Wednesday, February 27, 2013

ಟೆಲ್ ಮಿ ಶ್ರೀಕಾಂತ್!!! (ಅಜಾದ್ ಸರ್ ಅವರ ಜೊತೆ ಕೆಲ ಘಂಟೆಗಳು)

"ಟೆಲ್ ಮಿ ಶ್ರೀಕಾಂತ್!!!"

ಎಸ್. ಎಸ್  ಎಲ್ಲಿದ್ದೀರಾ?

"ನಾನು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಹತ್ತಿರ ನಿಂತಿದ್ದೇನೆ ಅಣ್ಣ"

"ಸರಿ ಅಲ್ಲೇ ಇರಿ ಎರಡು ನಿಮಿಷ ಬಂದೆ" ಫೋನ್ ಕಟ್ ಆಯಿತು, ಬೈಕ್ ಓಡಿತು, ಅಲ್ಲೇ ಬೆಳದಿಂಗಳ ನಗು ಚೆಲ್ಲುತ್ತ ಎಸ್ ಎಸ್ (ಸುಲತ) ನಿಂತಿದ್ದರು. ಇಬ್ಬರು ಉ.ಕು.ಸಾಂ ವಿಚಾರಿಸಿ ಕಹಳೆ ಬಂಡೆ (ಬುಗಲ್ ರಾಕ್) ಉದ್ಯಾನ ವನದೊಳಗೆ ಹೊಕ್ಕೆವು.

ಕಹಳೆ ಬಂಡೆ ಪ್ರವೇಶ ದ್ವಾರ 

ಗಿರಿ ಶಿಖರದ ಗಿರೀಶ್ ಎತ್ತರದ ಗಿರಿಯ ಮೇಲೆ ತನ್ನ ಸ್ನೇಹಿತರ ಜೊತೆ ಕುಳಿತಿದ್ದರು. ಅವರ ಹತ್ತಿರ ಮಾತಾಡುತ್ತಾ ಕುಳಿತಿದ್ದೆವು. ಮತ್ತೆ ಕರೆ ಘಂಟೆ ಅಳಲು ಶುರುಮಾಡಿತು.

ಗೆಳೆತನ ತಬಲಾ ಇದ್ದಂತೆ ಎರಡು ಸೇರಿದರೆ ರಾಗಾ ತಾಳ ಭಾವ! 

"ಅಣ್ಣ ಇನ್ನೊಂದೆರಡು ನಿಮಿಷ ನೆಟ್ಟಕಲ್ಲಪ್ಪ ಸ್ಟಾಪ್ ಗೆ ಬರ್ತಾ ಇದ್ದೇನೆ" ಎಸ್.ಪಿ. ಯ ಮಧುರ ವಾಣಿ ಉಲಿಯಿತು . ಗಾಬರಿಯಾಗಬೇಡಿ ಎಸ್ ಪಿ. ಎಂದರೆ ಸಂಧ್ಯಾ ಪುಟ್ಟಿ. ಬೈಕ್ ಅಲ್ಲಿಗೆ ಓಡಿತು, ಸಿಗ್ನಲ್ ಹತ್ತಿರ ನಿಂತಿದ್ದೆ.

"ಅಣ್ಣ.. ಬೈಕಿನಲ್ಲಿ ಅಲ್ಲಿಯ ತನಕ ಕರೆದುಕೊಂಡು ಹೋಗ್ತೀರಾ!!!?"

ಅಚಾನಕ್ಕಾಗಿ ಬಂದ ಅಶರೀರ ವಾಣಿಯ ಕಡೆ ತಿರುಗಿದೆ... ಸುಂದರ ನಗು ಚೆಲ್ಲುತ್ತ ಎಸ್ ಪಿ. ಗಾಡಿ ಹತ್ತಿದ ಮೇಲೆ ಸೀದಾ ಪಾರ್ಕ್ ಹತ್ತಿರ ಬಂದೆವು. ಅಷ್ಟರಲ್ಲಿ ನವದಂಪತಿಗಳು ಗಿರಿಜಾ ಮೀಸೆಯ ಶಿವೂ ಹಾಗು ನಂದಿನಿ ಬಂದಿದ್ದರು.

ಇಲ್ಲೊಂದು ತ್ರಿ-ವೇಣಿಯರ ಸಂಗಮ 
"ಶ್ರೀಕಾಂತ್ ಮಣಿಕಾಂತ್ ಸರ್ ಕಾಮತ್ ಬುಗಲ್ ರಾಕ್ ಹೋಟೆಲ್ಲಿನ ಹತ್ತಿರ ಇದ್ದಾರಂತೆ, ಅಲ್ಲಿಗೆ ಹೋಗೋಣ" ಗಿರೀಶ್ ಹೇಳಿದರು.. "ಇಲ್ಲಾ ಗಿರಿ, ಪ್ರಕಾಶಣ್ಣ ಮತ್ತು ಅಜಾದ್ ಸರ್ ಇಲ್ಲಿಗೆ ಬರ್ತಾರೆ .. ಒಂದು ಸುಂದರ ಗ್ರೂಪ್ ಫೋಟೋ ತೆಗೆದುಕೊಂಡು ಆಮೇಲೆ ಅಲ್ಲಿಗೆ ಹೋಗೋಣ. ನಾನು ಹೋಗಿ ಮಣಿಕಾಂತ್ ಸರ್ ನಾ ಕರೆದುಕೊಂಡು ಬರ್ತೀನಿ"

"ಅಪ್ಪ ಅಂದ್ರೆ ಆಕಾಶ" ಎಂದ ಮಣಿಕಾಂತ್ ಸರ್, ಆಕಾಶದಲ್ಲಿನ ನೀಲಿಯಂತೆ ಸುಂದರವಾಗಿ ಮಂದಹಾಸ ಬೀರುತ್ತ ನಿಂತಿದ್ದರು, ಹತ್ತಿರ ಬಂದು "ನಮಸ್ಕಾರ..ನನ್ನ ಪುಸ್ತಕ ಬಿಡುಗಡೆಯ ಕಾಮೆಂಟರಿ ಸೂಪರ್ ಇದೆ. ತುಂಬಾ ತುಂಬಾ ಧನ್ಯವಾದಗಳು ನಿಮಗೆ..ತುಂಬಾ ಖುಷಿಯಾಯಿತು" ಎಂದರು.

"ನಿಮ್ಮ ಅಭಿಮಾನ ದೊಡ್ಡದು ಸರ್" ಎಂದೆ!

ಅಷ್ಟರಲ್ಲಿ ಗಿರೀಶ್ ಅವರ ಕರೆ "ಗಿರೀಶ್..ಶ್ರೀಕಾಂತ್ ಜೊತೆಯಲ್ಲಿ ನಾನು ಬರ್ತಾ ಇದ್ದೇನೆ.. ಎರಡೇ ನಿಮಿಷ ಬಂದೆ"   ಫೋನ್ ಕಟ್ಟಾಯಿತು..
ಇನ್ನೊಂದು ತ್ರಿ-ಮೂರ್ತಿಗಳ ಸಂಗಮ 

ಸುಲತ, ಸಂಧ್ಯಾ, ನಂದಿನಿ, ಶಿವಪ್ರಕಾಶ್, ಗಿರೀಶ್, ಮಣಿಕಾಂತ್ ಸರ್, ನಾನು ಎಲ್ಲರು ಕೂತು ಒಂದು ಚಿತ್ರ ತೆಗೆಸಿಕೊಂಡೆವು.

ಒಂದು ಸುಂದರ ಗುಂಪು!

ಅಷ್ಟರಲ್ಲಿ ಅಜಾದ್ ಸರ್ ಅವರ ಮದರಂಗಿ ಧ್ವನಿ ಫೋನಿನಲ್ಲಿ "ಶ್ರೀಮನ್.. ನಾವು ಸೀದಾ ಹೋಟೆಲ್ ಹತ್ತಿರಾನೆ ಬಂದು ಬಿಡುತ್ತೇವೆ.  ಪ್ರಕಾಶನಿಗೆ  ವಿಳಾಸ ಹುಡುಕಲು ಕಷ್ಟವಾಗುತ್ತಿದೆ. ಕಟ್ಟುತ್ತಿರುವ ಕಟ್ಟಡ, @##$ ಆಸ್ಪತ್ರೆ, ಇಂತಹ ಗುರುತುಗಳು ಹೇಳಿದರೆ ಬೇಗ ಹುಡುಕುತ್ತಾನೆ, ಸ್ಕೂಲ್, ಕಾಲೇಜು, ಪಾರ್ಕ್ ಎಂದರೆ ಅವನಿಗೆ ಕಷ್ಟ!!!!"

ಆಕರ್ಷಕ ಜ್ಞಾನದ ದಾಹ ತೀರಿಸುವ ಟ್ಯಾಂಕ್ !

ಸರಿ ನಾವೆಲ್ಲರೂ ಅವರನ್ನ ಭೇಟಿ ಮಾಡಲು ಹೋಟೆಲಿನತ್ತ ಹೆಜ್ಜೆ ಹಾಕಿದೆವು, ದಾರಿಯಲ್ಲಿ ಹೀಗೆ ಹಾಗೆ ಮಾತಾಡುತ್ತಾ ಬಂದೆವು. ಅಷ್ಟರಲ್ಲಿ ಶಮ್ಮಿ ಮೇಡಂ ಅವರ ಕುಟುಂಬ ಕೂಡ ಹೋಟೆಲಿನತ್ತಾ ಹೆಜ್ಜೆ ಹಾಕುತ್ತ ಬರುತ್ತಿದ್ದರು.

ಓದುಗರಿಂದ ಓದುಗರಿಗಾಗಿ ಓದುಗರಿಗೋಸ್ಕರ!

ಅಜಾದ್ ಸರ್ ಕೈ ಬೀಸುತ್ತಾ ತಮ್ಮ ಟ್ರೇಡ್ ಮಾರ್ಕ್ ನಗುವಿನೊಂದಿಗೆ ನಮ್ಮನ್ನು ಸ್ವಾಗತಿಸಿದರು, ಪ್ರಕಾಶಣ್ಣ ಕಣ್ಣು ಮಿಟುಕಿಸಿ ಕುಂಬಳಕಾಯಿ ಮೇಳಕ್ಕೆ ಚಾಲನೆ ಇತ್ತರು..

ಹಾ  ಈಗ ಶುರುವಾಗುತ್ತೆ ಕುಂಬಳ ಕಾಯಿ ಮೇಳ!
ಅಲಹಾಬಾದಿನಲ್ಲಿ ಕುಂಭ ಮೇಳಕ್ಕೆ ಲಕ್ಷ ಲಕ್ಷ ಜನ ಸೇರಿದ್ದರು. ಟಿ. ನರಸೀಪುರದಲ್ಲಿ ಮಿನಿ ಕುಂಭ ಮೇಳಕ್ಕೆ ಕೂಡ ಜನಸಾಗರವಿತ್ತು , ಬಸವನಗುಡಿಯ ಬುಗಲ್ ರಾಕ್ ಹತ್ತಿರ  ಮಿನಿ ಬ್ಲಾಗ್ ಮೇಳಕ್ಕೆ ಕಹಳೆ ಊದಿದರು ಪ್ರಕಾಶಣ್ಣ!

ಮೇಳಕ್ಕೆ ಕಹಳೆಯ ನಾದ 
ಮೇಳ ಎಂದಾಗ ತಿಂಡಿ ತಿನಿಸುಗಳು ಕೂಡ ಒಂದು ಭಾಗವಲ್ಲವೆ. ಸ್ನೇಹದ ಗಂಗೆಯಲ್ಲಿ ಮಿಂದೆದ್ದ ನಾವೆಲ್ಲರೂ  ಹೊಟ್ಟೆಗೆ ಪುಷ್ಕಳ ಬೋಜನಕ್ಕೆ ಅಣಿಯಾಗಿ ಕೂತೆವು. ಸಾಂಪ್ರದಾಯಿಕವಾಗಿ ಒಬ್ಬರಿಗೊಬ್ಬರ ಪರಿಚಯವಾಯಿತು. ಪ್ರಕಾಶಣ್ಣ, ಅಜಾದ್ ಸರ್, ಶಿವಪ್ರಕಾಶ್, ನಂದಿನಿ, ಮಣಿಕಾಂತ್ ಸರ್, ಶಮ್ಮಿ ಮೇಡಂ, ಅವರ ಯಜಮಾನರು, ಅವರ ಮುದ್ದು ಗುಂಡು (Hibernate modeನಲ್ಲಿ), ನಂದಿನಿ, ಸುಲತ, ಸಂಧ್ಯಾ, ಗಿರೀಶ್ ಎಲ್ಲರೂ ತಮ್ಮ  ದಂತ ಪಂಕ್ತಿಗಳನ್ನು ತೋರಿದ ಮೇಲೆ ನಗೆ ಬಾಂಬುಗಳು ಸಿಡಿಯತೊಡಗಿದವು.

