ಲಿ ಹೊಸ ಕ್ಯಾಲೆಂಡರ್ ವರ್ಷದ ಹದಿನೇಳನೆ ದಿನ ಎಂದಿತ್ತು...ಅಬ್ಬ ಸಧ್ಯ ಮುಜುಗರ ಅನುಭವಿಸುವುದು ತಪ್ಪಿತು ಎಂದಿತು ಮನಸ್ಸು...ಆ ಸಂತಸದ ಅಲೆಯಲ್ಲಿ ತೇಲುತಿದ್ದಾಗ ನೆನಪಿಗೆ ಬಂದದ್ದು ಅಣ್ಣಾವ್ರ ಹಾಡು ಭಕ್ತ ಕುಂಬಾರ ಚಿತ್ರದ್ದು...

ಮನಸು ಹಾಗೆ ಯೋಚಿಸಿತು...ಅಲ್ಲಾ ಆ ಹಾಡಿನ ಹಾಗೆ ಮೂಳೆ  ಮಾಂಸದ ತಡಿಕೆಯಲ್ಲಿ ಹೆಣೆದಿರುವ ಅನೇಕ ಭಾವನೆಗಳನ್ನು ಆಗಸದಲ್ಲಿ ಹತ್ತಿಯ ಹಾಗೆ ಹಿಂಜಿ ತೇಲುತ್ತಾ ಇರುವ ಮೋಡಗಳ ಹಾಗೆ ಬಿಡಿ ಬಿಡಿಯಾಗಿ ಅನೇಕ ನಗೆ ಪ್ರಸಂಗಗಳು, ತಮಾಷೆಯಾಗಿದ್ದರೂ ಗುಪ್ತಗಾಮಿನಿಯ ಹಾಗೆ ಸಂದೇಶ ಕೊಡುವ ಅವರ ಪ್ರತಿ ಬ್ಲಾಗ್ ಲೇಖನಗಳು ಯಾವುದಕ್ಕೆ ಕಮ್ಮಿ ಎನ್ನಿಸಿತು.

ಅನೇಕ ಲೇಖನಗಳು ಅವರ ಬರಹದ ಅಭಿಮಾನಿ ಬಳಗಕ್ಕೆ ಭಾವ ಪುಳಕವನ್ನು ತಂದುಕೊಡುವಂತೆಯೇ ಸಾಂತ್ವನ ಕೂಡ ಕೊಡುವ ರೀತಿ...ಹಾಗೆಯೇ ಅವರ ಬಳಿ ಕೆಲವೇ ನಿಮಿಷಗಳ ಸಂಭಾಷಣೆ ನಗೆ ಬುಗ್ಗೆ ಉಕ್ಕಿಸಿ, ಮನಸನ್ನು ಹಗುರ ಮಾಡಿಕೊಡುವ ತಾಕತ್ ಇರುವ ಇಂತಹ ಸುಂದರ ಮಾನವ ಜೀವಿಗೆ ಇಂದು ಜನುಮದಿನ..
ಸುಂದರ ಮನಸಿನ ಸರಳ ಜೀವಿ ಪ್ರಕಾಶಣ್ಣ!
ಹೀಗೆ ನಮ್ಮನ್ನೆಲ್ಲ ನಗಿಸಿ, ಸಂದೇಶ , ಸಾಂತ್ವನ, ಹಿರಿಯಣ್ಣನ ಹಾಗೆ ನಿಂತು ಮಾರ್ಗದರ್ಶನ ತೋರುವ, ಪ್ರೀತಿಯಿಂದ ಮಾತಾಡಿಸುವ ಪ್ರಕಾಶಣ್ಣ ಅವರಿಗೆ ದೇವರು ಅವರು ಬಯಸಿದ್ದನ್ನೆಲ್ಲ ಕೊಡಲಿ, ಅವರ ಆಶಯ ಆಸಕ್ತಿಗಳು ಹೀಗೆ ಮುಂದುವರೆಯಲಿ. ಅವರ ಇಟ್ಟಿಗೆ ಸಿಮೆಂಟ್ ಬರಿ ಕಟ್ಟದವನ್ನಷ್ಟೇ ಅಲ್ಲದೆ ಅಭಿಮಾನಿಗಳ ಮನಸ್ಸಿನ ಕಟ್ಟಡಕ್ಕೂ ಒಳ್ಳೆ ತಳಪಾಯ ಹಾಕುತ್ತಿರುವ ಅವರ ಪ್ರೀತಿ ಹೀಗೆ ಬೆಳೆಯಲಿ, ಉಳಿಯಲಿ, ಬೆಳಗಲಿ ಎಂಬ ಹಾರೈಕೆಯೊಂದಿಗೆ ಬ್ಲಾಗ್ ಲೋಕದ ಸಮಸ್ತ ತಾರೆಗಳ ಪರವಾಗಿ ಪ್ರಕಾಶಣ್ಣ ಅವರಿಗೆ ಜನುಮ ದಿನದ ಶುಭಾಶಯಗಳು....