ಮೀನಿನ ಹೆಜ್ಜೆಯನ್ನು ಕಂಡು ಹಿಡಿಯಬಹುದು, ಹೆಣ್ಣಿನ ಮನವನ್ನು ಓದಬಹುದು.. ಆದರೆ ಕನ್ನಡಕವಿಲ್ಲದೆ, ಜೂಮ್ ಲೆನ್ಸ್ ಇಲ್ಲದೆ ಹೋಟೆಲಿನ ಮೆನು ಓದಲು ಆಗುವುದಿಲ್ಲ ಎಂದರು ಪ್ರಕಾಶಣ್ಣ. ಅದನ್ನ ಇಷ್ಟು ದೂರ ಹಿಡಿದು ಓದಬೇಕು ಎಂದರು ಅಜಾದ್ ಸರ್!
ಹಾಸ್ಯ ಬ್ರಹ್ಮ ಅಜಾದ್ ಸರ್!

ಪ್ರಕಾಶಣ್ಣ ಮತ್ತು ಅಜಾದ್ ಸರ್ ಅವರಿಬ್ಬರ ಸುಂದರ ಗೆಳೆತನ, ಅವರ ಹಾಸ್ಯ ಪ್ರಜ್ಞೆ, ಎಲ್ಲರನ್ನೂ ಸ್ನೇಹದ ಬಂಧನದಲ್ಲಿ ಬೆಸೆಯುವ ಸಹೃದಯತೆಯ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ.

ಒಂದು ಸುಂದರ ಭಾನುವಾರ ಸುಮಧುರ ಹೃದಯಗಳ ಜೊತೆ ಕಳೆದ ಸಮಯಗಳು ಬ್ಲಾಗ್ ಲೋಕದ ಪುಟಗಳಲ್ಲಿ ಚಿನ್ನದಲ್ಲಿ ಮುಳುಗಿ ಎದ್ದ ಸಂದರ್ಭದಲ್ಲಿ ಆ ನೆನಪಿನ ಸುಂದರ ಅಕ್ಷರಗಳು ನಿಮಗಾಗಿ. ಅಜಾದ್ ಸರ್ ಅವರ ಆಗಮನದ ಖುಷಿಯಲ್ಲಿ ಬಸವನಗುಡಿಯ ಬುಗಲ್ ರಾಕ್ನಲ್ಲಿ ನಡೆದ  ಬ್ಲಾಗ್ ಲೋಕದ ಹೃದಯಗಳ ಕುಂಭ ಮೇಳಕ್ಕೆ ನಮ್ಮ ಈ ಚಿತ್ರ ಸಾಕ್ಷಿಯಾಯಿತು!!!

ಹೀಗೊಂದು ಗುಂಪು!
ಗೆಳೆತನ ಪ್ರತಿ ಚರಾಚರ ವಸ್ತುಗಳಲ್ಲೂ ಪ್ರವಹಿಸುವ ಒಂದು ಸುಂದರ ಕಂಪನ ಶಕ್ತಿ!!!

Wednesday, January 16, 2013

ಪ್ರಕಾಶಣ್ಣ ಅವರಿಗೆ ಜನುಮದಿನದ ಶುಭಾಶಯಗಳು

"ಪರತತ್ವವನು ಬಲ್ಲ ಪಂಡಿತನು ನಾನಲ್ಲ 
ಹರಿನಾಮವೊಂದುಳಿದು ನನಗೇನು ತಿಳಿದಿಲ್ಲ..
ಮಾನವಾ...ದೇಹವೂ ಮೂಳೆ  ಮಾಂಸದ ತಡಿಕೆ..
ಇದರ ಮೇಲಿದೆ ತೊಗಲಿನ ಹೊದಿಕೆ..
ತುಂಬಿದೆ ಒಳಗೆ ಕಾಮಾದಿ ಬಯಕೆ."

ಸಿಗರೇಟ್ ಸೇದುತ್ತ ಇದ್ದಾಗ ಒಂದು ಕಿಡಿ ಕೈ ಮೇಲೆ ಬಿದ್ದು ಚುರ್ರ್ ಎಂದಾಗ ಚಿತ್ರಬ್ರಹ್ಮ ಶ್ರೀ ಹುಣಸೂರು ಕೃಷ್ಣಮೂರ್ತಿಯವರ ಮೂಸೆಯಿಂದ ಅರಳಿದ ಮಹಾನ್ ಸಂದೇಶವುಳ್ಳ ಹಾಡು ಅಣ್ಣಾವ್ರ ಭಕ್ತ ಕುಂಬಾರ ಚಿತ್ರದ್ದು!

ಕೆಲವೇ ಪದದೊಳಗೆ ಜಗತ್ತೇ ತುಂಬುವಂತಹ ಸಾರಾಂಶವುಳ್ಳ ಹಾಡು ಏಕೋ ಕಾಣೆ  ಇಂದು ತುಂಬಾ ಕಾಡುತಿತ್ತು.  ಹಾಗೇ ಫೇಸ್ ಬುಕ್ ಓಪನ್ ಮಾಡಿದೆ ಅನೇಕ ಬ್ಲಾಗ್ ಲೋಕದ ಮಿತ್ರರು ಪ್ರಕಾಶ್ ಹೆಗ್ಗಡೆಯವರಿಗೆ ಜನುಮದಿನದ ಹಾರೈಕೆಗಳನ್ನು ಕಳಿಸುತ್ತಾ ಇದ್ದರು. ನನಗೆ ನಾಚಿಕೆಯಾಯಿತು...ಅರೆರೆ ಎಂತಹ ಕೆಲಸ ಮಾಡಿಬಿಟ್ಟೆ.ಹಿರಿಯಣ್ಣನ ಸ್ಥಾನದಲ್ಲಿ ಸದಾ ಸದಾಶಯ ಕೋರುವ ಪ್ರಕಾಶಣ್ಣನ ಹುಟ್ಟು ಹಬ್ಬವನ್ನೇ ಮರೆತು ಬಿಟ್ಟೆನಲ್ಲ ಎಂದು ಬೇಸರವಾಯಿತು.  ಆದರೂ ಒಂದು ಕೆಟ್ಟ ನಂಬಿಕೆ ನನ್ನ ಮೇಲೆ...ಸಾಧಾರಣ ಬಂಧು ಮಿತ್ರರ ಜೀವನದ ಮುಖ್ಯ ದಿನಗಳನ್ನು ನಾನು ಮರೆಯುವವನಲ್ಲ ..ಇರಲಿ ಎಂದು ಪ್ರಕಾಶಣ್ಣನ ಫೇಸ್ ಬುಕ್ ಪ್ರೊಫೈಲ್ ನೋಡಿದೆ..ಅದರಲ್ಲಿ ಹೊಸ ಕ್ಯಾಲೆಂಡರ್ ವರ್ಷದ ಹದಿನೇಳನೆ ದಿನ ಎಂದಿತ್ತು...ಅಬ್ಬ ಸಧ್ಯ ಮುಜುಗರ ಅನುಭವಿಸುವುದು ತಪ್ಪಿತು ಎಂದಿತು ಮನಸ್ಸು...ಆ ಸಂತಸದ ಅಲೆಯಲ್ಲಿ ತೇಲುತಿದ್ದಾಗ ನೆನಪಿಗೆ ಬಂದದ್ದು ಅಣ್ಣಾವ್ರ ಹಾಡು ಭಕ್ತ ಕುಂಬಾರ ಚಿತ್ರದ್ದು...

ಮನಸು ಹಾಗೆ ಯೋಚಿಸಿತು...ಅಲ್ಲಾ ಆ ಹಾಡಿನ ಹಾಗೆ ಮೂಳೆ  ಮಾಂಸದ ತಡಿಕೆಯಲ್ಲಿ ಹೆಣೆದಿರುವ ಅನೇಕ ಭಾವನೆಗಳನ್ನು ಆಗಸದಲ್ಲಿ ಹತ್ತಿಯ ಹಾಗೆ ಹಿಂಜಿ ತೇಲುತ್ತಾ ಇರುವ ಮೋಡಗಳ ಹಾಗೆ ಬಿಡಿ ಬಿಡಿಯಾಗಿ ಅನೇಕ ನಗೆ ಪ್ರಸಂಗಗಳು, ತಮಾಷೆಯಾಗಿದ್ದರೂ ಗುಪ್ತಗಾಮಿನಿಯ ಹಾಗೆ ಸಂದೇಶ ಕೊಡುವ ಅವರ ಪ್ರತಿ ಬ್ಲಾಗ್ ಲೇಖನಗಳು ಯಾವುದಕ್ಕೆ ಕಮ್ಮಿ ಎನ್ನಿಸಿತು.

ಅನೇಕ ಲೇಖನಗಳು ಅವರ ಬರಹದ ಅಭಿಮಾನಿ ಬಳಗಕ್ಕೆ ಭಾವ ಪುಳಕವನ್ನು ತಂದುಕೊಡುವಂತೆಯೇ ಸಾಂತ್ವನ ಕೂಡ ಕೊಡುವ ರೀತಿ...ಹಾಗೆಯೇ ಅವರ ಬಳಿ ಕೆಲವೇ ನಿಮಿಷಗಳ ಸಂಭಾಷಣೆ ನಗೆ ಬುಗ್ಗೆ ಉಕ್ಕಿಸಿ, ಮನಸನ್ನು ಹಗುರ ಮಾಡಿಕೊಡುವ ತಾಕತ್ ಇರುವ ಇಂತಹ ಸುಂದರ ಮಾನವ ಜೀವಿಗೆ ಇಂದು ಜನುಮದಿನ..
ಸುಂದರ ಮನಸಿನ ಸರಳ ಜೀವಿ ಪ್ರಕಾಶಣ್ಣ!
ಹೀಗೆ ನಮ್ಮನ್ನೆಲ್ಲ ನಗಿಸಿ, ಸಂದೇಶ , ಸಾಂತ್ವನ, ಹಿರಿಯಣ್ಣನ ಹಾಗೆ ನಿಂತು ಮಾರ್ಗದರ್ಶನ ತೋರುವ, ಪ್ರೀತಿಯಿಂದ ಮಾತಾಡಿಸುವ ಪ್ರಕಾಶಣ್ಣ ಅವರಿಗೆ ದೇವರು ಅವರು ಬಯಸಿದ್ದನ್ನೆಲ್ಲ ಕೊಡಲಿ, ಅವರ ಆಶಯ ಆಸಕ್ತಿಗಳು ಹೀಗೆ ಮುಂದುವರೆಯಲಿ. ಅವರ ಇಟ್ಟಿಗೆ ಸಿಮೆಂಟ್ ಬರಿ ಕಟ್ಟದವನ್ನಷ್ಟೇ ಅಲ್ಲದೆ ಅಭಿಮಾನಿಗಳ ಮನಸ್ಸಿನ ಕಟ್ಟಡಕ್ಕೂ ಒಳ್ಳೆ ತಳಪಾಯ ಹಾಕುತ್ತಿರುವ ಅವರ ಪ್ರೀತಿ ಹೀಗೆ ಬೆಳೆಯಲಿ, ಉಳಿಯಲಿ, ಬೆಳಗಲಿ ಎಂಬ ಹಾರೈಕೆಯೊಂದಿಗೆ ಬ್ಲಾಗ್ ಲೋಕದ ಸಮಸ್ತ ತಾರೆಗಳ ಪರವಾಗಿ ಪ್ರಕಾಶಣ್ಣ ಅವರಿಗೆ ಜನುಮ ದಿನದ ಶುಭಾಶಯಗಳು....

Thursday, November 29, 2012

""ಏನ್ ಫ್ರೆಂಡ್ಸಪ್ಪ ನೀವು....?!"

ಸುಮಾರು ೨೭ ವರ್ಷಗಳ ಗೆಳೆತನ ನಮ್ಮದು...ಸದಾ ಒಬ್ಬರಿಗೊಬ್ಬರು ಕಾಲು ಎಳೆಯುತ್ತ, ತಮಾಷೆ ಮಾಡುತ್ತಾ ಕಾಲ ಕಳೆಯುತ್ತಿದ್ದ ನಮಗೆ.....ನಮ್ಮೊಳಗೊಬ್ಬ ಮದುವೆ ವಯಸ್ಸಿಗೆ ಬಂದಿದ್ದಾನೆ ಎನ್ನುವ ಅರಿವೇ ಇರಲಿಲ್ಲ..ನಾವು ಐದು ಮಂದಿ ಎಲ್ಲಿ ಹೋದರು ಜೊತೆಯಲ್ಲಿ...ಹೀಗೆ ಅನೇಕ ಕಪಿ ಚೇಷ್ಟೆಗಳನ್ನ ಮಾಡಿ ನಕ್ಕು ನಲಿಯುತ್ತ ಸಾಗಿತ್ತು ಕಾಲನ ಚಕ್ರ..
ವೆಂಕಿ, ಜೆ.ಎಂ, ಶಶಿ, ಶ್ರೀಕಿ, ಲೋಕಿ....ಹಮ್ ಪಾಂಚ್....
ನಾವೆಲ್ಲಾ ಹೆದರಿದ್ದು... ನಮಗೆಲ್ಲ ಮದುವೆ ಆದ ಮೇಲೆ ನಮ್ಮ ಸ್ನೇಹ ಸಂಬಂಧ ಹೀಗೆ ಇರುತ್ತಾ ಎನ್ನುವ ಪ್ರಶ್ನೆಗೆ.. ...!

ಶಶಿ ಆಗಿನ ಬಾಂಬೆಯಿಂದ ಬರೆದ ಪತ್ರ ಇನ್ನು ನನ್ನ ಮನಸಲ್ಲಿ ಹಾಗೆ ಇದೆ...ಅದರಲ್ಲಿ ಹೇಳಿದ್ದ.."ಲೋ ನನಗೆ ಹೆಣ್ಣು ನೋಡಿದ್ದಾರೆ.ನನಗೂ ಇಷ್ಟವಾಗಿದೆ.ನಮ್ಮ ಹತ್ತಿರದ ಸಂಬಂಧಿಕರ ಮಗಳು...ಫೋಟೋ ನೋಡಿ...ಏನಾದರು ಕಾಮೆಂಟ್ ಮಾಡಿದ್ರಿ ಅಂದ್ರೆ ಜೋಕೆ..ಬಂದು ವಿಚಾರಿಸಿಕೊಳ್ತಿನಿ..!"

ನಮಗೆ ನಮ್ಮ ಹಣೆ ಬರಹವನ್ನೇ ಓದಲು ಬರುತ್ತಿರಲಿಲ್ಲ....ಇನ್ನೂ  ಆ ಶ್ರೀಮಂತ ಮನೆತನದ ಹುಡುಗ ನಮ್ಮ ಸ್ನೇಹಿತ..ಅವನಿಗೆ ಒಲಿದು ಬಂದಿದ್ದ ಹುಡುಗಿಯೂ ಕೂಡ ಶ್ರೀಮಂತ ಮನೆತನದವರೇ ಆಗಿದ್ದು...ನಮಗೆ ಈ ಹುಡುಗಿ ಏನೋ ಹೆಂಗೋ..ನಮ್ಮ ಸ್ನೇಹ ಹೀಗೆ ಮುಂದುವರೆಯುತ್ತಾ ಇಲ್ಲವ..ಹೀಗೆ ಏನೇನೂ ಯೋಚನೆಗಳು ಕಾಡ್ತಾ ಇದ್ದವು..

ನಿಶ್ಚಿತಾರ್ಥ ಹುಡುಗಿಯ ತವರೂರು ಮಾಲೂರಿನಲ್ಲಿ ನಡೆಯಿತು.....

ಮದುವೆ ನವೆಂಬರ್ ೩೦ ೧೯೯೮ ರಲ್ಲಿ ಕೋರಮಂಗಲ ಬಡಾವಣೆಯ ಬಿ.ಟಿ.ಎಸ್  ಸಮೂದಾಯ ಭವನದಲ್ಲಿ ನಡೆಯುವುದು ಎಂಬ ನಿರ್ಧಾರವಾಯಿತು.

ಆಗ ಜೆ.ಎಂ. ಆಫೀಸಿಂದ ಮೊತ್ತ ಮೊದಲನೇ ಬಾರಿಗೆ ಇಂಗ್ಲೆಂಡ್ ಗೆ ಹೋಗಿದ್ದ...ಹಾಗಾಗಿ ಮದುವೆ ಮನೆಯಲ್ಲಿ ವೆಂಕಿ, ಲೋಕಿ ಜೊತೆಯಲ್ಲಿ ನಾನು...ಸಂಭ್ರಮದಿಂದ ಓಡಾಡುತ್ತಿದ್ದೆವು..

ಧಾರೆಯ ಹಿಂದಿನ ರಾತ್ರಿ..ಶಶಿ ಅವರ ಅಪ್ಪ...ನಮ್ಮ ಹತ್ತಿರ ಬಂದು..."ನೋಡ್ರಪ್ಪ ಅವನು ಒಂದು ವಾರದಿಂದ ಸರಿಯಾಗಿ ನಿದ್ದೆ ಮಾಡಿಲ್ಲ...ಅವನನ್ನು ಮಲಗಲು ಬಿಡಿ...ಬೆಳಿಗ್ಗೆ ಬೇರೆ ಬೇಗ ಏಳಬೇಕು..ತುಂಬಾ ಶಾಸ್ತ್ರ ಇದೆ"..

ನಾವು ಧೈರ್ಯವಾಗಿ..."ನೀವೇನು ಯೋಚನೆ ಮಾಡಬೇಡಿ ಸರ್...ಅವನನ್ನು ಹೂವಿನ ಹಾಗೆ ನೋಡಿಕೊಳ್ತೇವೆ....!" ಎಂದು..ಕೆಟ್ಟದಾಗಿ ಹಲ್ಲು ಬಿಟ್ಟಿದ್ದೆವು..

ಸರಿ ಊಟ ಆಯಿತು, ಮಲಗುವ ಕೋಣೆಗೆ  ನಾವು ನಾಲ್ಕು ಜನ ಬಂದೆವು...

ಶಶಿ ಹೇಳಿದ..." ನೋಡ್ರೋ..ತುಂಬಾ ಸುಸ್ತಾಗಿದೆ ನಾನು ಮಲಗುತ್ತೇನೆ" ಅಂದ..

ನಾವು "ಓಕೆ ಶಶಿ ಗುಡ್ ನೈಟ್" ಅಂದೆವು...

ನಂತರ ಶುರುವಾಯಿತು...ವೆಂಕಿ,  ಲೋಕಿ ಮತ್ತು ನಾನು ಅದು ಇದು ಅಂತ ತಮಾಷೆ ಮಾಡುತ್ತಾ..ಶಾಲಾ ಕಾಲೇಜು ದಿನಗಳ ಮಾತುಗಳೆಲ್ಲ ಆಡುತ್ತ...ತಮಾಷೆ ಮಾಡುತ್ತಾ ಕೂತಿದ್ದೆವು...ಶಶಿಗೂ ನಿದ್ದೆ ಮಾಡಲಾಗಲಿಲ್ಲ..ಅವನು ನಮ್ಮ ಜೊತೆ ಸೇರಿದ..
ಮಾತು, ಹಾಸ್ಯ ಚಟಾಕಿಗಳು ಮುಂದುವರೆದಿತ್ತು ಸಮಯ ಸುಮಾರು ೧೨ ಘಂಟೆ ಇರಬಹುದು...

ವೆಂಕಿ, ಮತ್ತು ಲೋಕಿ ಇಬ್ಬರು ಹೊದಿಕೆಗಾಗಿ ಕಿತ್ತಾಡಲು ಶುರು ಮಾಡಿದರು...ಪಾಪ ಮಧ್ಯದಲ್ಲಿ ಶಶಿ..ಆಕಡೆ ಈ ಕಡೆ ಈ ಇಬ್ಬರೂ ಹೊದಿಕೆ ಎಳೆಯುತ್ತ ನಗುತಿದ್ದರು....ಹೀಗೆ ಸುಮಾರು ಘಂಟೆ ಕಳೆಯಿತು....

ಶಶಿಯಿಂದ ನಿದ್ರಾದೇವಿ ತಪ್ಪಿಸಿಕೊಂಡು ಓಡಿ ಹೋಗಲು ಶುರು ಮಾಡಿದಳು...

ಹೀಗೆ ಕಳೆಯಿತು..ಮತ್ತೆ ನಮ್ಮ ನಗೆ, ಹಾಸ್ಯ, ಲಾಸ್ಯ...ಸಾಗಿತ್ತು...ಕಡೆಗೆ...ಪಾಪ ಶಶಿ ಬೆಳಿಗ್ಗೆ ಬೇಗ ಏಳಬೇಕು ಅಂತ ಮತ್ತೆ ನೆನಪಾಗಿ..ಎಲ್ಲರು ಮಲಗಿದೆವು...ಸಮಯ ಸುಮಾರು ಮಧ್ಯರಾತ್ರಿ ಒಂದೂವರೆ ಎರಡು ಇರಬಹುದು...

ಮದುವೆ ಕಾರ್ಯಕ್ರಮ ಚೆನ್ನಾಗಿ ನಡೆಯಿತು...ಆ ಕಾರ್ಯಕ್ರಮವನ್ನು ಭವನದ ಎಲ್ಲ ಮೂಲೆಯಲ್ಲೂ ಕಾಣುವ ಹಾಗೆ ಟಿ.ವಿ.ಅಳವಡಿಸಿದ್ದರು...ಅವರಿಬ್ಬರೂ ಜೊತೆಯಲ್ಲಿ ನಿಂತ ದೃಶ್ಯವನ್ನು ನೋಡಿ ವೆಂಕಿ ಹೇಳಿದ್ದು " ಶ್ರೀಕಿ...ಏನ್ ಪರ್ಫೆಕ್ಟ್ ಜೋಡಿ ಅಲ್ವೇನು...ಸೂಪರ್" ....

ಆರತಕ್ಷತೆ ಎಲ್ಲವು ಮುಗಿಯಿತು...ನಾವೆಲ್ಲಾ ನಮ್ಮ ಮನೆಗಳನ್ನ ಸೇರಿದೆವು...

ಅವನು ಬಾಂಬೆಗೆ ಪತ್ನಿಯ ಸಮೇತ ಹೊರಡಲು ತಯಾರಾಗಿದ್ದ..ನಾವೆಲ್ಲರೂ ಅವನನ್ನು ಬೀಳ್ಕೊಡಲು ಹೋದೆವು...

ಮನೆಯ ಬಾಗಿಲಲ್ಲೇ..."ಏನ್ ಫ್ರೆಂಡ್ಸಪ್ಪ ನೀವು....?!" ಅಂದ್ರು ಶಶಿಯ ಅಪ್ಪ...

ನಮಗೆ ಗಾಬರಿ .."ಏನಾಯ್ತು ಸರ್" ಎಂದೆವು...

"ಅಲ್ರಪ್ಪ...ಅವತ್ತು ಅಷ್ಟು ಹೇಳಿದ್ದೆ.ಅವನಿಗೆ ನಿದ್ದೆ ಮಾಡಲು ಬಿಡಿ..ಅಂತ ..ನಿಮಗೆ ಗೊತ್ತ ಮದುವೆಯ ದಿನ ಅವನು ವಾಂತಿ ಮಾಡಿಕೊಂಡ..ಪಾಪ" ಅಂದ್ರು...

ನಾವು ಸುಮ್ಮನೆ...ನವ ವಧುವಂತೆ..ನೆಲ ಕೆರೆಯುತ್ತ..ಸುಮ್ಮನೆ ದಂತಗಳನ್ನೂ ಪ್ರದರ್ಶಿಸಿದೆವು...

ಯಾರೂ ಇಲ್ಲದಾಗ ಶಶಿಗೆ "ಮಗನೆ..ಹುಡುಗಿಯ ನೆನಪಲ್ಲಿ ನೆಟ್ಟಗೆ ಊಟ ಮಾಡದೆ..ನಿದ್ದೆ ಮಾಡದೆ...ಇದ್ದವನು ನೀನು...ವಾಂತಿ ಮಾಡಿದ್ದು ನೀನು..ಬಯ್ಗುಳ ನಮಗೆ..." ಅಂತ ಸರಿಯಾಗಿ ಗಾಳಿ ಬಿಡಿಸಿದೆವು...

ಶಶಿ..."ಹಹಹ..".ಅಂತ ನಕ್ಕು..."ಇಲ್ಲಪ್ಪಾ...ಒಂದು ವಾರದಿಂದ ತುಂಬಾ ಪ್ರಯಾಣ ಮಾಡಿದ್ದೆ, ಓಡಾಟ ಜಾಸ್ತಿಯಾಗಿತ್ತು...ಊಟ ತಿಂಡಿ ಸರಿಯಾಗಿ ಆಗಿರಲಿಲ್ಲ..ಹಾಗಾಗಿ.......:-)"!

"ಗುರು ಈ ಕಥೆಯೆಲ್ಲಾ ನಮಗೆ ಹೇಳಬೇಡ..ನಮಗೇನು ಗೊತ್ತಿಲ್ವ...ಹಂಗಿದ್ದರೆ ಹಂಗೆ ಹೇಳಬೇಕಿತ್ತು..ನಿಮ್ಮಪ್ಪನಿಗೆ..ನೋಡು ನಮಗೆ ಹೆಂಗೆ ಬಯ್ದರು....ಹಹಹ...."!

"ಹೋಗ್ಲಿ ಬಿಡ್ರೋ...ನಿಮ್ಮ ಬುದ್ಧಿ ನನಗೆ ಗೊತ್ತಿಲ್ವ.."ಅಂದ

ಇಂತಹ ಒಂದು ಸುಮಧುರ ಘಳಿಗೆ ನಮ್ಮ ಜೀವನದಲ್ಲಿ ಮತ್ತೆ ಬರುತ್ತಾ ಅನ್ನುವ ಹಾಗೆ ನೆನಪಲ್ಲಿ ಅಚ್ಚಳಿಯದೆ ನಿಂತಿದೆ ಶಶಿ ಮದುವೆ!!!!

ಅಂದ ಹಾಗೆ ಶಶಿಯ ಬಾಳಲ್ಲಿ ಪ್ರತಿ ಹೆಜ್ಜೆಯಿಟ್ಟ  ಸುಂದರ ಹುಡುಗಿ ನಮಗೆಲ್ಲ ಹಿರಿಯಕ್ಕನ ಸ್ಥಾನದಲ್ಲಿ ನಿಂತು...ನಮ್ಮನ್ನು ಒಡಹುಟ್ಟಿದ ತಮ್ಮಂದಿರಿಗಿಂತ ಹೆಚ್ಚು... ಎಂದು ಪ್ರೀತಿ ತೋರುತ್ತ..ನಮ್ಮ ಅನೇಕ ಪ್ರಶ್ನೆಗಳಿಗೆ "ಪ್ರತಿ" ಉತ್ತರಕೊಟ್ಟ ನಮ್ಮ ಪ್ರೀತಿಯ ಅಕ್ಕನ ಹೆಸರು "ಪ್ರತಿಭಾ"...

ನಾವೆಲ್ಲಾ ಒಂದೇ ರಕ್ತ ಹಂಚಿಕೊಂಡು ಹುಟ್ಟಲಿಲ್ಲ..ಆದರೆ ಒಂದೇ ಉಸಿರಿನಲ್ಲಿ ಬೆರೆತು ಹೋಗಿದ್ದೇವೆ...ಕೆಲಸಕಾರ್ಯಗಳ ಒತ್ತಡಗಳ ನಿಮಿತ್ತ...ಒಬ್ಬರಿಗೊಬ್ಬರು ಸದಾ ಭೇಟಿ ಆಗುತ್ತಿಲ್ಲ..ಆದರೆ ಆ ನೆನಪುಗಳ ಸರಮಾಲೆಯನ್ನೇ ಪೋಣಿಸುತ್ತ..ಒಂದೊಂದೇ ಹೂವನ್ನು ನೋಡುತ್ತಾ..ಆಸೆಯಿಂದ ಹಳೆ ದಿನಗಳತ್ತ ಸಾಗಲು ಅನುಕೂಲವಾಗಲೆಂದು ಈ ಬರಹವನ್ನು ನಮ್ಮ ಪ್ರೀತಿಯ ಗೆಳೆಯ ಶಶಿ ಹಾಗೂ ಅಕ್ಕ ಪ್ರತಿಭಾ ಅವರ ಹದಿನಾಲ್ಕನೇ ವಿವಾಹವಾರ್ಷಿಕೋತ್ಸವದ ಶುಭ ಸಂದರ್ಭಕ್ಕೆ ಈ ಲೇಖನವನ್ನು ಅವರಿಗೆ ಕಾಣಿಕೆಯಾಗಿ ನಮ್ಮ ಗೆಳೆಯರ ಪರವಾಗಿ ಕೊಡುತಿದ್ದೇನೆ...

ಶಶಿ ಮತ್ತು ಪ್ರತಿಭಕ್ಕ...ನಿಮ್ಮ ವಿವಾಹದ  ಶುಭದಿನಕ್ಕೆ ಶುಭಾಶಯಗಳು....

Monday, October 22, 2012

Happy Birthday Shruthi (Samatha)

Sirca March 2001...

A prince of Jaagarlamudi, in a wedding reception saw a beautiful princess from the neighboring state.  It was more than the love at first sight. He was deeply impressed by the charming princess, and always the prince goes by the basic instinct [(:-)]..with out any doubt he raised the Red Rose Flag..our cute princess also didn't think twice..cooly she too raised the Red Rose Flag. 

JM..ordered "you people are coming with me, sriki you need to take care of my belongings..loki..you have to be with me all the time. 

So we received the order in original..and started the journey to Narasaraopet in Andrapradesh.

JM, the most ever positive minded personality I came across.. you give any situation..he will say..don't worry buddy..you will sail through..and along with that comes a small tit bit how to evade & sail on the waves of uncertainty.  He should be called GEM not JM.

At around 8.00AM, train stopped, and the King & Queen of Narasaraopet and their relatives were there to receive us.  Straight away rushed to a guest house, where we were given an opportunity to dust ourselves, and a Tanga - Typical Basanti Ki Gaadi straight from Sholay arrived on the scene.  We were happy to be riding on a Tanga.  A nice feel.

After a mandatory asking for well being, our Prince was decked in new clothes, glittering garland, he was looking like a Emperor.  He was smiling all the way..suddenly a lightening struck the mantap.  The mantap was full of bright light, totally we were blinded by the glow...

Was wondering what happened there..... with a beautiful cat walk, our cute sister Princess of narasaraopet arrived with the relatives, friends, and well wishers.  Really the picture perfect for any heroin entry in the movie, and our Prince was also cute more than any heroin around.

Prince was very cute, and we were fortunate enough to have a sister of that cuteness..

Slowly but surely our prince regained consciouness, and just winked at the prince...princess too winked back, and gave a heart stopping smile.  Loki some how managed our Prince from falling down :-)

It was a grand engagement..where prince and princess exchanged the vows, rings, garlands, and the most important the HEART!!!

The food was nice, some how we managed to spend the time till the night.  Dinner was ready, the kingdom of Narasaraopet was brimming with joy, and with great respect, invited us for the dinner.  

The food items were chasing one another in the taste, and final item came in.  I rubbed my eyes, couldn't see, again i rubbed my eyes..I felt, am dreaming..the guy who never dreamt of going abroad, how he can see Antartica...no no...

Loki said.."maga...this is not Antartica, this is curd's in a bucket..just check it out"..
Maaaan..I was totally speechless what a curd's it was...Superb...With big curd rice in the stomach..we happily slept..except Prince, and princes..(obviously)..

Next day, we headed towards a temple on the hillock, where it was a customary in Narasaraopet to visit that place, and we were happy folks..myself, and loki left behind the Prince and the Princes to give the time for themselves..:-)

Coming back, on the way went to their ancestors, and as usual our marketing geek Loki inquired about the Red chilly, the rate, the quality, and a virutal contract to buy and sell the Red chilli in parts of Karnataka. It was a hot summer, they gave us chilled seven up's, coke and all to quench the thirsty. 

Train started crying.."Hey Prince, it is time to get back to Bangalore, if you want to stay, please let me know"
for me and loki there is no job apart from taking care of the prince, so with heavy heart, we pulled him to the train..and there by landed in Bangalore safely.

This fairy tale is not from any movie or any fantasy..it is the engagement scene from the diaries of JM and Samatha.  Today my cute sister Samata's birthday..and what else can be a gift, narrating the story of seeing my cute sister for the first time, that too in my best friend's engagement.
Shruthi (Samatha) and JM...Nice Couple!
Happy Birthday Shruthi (Samatha)..Have a rocking time ahead..Wish you a wonderful moments and years ahead.!!!!!

Thursday, October 18, 2012

ವೆಂಕಿ ಸೌಮ್ಯ..ವಿವಾಹ ಸಂಭ್ರಮದ ಹತ್ತು ವರ್ಷ!!! - ಒಂದು ಪ್ರವಾಸದ ಕಥಾನಕ!

ನಮ್ಮ ಗ್ರೇಟ್ ಬಿ.ಓ.ಡಿ'ಸ್  ಸಂಘಕ್ಕೆ ಒಂದು ಚೈತನ್ಯದ ಚಿಲುಮೆ ನಮ್ಮ ವೆಂಕಿ..ನಾವು ಕೈಗೊಳ್ಳುವ ಪ್ರತಿ ಪ್ರವಾಸವೇ ಇರಲಿ, ಬೆಂಗಳೂರಿನಲ್ಲಿ ಹೊಡೆಯುವ ಸುತ್ತೆ ಇರಲಿ..ಅವನು ಇರಲೇ ಬೇಕಿತ್ತು. ಹೀಗೆ ಒಂದು ನೆನಪು ಸುಮಾರು 20 ವರ್ಷಗಳ ಹಿಂದಿನದು. ಸರಿಯಾಗಿ ಇಸವಿ ನೆನಪಿಲ್ಲ.ಆದ್ರೆ ನಾವೆಲ್ಲಾ ಕಾಲೇಜ್ನಲ್ಲಿ ಓದುತಿದ್ದ ಕಾಲ....

ಮತ್ತೆ ಕೋರಮಂಗಲದ ಹುಡುಗರು ಸದ್ದು ಮಾಡಿದರು..ಈ ಬಾರಿ ಮೈಸೂರಿನ ಕಡೆ ಹೋಗೋಣ ಅಂತ ನಿರ್ಧಾರವಾಯಿತು. ನಾನು, ಜೆ. ಎಂ. ಕೊರಮಂಗಲದಲ್ಲಿದ್ದ ಶಶಿ ಮನೆಗೆ ಹೋದೆವು..ವಾಹನ ಸಿದ್ಧವಾಗಿತ್ತು..ಹುಡುಗರೆಲ್ಲ ಜೋಶ್ ನಲ್ಲಿದ್ದರು..ನಮ್ಮ ಗುಂಪಿನಲ್ಲಿ ವೆಂಕಿ ಇಲ್ಲದ್ದು ಎಲ್ಲರಿಗು ಕೊರೆತೆ ಕಾಣುತಿತ್ತು..

ಎಲ್ಲರೂ "ವೆಂಕಿ ಎಲ್ಲಿ?"
"ವೆಂಕಿ ಬರೋಲ್ವಾ.?.".
"ವೆಂಕೀನ ಯಾಕೆ ಬಿಟ್ಟು ಬಂದ್ರಿ?"

ಹೀಗೆ ಪ್ರಶ್ನೆಗಳ ಸುರಿಮಳೆ ಸುರಿಯುತಿತ್ತು..

ನಾನು ಮತ್ತು ಜೆ. ಎಂ."ಶಶಿ..ನೋಡೋ ಆ ನನ್ಮಗ ಹೇಳದೆ ಕೇಳದೆ ರಾಮನಗರಕ್ಕೆ ಹೋಗಿದ್ದಾನೆ" ಅಂದೆವು

ನಮ್ಮ ಗುಂಪಿನಲ್ಲಿ ಶಶಿ ಒಂದು ತರಹ ಧರ್ಮರಾಯ ಇದ್ದ ಹಾಗೆ ಪ್ರತಿಯೊಂದು ಮಾತು ತೂಕ ಬದ್ಧವಾಗಿರುತಿತ್ತು..

"ಯೋಚನೆ ಬೇಡ....! ಹೇಗೂ ಮೈಸೂರು ರಸ್ತೆಯಲ್ಲೇ ಹೋಗುತ್ತಿದ್ದೇವೆ.ರಾಮನಗರದಲ್ಲಿನ ಅವನ ಮನೆಗೆ ಹೋಗಿ ಅವನನ್ನು ಕರೆದುಕೊಂಡು ಹೋಗೋಣ" ಅಂದ

ಎಲ್ಲರಿಗೂ ಸರಿ ಅನ್ನಿಸಿತು.ಆದ್ರೆ ಇದ್ದದ್ದು ಒಂದೇ ಭಯ.ವೆಂಕಿಯ ಅಪ್ಪನದು..!

ತುಂಬಾ ಸರಳ ಜೀವಿ ವೆಂಕಿಯ ಅಪ್ಪ..ಮಗನ ಏಳಿಗೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು..ಆ ರೀತಿಯಲ್ಲಿ ತಮ್ಮನ್ನು ಮರೆತು ಮಕ್ಕಳಿಗೆ ಸುಖ ಬಯಸಿದ್ದ ವ್ಯಕ್ತಿ  (ಸಾಮಾನ್ಯ ಎಲ್ಲ ತಂದೆ ತಾಯಿಗಳು ಈ ರೀತಿ ಇರುತ್ತಾರೆ ಅನ್ನುವುದು ಸರಳ ವಾಕ್ಯ) ..ಅವರದು ಒಂದು ರೀತಿ ಗಂಧ ತೇಯುವ ಹಾಗೆ..ತಾನು ಕರಗಿ ಮಕ್ಕಳಿಗೆ ಸುಗಂಧ ಪಸರಿಸಿದವರು - (ಅವರ ಬಗ್ಗೆ ನಮ್ಮ ಗೆಳೆತನದ ಪುಸ್ತಕದಲ್ಲಿ ಇನ್ನಷ್ಟು ಮಾಹಿತಿ ಬರೆಯುತ್ತೇನೆ)

ಸರಿ ಸುಮಾರು ಮಧ್ಯ ರಾತ್ರಿ ಒಂದೂವರೆ..ಅಥವಾ ಎರಡು ಘಂಟೆಯಾಗಿತ್ತು..ನಾನು, ಶಶಿ, ಜೆ.ಎಂ ಆ ಸರಿಹೊತ್ತಿನಲ್ಲಿ ವೆಂಕಿಯ ರಾಮನಗರದಲ್ಲಿನ ಮನೆಯನ್ನು ಬಡಿದೆವು...ಮೆಲ್ಲಗೆ ಬಾಗಿಲು ತೆರೆಯಿತು..ವೆಂಕಿಯ ಅಮ್ಮ ನಮ್ಮನ್ನೆಲ್ಲ ನೋಡಿ ಗಾಭರಿ .
"ಏನಪ್ಪಾ ಇಷ್ಟು ಹೊತ್ತಿನಲ್ಲಿ...!?"

ನಾನು "ಅಮ್ಮ..ನಾವೆಲ್ಲಾ ಮಡಿಕೇರಿಗೆ ಪ್ರವಾಸ ಹೋಗ್ತಾ ಇದ್ದೇವೆ.ವೆಂಕಿನ ಕರೆದುಕೊಂಡು ಹೋಗೋಣ ಅಂತ ಬಂದೆವು..ಅವನು ಬರೋಲ್ಲ ಅಂತ ಹೇಳಿ ರಾಮನಗರಕ್ಕೆ ಬಂದಿದ್ದ..ಅವನಿಲ್ಲದ ನಮಗೆ ಈ ಪ್ರವಾಸ ಮಜಾ ಇರೋಲ್ಲ.ದಯವಿಟ್ಟು ಕಳಿಸಿಕೊಡಿ"

"ಇಲ್ಲ ಮಗ..ರಾತ್ರಿ ಬಂದ....ಮಲಗಿದ್ದಾನೆ ಬೇಡ..ಮಗ..ನೀವೆಲ್ಲರೂ ಹೋಗಿ ಬನ್ನಿ..ಅವನು ಬೇಡ"

ಅಷ್ಟೊತ್ತಿಗೆ ಅವರಪ್ಪ ಎದ್ದರು "ಓಹ್ ಏನ್ ಸರ್ ಎಲ್ಲರು ಬಂದು ಬಿಟ್ಟಿದ್ದೀರ.ಏನು ಸಮಾಚಾರ?"

ನಾನು ಸ್ವಲ್ಪ ಧೈರ್ಯ ತಂದುಕೊಂಡು.."ಸರ್ ನಾವೆಲ್ಲಾ ಮಡಿಕೇರಿಗೆ ಹೋಗ್ತಾ ಇದ್ದೇವೆ..ಎಲ್ಲಾರಿಗೂ ವೆಂಕಿ ಬೇಕು...ದಯವಿಟ್ಟು ಕಳಿಸಿಕೊಡಿ."

ಅವರಪ್ಪ ಕೆಲ ನಿಮಿಷ ಸುಮ್ಮನ್ನಿದ್ದು ತನ್ನ ಮಗಳಿಗೆ "ತಾಯಿ ..ಮಗನನ್ನು ಎಬ್ಬಿಸು..ಅವನ "ಫ್ರೆಂಡ್ಸ್" ಬಂದ್ದಿದ್ದರೆ ಎಂದು ಹೇಳು"

ನಾವು ವೆಂಕಿಯ ಅಪ್ಪ, ಅಮ್ಮನಿಗೆ, ಅಕ್ಕ ತಂಗಿಗೆ ವಂದನೆಗಳನ್ನು ಹೇಳಿ ವೆಂಕಿಯ ಜೊತೆ ಹೊರಡಲು ಸಿದ್ಧವಾದೆವು..

ವೆಂಕಿಯ ಅಮ್ಮ ನಮ್ಮ ಬಳಿ  ಬಂದು "ಹುಷಾರು ಜೋಪಾನ ಹೋಗಿ ಬನ್ನಿ..ಮಗನನ್ನು ನೋಡಿಕೊಳ್ಳಿ "

ನಾನು "ಅಮ್ಮ ಏನು ಯೋಚನೆ ಮಾಡಬೇಡಿ ನಿಮ್ಮ ಮಗನ ಜವಾಭ್ದಾರಿ ನಂದು" (ಮಂಗನಂತೆ ಒಂದು ಹುಮ್ಮಸ್ಸಿನಲ್ಲಿ ಹೇಳಿದ್ದೆ - ನಾನೇನು ದೇವರೇ..ಇವತ್ತಿಗೂ ಆ ಘಟನೆ ನೆನೆದರೆ ನಗು ಬರುತ್ತೆ)

ಸರಿ ಎಲ್ಲರು ವಾಹನದೊಳಗೆ ಬಂದೆವು...ವೆಂಕಿ ಬಿಳಿ ಬಣ್ಣದ ಮೇಲೆ ಹೂವಿನ ಚಿತ್ರ ಇರುವ ಶರ್ಟ್, ಹಾಗು ಕಡು ನೀಲಿ ಬಣ್ಣದ ಜೀನ್ಸ್ ಹಾಕಿದ್ದ..ಅವನಿಗೆ ಸರಿಯಾಗಿ ಬಟ್ಟೆ ತೆಗೆದುಕೊಳ್ಳಲು ನಾವು ಸಮಯ ಕೊಡಲಿಲ್ಲ.....ಸಿಕ್ಕಿದ್ದನ್ನ ಹಾಕಿಕೊಂಡು ಬಂದಿದ್ದ...

ವಾಹನ ಚನ್ನಪಟ್ಟಣ ದಾಟಿತ್ತು..ನಾನು ಶಶಿ, ಜೆ.ಎಂ. ಮೂರು ಜನ ವೆಂಕಿಗೆ ತಲೆಗೆ, ಬೆನ್ನಿಗೆ ಸರಿಯಾಗಿ ಬಿಟ್ಟೆವು..

"ಮಗನೆ..ಟ್ರಿಪ್ ಗೆ ಬಾರೋ ಅಂದ್ರೆ.ಇಲ್ಲಿಗೆ ಬಂದು ಬಚ್ಚಿಟ್ಟುಕೊಂಡಿದ್ದೀಯ .."

ಎಲ್ಲರಿಗೂ ಸಮಾಧಾನ ಆದ ಮೇಲೆ...ಮತ್ತೆ ವಾಹನದಲ್ಲಿ ಜೋಶ್  ತುಂಬಿತು..

ಸರಿ ಸುಮಾರು ಐದು ಘಂಟೆಗೆ  ..ನಾಗರಹೊಳೆ ಅರಣ್ಯ ಪ್ರದೇಶದ ಚೆಕ್-ಪೋಸ್ಟ್ ಬಳಿ  ಬಂದೆವು..

ನಾಗರ ಹೊಳೆ ಚೆಕ್ ಪೋಸ್ಟ್ (ಚಿತ್ರಕೃಪೆ - ಅಂತರ್ಜಾಲ)
ಅಲ್ಲಿನ ಸಿಬ್ಬಂಧಿ ಆರು ಘಂಟೆಗೆ ಗೇಟ್ ತೆಗೆಯುವುದು ಎಂದು ಹೇಳಿದ್ರು...ಸರಿ..ಅಲ್ಲೇ ಕಾಲ ಕಳೆಯಲು ಓಡಾಡ ತೊಡಗಿದೆವು...ನಗೆ ಚಟಾಕಿಗಳು..ಒಬ್ಬರನ್ನೊಬ್ಬರು ಕಿಚಾಯಿಸುವುದು..ನಡೆದಿತ್ತು...

ಕಿರ್ರ್ರ್...ಚೆಕ್ ಪೋಸ್ಟ್ ಗೇಟ್ ಏತ -ಪೈತಾ  ಆಡುತ್ತ ತೆರೆದುಕೊಂಡಿತು...

ವಾಹನ ಭರ್  ಭರ ಅಂತ ಒಳಗೆ ನುಗ್ಗಿತು.. ಒಳಗೆ ಹೋದ ಮೇಲೆ..ಅಲ್ಲಿನ ಸಫಾರಿ ತಾಣಕ್ಕೆ ಬಂದೆವು..ಎಲ್ಲರು ದಬ ದಬ ಸಫಾರಿ ವಾಹನ ಹತ್ತಿದೆವು..

ಸಫಾರಿ ವಾಹನ (ಚಿತ್ರಕೃಪೆ - ಅಂತರ್ಜಾಲ)


ನಮಗೆ ಇದ್ದದ್ದು ಒಂದೇ ತವಕ...ಆದಷ್ಟು ಕಾಡು ಪ್ರಾಣಿಗಳನ್ನ(ನಮಗಿಂತ) ನೋಡ್ಬೇಕು..ವಾಹನದ ಚಿಕ್ಕ ಚಿಕ್ಕ ಕಿಟಕಿಯಲ್ಲಿ ಆದಷ್ಟು ಕತ್ತನ್ನು, ಕಣ್ಣನ್ನು ಹೊರಗೆ ಹಾಕಿ ಒಬ್ಬರಿಗೊಬ್ಬರು ಪೈಪೋಟಿ ಮಾಡುತ್ತಾ..ಮೈಯೆಲ್ಲ ಕಣ್ಣಾಗಿ ನೋಡುತಿದ್ದೆವು..!

ಸಫಾರಿ ಅಷ್ಟೊಂದು ರೋಮಾಂಚಕಾರಿಯಾಗಿರಲಿಲ್ಲ ..ಕಾಡೆಮ್ಮೆ, ಜಿಂಕೆ, ಮೊಲ, ಕಾಡು ಕೋಳಿ, ನರಿ, ಮಂಗಗಳು (ವಾಹನದಲ್ಲಿದ್ದವನ್ನು ಬಿಟ್ಟು) ಇವೆ ಕಂಡಿದ್ದು..ಇನ್ನೇನು ಸಫಾರಿ ಮುಗಿಯುವ ಹಂತ ತಲುಪಿತ್ತು..ತಣ್ಣಗೆ ಒಂದು ಬಿದಿರು ಮೆಳೆಯ  ಒಳಗಿಂದ ಒಂದು ಒಂಟಿ ಸಲಗ ಕಾಣಿಸಿಕೊಂಡಿತು...ಗಜರಾಜನನ್ನು ಕಂಡಿದ್ದು ಬಹಳ ಖುಷಿ ಕೊಟ್ಟಿತ್ತು..
ಗಜರಾಜ - (ಚಿತ್ರಕೃಪೆ - ಅಂತರ್ಜಾಲ)
ಸಫಾರಿಯಾ ನಂತರ..ವಾಹನ ಸೀದಾ ಇರ್ಪು ಜಲಪಾತದ ಕಡೆಗೆ ಹೊರಳಿತು..ಲಕ್ಷ್ಮಣ ತೀರ್ಥದ ಬಳಿ ವಾಹನ ನಿಂತಿತು..ಅಲ್ಲಿಂದ ನಮ್ಮ ಚಾರಣ ಮತ್ತೆ ಶುರು..ದಾರಿಯಲ್ಲಿ "ಸಂಭಾವಿತರಂತೆ" ಮೇಲು ದನಿಯಲ್ಲಿ ಮಾತಾಡುತ್ತ ಜಲಪಾತದಡಿಗೆ ಬಂದೆವು...
ಇರ್ಪು ಜಲಪಾತ..(ಚಿತ್ರಕೃಪೆ - ಅಂತರ್ಜಾಲ)
ನೀರಿಗೆ ಕಾಲಿಟ್ಟ ಕೂಡಲೇ ನಾನು ಕೂಗಿದೆ.."ಲೋ..ಇದು ಇರ್ಪು ಅಲ್ಲ ಬರ್ಫು...!"

ನಡುಗುತ್ತಲೇ..ಒಬ್ಬೊಬ್ಬರಾಗಿ ನೀರಿಗೆ ಇಳಿದು ಆಟವಾಡಿದೆವು...ವೆಂಕಿ ಮೊದಲು ಇಳಿಯಲು ನಿರಾಕರಿಸಿದ...ತಣ್ಣನೆ ನೀರು ಅವನು ಬೇಡ ಅಂದ...ನಂತರ ನಮ್ಮ ಆಟ ನೋಡಿ ತಾನೇ ಇಳಿದ..

ಸುಮಾರು ಹೊತ್ತು ನೀರಿನಲ್ಲಿ ಆಟವಾದ ಮೇಲೆ

ಅಣ್ಣಾವ್ರ "ಹೊಟ್ಟೇ ಚುರುಗುಟ್ ತೈತೆ ರಾಗಿ ಮುದ್ದೆ ಉಣ್ಣೋ ಹೊತ್ತು" ಹಾಡು ನೆನಪಿಗೆ ಬಂತು..

ನೀರಿನಿಂದ ಎದ್ದು ಮತ್ಸ್ಯ ದೇವತೆಗಳಂತೆ ಹೊರ ಬರುವಾಗ..... ವೆಂಕಿ..ಇರು ಜಲಪಾತವನ್ನು ಇನ್ನೊಮ್ಮೆ ನೋಡುತ್ತೀನಿ ಅಂತ..ಒಂದು ಬಂಡೆಯ ತುದಿಗೆ ನಿಂತ.ಅಚಾನಕ್ ಆ ಬಂಡೆಯ ಮೇಲೆ ತುಸು ಪಾಚಿ ಇತ್ತು..ತುಸು ಜಾರಿದ.ತಕ್ಷಣ..ಅಲ್ಲೇ ಇದ್ದ ನಾನು ಕೈ ಹಿಡಿಯಲು ಯತ್ನಿಸಿದೆ..ಅವನೇ ಸ್ವಲ್ಪ ಸಾವಧಾನವಾಗಿ ಚೇತರಿಸಿಕೊಂಡು ಮತ್ತೆ  ನಿಂತು ಕೊಂಡ.

ತಕ್ಷಣ..ನನ್ನ ಮನಸು ಕೆಲವು ಘಂಟೆಗಳ ಹಿಂದೆ ಓಡಿತು...ವೆಂಕಿಯ ಅಮ್ಮನಿಗೆ ಹೇಳಿದ ಮಾತು...("ಅಮ್ಮ ಏನು ಯೋಚನೆ ಮಾಡಬೇಡಿ ನಿಮ್ಮ ಮಗನ ಜವಾಭ್ದಾರಿ ನಂದು")..ತಿರುಪತಿ ವೆಂಕಟರಮಣನಿಗೆ, ಬೆಳವಾಡಿಯ ಗಣಪನಿಗೆ ಮನಸಲ್ಲೇ ವಂದಿಸುತ್ತಾ ನಮಸ್ಕಾರ ಮಾಡಿದೆ...ದೇವರು ದೊಡ್ಡವನು!

ವಾಹನ ನಿಲ್ಲಿಸಿದ ತಾಣದಲ್ಲಿ ಒಂದು ಚಿಕ್ಕ ಉಪಹಾರ ಗೃಹ ಇತ್ತು..ಸಿಕ್ಕಷ್ಟು, ಮಾಡಿದಷ್ಟು ತಿಂದು..ನಮ್ಮ ಪಯಣ...ಬಲಮುರಿ ಜಲಪಾತದ ಕಡೆ ತಿರುಗಿತು...ಬಲಮುರಿಯಲ್ಲಿ ಮತ್ತೆ ನೀರಿಗೆ ಬಿದ್ದೆವು..
ಬಲಮುರಿ ಜಲಪಾತ - (ಚಿತ್ರಕೃಪೆ - ಅಂತರ್ಜಾಲ)
ಇನ್ನೇನು ಸೂರ್ಯಾಸ್ತ ಸಮೀಪಿಸುತ್ತಿತ್ತು...ಗೆಳೆಯರೆಲ್ಲರೂ..ನಡೀರಿ..ನಡೀರಿ..ಕೆ.ಆರ್.ಎಸ್ ಗೆ ಹೋಗೋಣ ಅಂದ್ರು...

ವಾಹನ ಬೃಂದಾವನದ ಕಡೆ ತಿರುಗಿತು..

ಆ ಅಣೆಕಟ್ಟೆಯ ಸೇತುವೆಮೇಲೆ ನಿಂತು ಚಿತ್ರ ತೆಗೆಸಿಕೊಂಡದ್ದು.....ಜೆ. ಎಂ. ಸುಂದರವಾದ ಕೂಲಿಂಗ್ ಗ್ಲಾಸ್ ಹಾಕಿ ಕೊಂಡದ್ದು.....ಥೇಟ್ ಆ ಕಾಲದಲ್ಲಿ ಪ್ರಸಿದ್ಧವಾಗಿದ್ದ ಹಿಂದಿ ನಟ ಸುನೀಲ್ ಶೆಟ್ಟಿ...... ತರಹವೇ ಕಾಣಿಸಿದ್ದು.ಎಲ್ಲ ಸೊಗಸಾಗಿತ್ತು
ಕೆ.ಆರ್. ಎಸ್  ಆಣೆಕಟ್ಟು - (ಚಿತ್ರಕೃಪೆ - ಅಂತರ್ಜಾಲ)
ಬೃಂದಾವನದಲ್ಲಿ ಓಡಾಡಿ, ಸಂಗೀತ ಕಾರಂಜಿಯನ್ನ ನೋಡಿ..ನಲಿದೆವು...
ಸಂಗೀತ ಕಾರಂಜಿ - (ಚಿತ್ರಕೃಪೆ - ಅಂತರ್ಜಾಲ)
ಒಂದೇ ದಿನದಲ್ಲಿ ಒಂದು ಸಫಾರಿ, ಎರಡು ಜಲಪಾತ, ಒಂದು ವಿಶ್ವವಿಖ್ಯಾತ ಬೃಂದಾವನ..

ನಮ್ಮೆಲ್ಲ ಗೆಳೆತನ..ಸುಂದರವಾಗಿತ್ತು...

ರಾಮನಗರ ಬಂದಾಗ.ವೆಂಕಿ ಇಲ್ಲೇ ಇಳಿಯುತ್ತೇನೆ ಎಂದ.ನಾವು ಬಿಡದೆ.ಬೆಂಗಳೂರಿಗೆ ಕರೆದುಕೊಂಡು ಬಂದೆವು (ನನ್ನ ನೆನಪಿನಲ್ಲಿ)

ಸರಿ ಸುಮಾರು ಮಧ್ಯರಾತ್ರಿ ಕೋರಮಂಗಲದ ಶಶಿ ಮನೆ ತಲುಪಿ..ಅಲ್ಲೇ ರಾತ್ರಿ ಉಳಿದು..ಬೆಳಿಗ್ಗೆ ನಮ್ಮ ಗೂಡಿಗೆ ಸೇರಿಕೊಂಡೆವು..

ಇಂತಹ ಒಂದು ಅದ್ಭುತ ಪ್ರವಾಸದ ಕಥಾನಕ.ನಮ್ಮ ಗೆಳೆಯ ವೆಂಕಿ ವಿವಾಹ ಸಂಭ್ರಮದಲ್ಲಿ  ಹತ್ತು ವರ್ಷ ಕಳೆದ ಸವಿ ನೆನಪಿಗಾಗಿ..

ವೆಂಕಿ ಸೌಮ್ಯ..ವಿವಾಹ ದಿನದ ಶುಭಾಶಯಗಳು...ಹೊಸ ಮನೆ ಬಂತು..ಹೀಗೆ ನಿಮ್ಮ ಆಸೆ ಆಕಾಂಕ್ಷೆಗಳು ಎಲ್ಲವನ್ನು ಆ ಭಗವಂತ ಈಡೇರಿಸಲಿ  ಎಂದು ಹಾರೈಸುವ...ನಿಮ್ಮ ಗೆಳೆಯರ ವೃಂದ..

Tuesday, October 2, 2012

ನಮ್ಮ ಗೆಳೆಯ ಜೆ. ಎಂ ಗೆ ಹುಟ್ಟು ಹಬ್ಬದ ಶುಭಾಶಯಗಳು


ನಾ ಏನು ಬರೆಯಲಿ..ಹೇಗೆ ಶುಭಾಶಯಕೋರಲಿ..ಮನಸು ದ್ವಂದ್ವದ ಗೂಡಾಗಿತ್ತು..

ಗೆಳೆಯ (ಜೆ. ಎಂ) ಬಗ್ಗೆ ಬರೆಯಲು ಮನಸು ಕಾದಾಡುತಿತ್ತು..ಬರೆಯಲೇ ಬೇಡವೇ..ಯಾಕೆಂದರೆ ಈ ಗೆಳೆಯ ನಮ್ಮ ಗುಂಪಿಗೆ ಒಂದು ತರಹ ಚಮತ್ಕಾರ ಕೊಟ್ಟವನು..ಅವನ ಬಗ್ಗೆ ಬರೆಯಲು ಪುಟಗಳು ಸಾಲದು..ನಮ್ಮ ಗುಂಪಿನಲ್ಲಿ ಒಬ್ಬೊಬ್ಬರು ಕೂಡ ಹಾಗೆಯೇ..ವಿಸ್ಮಯವಾದ ಪ್ರತಿಭೆಗಳು...

...ಸರಿ ನಾನು ಯಾವತ್ತೂ ನನ್ನ ಮನಸಿಗೆ ಅನ್ನಿಸಿದ್ದನ್ನು ಮಾಡುವುದರಲ್ಲಿ ಕುಖ್ಯಾತಿ ಪಡೆದಿದ್ದೆ :-)

ಸುಧಾಮನಗರದಲ್ಲಿ ಜನಿಸಿದ ಈ ಜೀವದ ಗೆಳೆಯ..ನಂತರ ವಿಧ್ಯಾಪೀಠದ ಹತ್ತಿರ ಮನೆಮಾಡಿದಂದಿನಿಂದ ನಮಗೆ ಪರಿಚಿತ..ನಾನು ಅವನು ಏಳನೇ ತರಗತಿಯಿಂದ ಜೊತೆಯಲ್ಲೇ ಓದಿದೆವು..ನಂತರ ಎಂಟನೆ ತರಗತಿಗೆ ಶಶಿ, ವೆಂಕಿ ಜೊತೆಯಾದರು..ನಂತರ ಪಿ.ಯು.ಸಿ.ಯಿಂದ ಲೋಕಿ ಜೊತೆಯಾದ. ಇವರೆಲ್ಲರ ಸಂಗಡ ಕಳೆದ ಕ್ಷಣಗಳು ಅಮೋಘ..

ಈಗ ನಮ್ಮ ಕಥಾನಾಯಕ ಜೆ.ಎಂ ಬಗ್ಗೆ ಬರೆಯೋಣ ಅನ್ನಿಸಿತು..

"ಹೀರೋ ರೇಂಜರ್" ಇದು ಒಂದು ಹೀರೋ ಸೈಕಲ್ ನ ಒಂದು ಮಾಡೆಲ್  .ಇದನ್ನು ಬೆಂಗಳೊರಿನಲ್ಲಿ ಖರೀದಿ ಮಾಡಿದ ಮೊದಲಿಗರಲ್ಲಿ ಇವನು ಒಬ್ಬ (ಪ್ರಾಯಶಃ ಹತ್ತರೊಳಗೆ ಸ್ಥಾನ)..ಅಲ್ಲಿಂದ ಶುರುವಾಯಿತು..ಎಲ್ಲಿಗೆ ಹೋದರು ಸೈಕಲ್, ಏನೇ ಮಾಡಿದರು ಸೈಕಲ್ ಅನ್ನುವ ಹಾಗೆ ಆಯಿತು.

ಸುಮಾರು ೧೯೯೦ರ ಒಂದು ಮಳೆಗಾಲದ ರಾತ್ರಿ..ಗೆಳೆಯ ಶಶಿ ಮನೆ ಕೋರಮಂಗಲದಿಂದ ನಾನು ಮತ್ತು ಜೆ.ಎಂ ಇಬ್ಬರು ಸೈಕಲ್ ನಲ್ಲಿ ಬರುತ್ತಾ ಇದ್ದೆವು. ಸಣ್ಣಗೆ ಶುರುವಾದ ಮಳೆ..ನಂತರ ಜೋರಾಯಿತು..ಮೊದಲೇ ಸ್ವಲ್ಪ (ಹೆಚ್ಚೇ) ಕ್ರಾಕ್ ಮನೋಭಾವದ ಇಬ್ಬರೂ ಸೈಕಲ್ನಲ್ಲೆ ಮಳೆಯಲ್ಲೇ ಮನೆ ಸೇರೋದು ಅನ್ನುವ ಆಸೆಯಾಯಿತು. ಸರಿ ಸಮಾನ ಮನಸ್ಕರಾದ ನಾವು ಹೊರಟೆವು ಬರು ಬರುತ್ತಾ ಮಳೆ ಜೋರೇ ಆಯಿತು..ನಮ್ಮ ಒಳ ಉಡುಪು ಸೇರಿದಂತೆ ಎಲ್ಲವು ವದ್ದೆಮಯ..ನೀರು ಜಿನುಗುತ್ತಿತ್ತು ಅಡಿಯಿಂದ ಮುಡಿಯವರೆಗೆ!!

ಬಸವನಗುಡಿ  ರಸ್ತೆಯಲ್ಲಿ ಒಂದು ಬೇಕರಿ ಹತ್ತಿರ ನಿಂತೆವು...ಮಳೆಯಿಂದ ರಕ್ಷಣೆಗಾಗಿ ಸುಮಾರು ದ್ವಿಚಕ್ರವಾಹನ ಸವಾರರು ಅಲ್ಲಿಯೇ ನಿಂತು ಬಿಸಿ ಕಾಫಿ, ಬಾದಾಮಿ ಹಾಲು, ಚಹಾ ಹೀರುತ್ತಾ , ಸಿಗರೆಟ್ ಎಳೆಯುತ್ತ ನಿಂತಿದ್ದರು ..ಜಾಗ ಮಾಡಿಕೊಂಡು  ನಾವಿಬ್ಬರು ನುಗ್ಗಿದೆವು!

"ಏನ್ ಸರ್ ಏನ್ ಕೊಡಲಿ..ಬಿಸಿ ಬಾದಮಿ ಹಾಲು, ಕಾಫಿ, ಚಹಾ"
ಇಬ್ಬರೂ ಮುಖ ಮುಖ ನೋಡಿಕೊಂಡೆವು ..ಜೆ. ಎಂ ಸಣ್ಣದಾಗಿ ಮುಗುಳು ನಗೆ ಕೊಟ್ಟ
"ಸರ್ ಎರಡು chilled 7 UP  ಕೊಡಿ"
ಬೇಕರಿಯವ ನಮ್ಮಿಬ್ಬರನ್ನು ಅಡಿಯಿಂದ ಮುಡಿಯತನಕ ನೋಡಿದ..ಏನನ್ನೋ ಗೊಣಗಿದ...ನಂತರ..ಸೆವೆನ್ ಅಪ್ ಕೊಟ್ಟ
ಜೆ. ಎಂ.ಅದನ್ನ ಒಮ್ಮೆ ಮುಟ್ಟಿ..
"ಸರ್ full chilled ಕೊಡಿ"
ಬೇಕರಿಯವನು ಚೆನ್ನಾಗಿ ಮನಸಲ್ಲೇ "ಎಲ್ಲೋ ಕ್ರಾಕ್ ಮುಂಡೇವು...ಈ ಚಳಿಯಲ್ಲಿ chilled Seven up ಅಂತೆ ಮಂಗ ಮುಂಡೇವು" ಅಂತ ಬಯ್ದುಕೊಂಡು ಕೊಟ್ಟ!!
ಇಬ್ಬರೂ ತಣ್ಣಗಿರುವ ಸೆವೆನ್ ಅಪ್ ಅನ್ನು ತೆಗೆದುಕೊಂಡೆವು...ಆ ಚಳಿಯಲ್ಲಿ ತುಂಬಾ ತಣ್ಣಗಿದ್ದದರಿಂದ  ಅದನ್ನು ಹಿಡ್ಕೊಳೋಕೆ ಆಗ್ತಾ ಇರ್ಲಿಲ್ಲ..ಬೇಕರಿಯವನು ನಮ್ಮ ಕಡೆನೇ ನೋಡ್ತಾ ಇದ್ದಾ..ಮರ್ಯಾದೆ ಪ್ರಶ್ನೆ..ಕಷ್ಟ ಪಟ್ಟು ಆ ಚಳಿಯಲ್ಲೇ ನಡುಗಿ ನಡುಗಿ ಒಂದೊಂದೇ ಗುಟುಕು ಕುಡಿಯುತ್ತ...ಮುಗಿದರೆ ಸಾಕಪ್ಪ ಅಂತ ಕುಡಿದು ಮುಗಿಸಿದೆವು..

ಒಂದು ಅದ್ಭುತ ವಿಲಕ್ಷಣದ ಅನುಭವ ಅದು..ಕಾರಣ..ಅಂದುಕೊಂಡಿದನ್ನ  ಮಾಡುವ ವಯಸ್ಸಿನ ಚಪಲತೆ ಅದು..

ಇದನ್ನ ಇವತ್ತಿಗೂ ಕೂಡ ನೆನೆದು ನೆನೆದು ಮನಸು..ಕಣ್ಣು ವದ್ದೆಯಾಗುವಷ್ಟು ನಗುತ್ತೇವೆ..

ಜೆ. ಎಂ ಸತೀಶ್ ಕುಮಾರ್

ಇಂತಹ ಒಂದು ಅದ್ಭುತ ನೆನಪಿಗೆ ಕಾರಣನಾದ ನಮ್ಮ ಗೆಳೆಯ ಜೆ. ಎಂ ಗೆ ಹುಟ್ಟು ಹಬ್ಬದ ಶುಭಾಶಯಗಳು!!!

Monday, September 17, 2012

ಬ್ಲಾಗ್ ಲೋಕದ ಮೂರು ತಾರೆಗಳ ಜೊತೆಯಲ್ಲಿ - 16.09.2012


"ತುಲಾ ಮಾಸೇತು ಕಾವೇರಿ
ಸರ್ವಾತೀರ್ಥಾಶ್ರಿತಾ  ನದಿ
ಪಂಚ ಪಾತಕ ಸಂಹರ್ತ್ರಿ ವಾಜಿನೇದ ಫಲಪ್ರದ
ಭಕ್ತಾನುಕಂಪೇ ಮುನಿಭಾಗ್ಯ  ಲಕ್ಷ್ಮಿ
ನಿತ್ಯೆ  ಜಗನ್ಮಂಗಳದಾನ  ಶೀಲೇ
ನಿರಂಜನೆ  ದಕ್ಷಿಣದೇಶ  ಗಂಗೆ
ಕಾವೇರಿ ಕಾವೇರಿ ಮಮ ಪ್ರಸೀದ "

ಎರಡನೇ ಸಲ...ಮೂರನೆಸಲ..ಇದೇ  ಶ್ಲೋಕ...ಕಣ್ಣು ಬಿಟ್ಟೆ...

ನನ್ನ ಜಂಗಮ ಘಂಟೆ (ಮೊಬೈಲ್) ಈ ಶ್ಲೋಕವನ್ನು ಅರುಹುತಿತ್ತು..(ಶರಪಂಜರ ಚಿತ್ರದ ಕೊಡಗಿನ ಕಾವೇರಿ ಹಾಡಲ್ಲಿ ಬರುವ ಶ್ಲೋಕ)..

ಕಣ್ಣು ಬಿಟ್ಟೆ ನನ್ನ ಅಕ್ಕನ ಕರೆ "ಇರು ವಿಜಯ ಮಾತಾಡ್ತಾನಂತೆ"
"ಕಾರ್ಯಕ್ರಮ ಬದಲಾವಣೆ..ಮೈಸೂರಿಗೆ ಹೋಗೋಣ..ಒಂದು ತುರ್ತು ಕೆಲಸ ಇದೆ"
ಇಲ್ಲ ಅನ್ನುವ ಮಾತೆ ಬರೋಲ್ಲ .."ಸರಿ" ಅಂದೇ..

ಮನಸು ಹಿಂದಿನ ದಿನದ ರಾತ್ರಿಗೆ ಓಡಿತು..
"ಅಣ್ಣಯ್ಯ ನಾಳೆ ನಿಮ್ಮ ಸಂಸ್ಥಾನಕ್ಕೆ ಬರುತಿದ್ದೇನೆ..ಸಿಗ್ತೀರ?" ಸುಲತಾ ಅವರ ಸಂದೇಶ ಬಂದಿದ್ಡ್ತುಫೇಸ್ ಬುಕ್ಕಿನಲ್ಲಿ..
"ಹಾ ಇರ್ತೇನೆ ತಂಗ್ಯವ್ವ..ನೀವು ನಿಮ್ಮ ಕೆಲಸ ಎಲ್ಲ ಮುಗಿದ ಮೇಲೆ ಕರೆಮಾಡಿ ಸಿಗುತ್ತೇನೆ" ಎಂದಿದ್ದೆ

ಕಾರು ಮೈಸೂರು ರಸ್ತೆಯಲ್ಲಿ ಆರಾಮಾಗಿ ಚಲಿಸುತ್ತಿತ್ತು..ಮದ್ದೂರ್ ಹತ್ತಿರ ನಿಂತಾಗ..ಬಾಲು ಸರ್ ಗೆ ಕರೆ ಮಾಡಿದೆ..
"ಹೇಳಿ ಶ್ರೀಕಾಂತ್ ಸರ್.." ಬಾಲು ಸರ್ ಅವರ ಸುಲಲಿತ ಮಧುರ ನುಡಿ ಆ ಕಡೆಯಿಂದ ಬಂತು
"ಸರ್ ಮೈಸೂರಿಗೆ ಬರ್ತಾ ಇದ್ದೇನೆ..ಅಣ್ಣನಿಗೆ ಅವನ client office ನಲ್ಲಿ ಒಂದೆರಡು ಘಂಟೆಗಳ ಒಂದು ತುರ್ತು ಕಾರ್ಯ ಇದೆ ..ಅದು ಮುಗಿದ ಮೇಲೆ ನೀವು ಸಿಗುವ ಹಾಗಿದ್ದರೆ ಒಮ್ಮೆ ದರ್ಶನ ಮಾಡುತ್ತೇನೆ.."
"ಓಹ್  ಖಂಡಿತ ಬನ್ನಿ ಸರ್..ಇರ್ತೇನೆ.."

ಹಾಗೆಯೇ ಸುಲತಾ, ಮತ್ತು ಜ್ಯೋತಿ ಇಬ್ಬರಿಗೂ ಸಂದೇಶ ಕಲಿಸಿದೆ.."ತುರ್ತು ಕೆಲಸದ ಮೇಲೆ ಮೈಸೂರಿಗೆ  ಹೋಗುತ್ತಿದ್ದೇನೆ ಸಂಜೆಯ ಹೊತ್ತಿಗೆ ಬರುತ್ತೇನೆ..ಇರುವುದಾದರೆ ಸಿಗುತ್ತೇನೆ .."
ಮರು ಸಂದೇಶ ಬಂತು.."ನಿಮಗಾಗಿ ಕಾಯುತ್ತೇವೆ"
ಮನಸು ಬಾನಾಡಿಯಾ ಹಾಗೆ ಹಾರಿತು..ಇಂದು ಮೂರು ಜನ ಸನ್ಮಿತ್ರರು ಸಿಗುತ್ತಾರೆ...
ಬ್ರಹ್ಮನು ಕೂಡ ಬೆರಗಾಗಬೇಕು..ತಾನೇ ಸೃಷ್ಟಿಸಿದ ರಕ್ತ ಸಂಬಂಧಕ್ಕಿಂತ "ಬ್ಲಾಗ್ ಲೋಕದ ಸಂಬಂಧ" ದೊಡ್ಡದು  ಎಂದು..

ಮೈಸೂರಿನಲ್ಲಿ ಬಂದ ಕಾರ್ಯವಾದಮೇಲೆ ಮತ್ತೆ ಕರೆ ಮಾಡಿದೆ..ಬಾಲು  ಸರ್ ಮನೆಗೆ ಹೋಗಲು ಮಾರ್ಗದರ್ಶನವಾಯಿತು..

ಅವರ ಎಂದಿನ ನಗುಮೊಗದ ದರ್ಶನವಾಯಿತು..ಉಭಯ ಕುಶಲೋಪರಿ ಸಾಂಪ್ರತವಾದ ಮೇಲೆ..ಬಾದಾಮಿ ಹಾಲು, ಬಿಸ್ಕುಟ್ ಮಧ್ಯೆ ಮಾತಿನ ಲಹರಿ ಮುಂದುವರೆಯಿತು..
ಬ್ಲಾಗ್-ಮಂಡಲ ಛಾಯಾ ಚಿತ್ರಗಳಿಗೆ ಒಕ್ಕಣೆ ಹರಿದು ಬರುವ ಸ್ಥಳ..

ಬಾಲು ಸರ್ ಕುಟುಂಬ

ಜೊತೆಯಲ್ಲಿ ನಗುವಿನಲ್ಲೇ

ನನ್ನ ಅಣ್ಣ, ತಮ್ಮ ಇವರೆನ್ನಲ್ಲ ನೋಡಿ ಖುಷಿ ಪಟ್ಟರು..

ಹಾಗೆಯೇ ಬಾಲು ಸರ್ ಅವರ ನಗೆತುಂಬಿದ ಸಂಸಾರವನ್ನು ಪರಿಚಯಮಾಡಿಕೊಟ್ಟರು..
ಅರ್ಧಘಂಟೆ ಅರ್ಧನಿಮಿಷದ ಹಾಗೆ  ಸರಿಯಿತು..ಅವರಿಂದ ಅಪ್ಪಣೆಪಡೆದು ಹೊರಟೆವು..ಬೆಂಗಳೂರಿನ ಕಡೆಗೆ..

ಬೆಂಗಳೂರಿನಲ್ಲಿ ಗೂಡನ್ನು ಸೇರಿದ ತಕ್ಷಣ.. ಸುಲತಾ, ಮತ್ತು ಜ್ಯೋತಿ ಇಬ್ಬರಿಗೂ ಸಂದೇಶ ಕಲಿಸಿದೆ.."ಮರಳಿ ಗೂಡಿಗೆ"
ಉತ್ತರ ಬಂತು..."ನಾವು ತವರಿಗೆ ಬರ್ತೇವೆ"

ಸುಮಾರು ಏಳು ಗಂಟೆಗೆ ಜ್ಯೋತಿ ಕುಟುಂಬ ಹಾಗು ಸುಲತಾ ಬಂದರು...ಮಾತು ಕಡಿಮೆ..ನಗು ಜಾಸ್ತಿ...ಸುಮಾರು ಅರ್ಧ ಮುಕ್ಕಾಲು ಘಂಟೆ ಜ್ಯೋತಿಯ ಮಾತಿಗಿಂತ ವೇಗವಾಗಿ..ಸುಲತಾ ಅವರ ನಗುವಿಗಿಂತ ಮಧುರವಾಗಿ ಕಳೆಯಿತು..
ಜ್ಯೋತಿ ಮತ್ತು ಮಕ್ಕಳು, ಸುಲತಾ, ಮತ್ತು "ಶ್ರೀವಿತಲ್" 

50:50  ಇಬ್ಬರು ನಗೆ..ಇಬ್ಬರು ಪ್ರೇಕ್ಷಕರು..
ಅವರನ್ನು ಬೀಳ್ಕೊಟ್ಟು ಭಾನುವಾರಕ್ಕೆ ಪೂರ್ಣವಿರಾಮ ಹಾಕಿದ ಮೇಲೆ ಮನಸು ಜೇನಿನ ಗೂಡಾಗಿತ್ತು...

ಹೊರಗೆ ಬಂದು ಅಂಬರವನ್ನು ದಿಟ್ಟಿಸಿ ನೋಡಿದೆ..
ಇದು ಎಂಥಹ ಲೋಕವಯ್ಯ...
ಅಂದು ಅಮಾವಾಸ್ಯೆಯಾಗಿದ್ದರೂ...
ಬ್ಲಾಗ್ ಲೋಕದ ತಾರೆಗಳನ್ನ ನೋಡಿದ ಮೇಲೆ..
ಚಂದ್ರು ಇನ್ನೂ ಮಂಕಾಗಿ ಬಿಟ್ಟ
ನಕ್ಷತ್ರಗಳು ಕೂಡ ಮೋಡದ ಹಿಂದೆ ಸರಿದು...
ಭೂಮಿಯಿಂದ ಮರೆಯಾಗಿ ಬಿಟ್ಟವು..

Wednesday, August 29, 2012

ಲೋಕಿಯ ಜನುಮದಿನಕ್ಕೆ ಅರ್ಪಿತ - ಈ ಪ್ರವಾಸ ಕಥನ (1996)


ಈ ಪ್ರವಾಸ ಕಥನ..ನಮ್ಮ ಗೆಳೆಯ ಲೋಕಿಯ ಜನುಮದಿನಕ್ಕೆ ಅರ್ಪಿತ...ಅವನು ಈ ಪ್ರವಾಸಕ್ಕೆ ಬರಲಿಲ್ಲ..ಅ ನೆನಪನ್ನು ಅವನಿಗೆ ಕೊಡುವ ಒಂದು ಪ್ರಯತ್ನ....ಹಾಗು ಅವನ ಹುಟ್ಟು ಹಬ್ಬಕ್ಕೆ ಶುಭಾಶಯಗಳು ಕೋರುವ ಒಂದು ವಿಭಿನ್ನ ಪ್ರಯತ್ನ...

ಶಶಿ ಮನೆ ಕೋರಮಂಗಲದಲ್ಲಿ...ಅವನ ಮನೆಯ ಸುತ್ತಲು ಅನೇಕ ಸಮಾನ ಮನಸ್ಕ, ವಯಸ್ಕ ಹುಡುಗರಿದ್ದರು. ಒಮ್ಮೆ ಹೀಗೆ ೧೯೯೬ ಅಕ್ಟೋಬರ್ ಕೊನೆಯಲ್ಲಿ ಒಂದು ಪ್ರವಾಸ ಹೋಗುವ ನಿರ್ಧಾರ ಮಾಡಿದರು..ಅವರೆಲ್ಲ ತನ್ನ ಸ್ನೇಹಿತರನ್ನು ಕರೆತರಲು ಶಶಿಗೆ ದಂಬಾಲು ಬಿದ್ದಿದ್ದರು.  ಸರಿ ವೆಂಕಿ, ಜೆ. ಎಂ ಹಾಗು ನಾನು ಜೊತೆಗೆ ಸೇರಿದೆವು.

ನರೇಂದ್ರ, ಗಿರೀಶ, ಆನಂದ್, ಮಹೇಶ್, ರಾಕೇಶ್...ಹೀಗೆ ಸುಮಾರು ಹನ್ನೆರಡು ಹದಿಮೂರು ಹುಡುಗರ ಒಂದು ತಂಡ ಸಿದ್ಧವಾಯಿತು..ಎಲ್ಲಿಗೆ ಹೋಗೋದು ಗೊತ್ತಿಲ್ಲ, ಏನು ಮಾಡೋದು ಪ್ಲಾನ್ ಇಲ್ಲ..ಮನೆಯಲ್ಲಿ ಎಲ್ಲರು ಶಿವಮೊಗ್ಗ ಸುತ್ತ ಮುತ್ತ ಹೋಗಿ ಬರ್ತೇವೆ ಅಂತ ಹೇಳಿದ್ದೆವು..ಯಾಣ, ಜೋಗ ಅಂತೆಲ್ಲ ಅನಿರ್ಧಿಷ್ಟ, ಅಸ್ಪಷ್ಟ ಮಾತುಗಳಲ್ಲಿ ಹೇಳಿದ್ದೆವು..ಒಂದು ಸಂತಸದ ಸಂಗತಿ ಎಂದರೆ ಒಳ್ಳೆಯ ಹುಡುಗರು, ಯಾವುದೇ ದುರಭ್ಯಾಸಗಳು ಇಲ್ಲ ಎನ್ನುವ ಒಂದು ಸುಂದರ ಜಗತ್ತನು ನಾವೆಲ್ಲಾ ಕಟ್ಟಿ ಕೊಂಡಿದ್ದೆವು..ಹಾಗಾಗಿ ಎಲ್ಲರ ಮನೆಯವರು ನಾವು ಬಾಡಿಗೆಗೆ ತಂದ ಮೆಟಡೋರ್ ಗಾಡಿಗೆ ಪೂಜೆ ಸಲಿಸುವ ಸಮಯಕ್ಕೆ ಎಲ್ಲರು ಬಂದು ಶುಭ ಹಾರೈಸಿದರು.
ಚಿತ್ರ ಕೃಪೆ : ಅಂತರ್ಜಾಲ
ತುಮಕೂರು ರಸ್ತೆಯಲ್ಲಿ ಬರ್ರನೆ ಸಾಗಿತು ವಾಹನ...ಎಲ್ಲರಲ್ಲೂ ಸಂತಸ..ಕೆಲವರು ಓದು ಮುಗಿಸಿ ಕೆಲಸಕ್ಕೆ ಸೇರಿದ್ದರು, ಕೆಲವರು ಇನ್ನು ಓದುತ್ತಲಿದ್ದರು..ಆದ್ರೆ ಯಾರಲ್ಲೂ ಮೇಲು ಕೀಳು ಭಾವ ಇರಲಿಲ್ಲ..ಅದೇ ಅಲ್ಲವೇ ಸ್ನೇಹಕ್ಕೆ ಅಡಿಪಾಯ...!

ಸೀದಾ ಜೋಗ ಜಲಪಾತದ ಬಳಿ ನಿಂತಾಗ ಎಲ್ಲರು ಕಣ್ಣನ್ನು ಉಜ್ಜಿಕೊಂಡು...ಒಹ್ ಜೋಗ..ಎಂದು ಕಿರುಚಿದರು...ಬಟ್ಟೆ ಬರೆ, ತಿಂಡಿ ತಿನಿಸು,ಸಾಬೂನು, ಪೇಸ್ಟ್, ಬ್ರಶ್ ಹಾಗು  ಹಣದ ಪರ್ಸ್ ತೆಗೆದುಕೊಂಡು ಗಾಡಿಯಿಂದ ಸೀದಾ ಜಲಪಾತದ ಬುಡಕ್ಕೆ ಲಗ್ಗೆ ಇಟ್ಟೆವು..ಸುಮಾರು ಒಂದುವರೆ ಕಿ.ಮಿ. ಗಳಷ್ಟು ಆಳಕ್ಕೆ ಇಳಿಯಬೇಕಿತ್ತು.(ಇತ್ತೀಚಿಗಷ್ಟೇ ಕೆಳಗಿನ ತನಕ ಸಿಮೆಂಟಿನ ಮೆಟ್ಟಿಲು ಮಾಡಿದ್ದಾರೆ).ಗಿಡ ಗಂಟಿಗಳನ್ನು ಹಿಡಿದು ಕೆಳಗೆ ಇಳಿದೆವು...
ಚಿತ್ರ ಕೃಪೆ : ಅಂತರ್ಜಾಲ
ಅಚ್ಚುಕಟ್ಟಾಗಿ ಸ್ನಾನ, ತಿಂಡಿ ಎಲ್ಲ ಆಯಿತು...ಜಲಪಾತದ ಅಮೋಘ ದರ್ಶನ, ನೀರಲ್ಲಿ ಒದ್ದಾಡಿದ್ದು, ಹೊಟ್ಟೆ ತುಂಬಾ ತಿಂಡಿ, ಹರಟೆ ಮಾತು, ಕೀಟಲೆ ಎಲ್ಲವು ಬಹು ಸಮಾಧಾನ ತಂದಿತು..ಸರಿ ಎಲ್ಲರು ಮೇಲಕ್ಕೆ ಪ್ರಯಾಸಪಟ್ಟು ಬಂದೆವು..

ಮುಂದೇನು ಎನ್ನುವ ಯೋಚನೆ ಕಾಡಿತು...ಗಿರೀಶ್ ಹೇಳಿದ..ಹೇ ಉಂಚಳ್ಳಿ ಜಲಪಾತ ಇಲ್ಲೇ ಹತ್ತಿರ ಇದೆಯಂತೆ...ಅಲ್ಲಿಗೆ ಹೋಗೋಣ..ಬೇರೆ ಮಾತೆ ಇಲ್ಲ..ಗಾಡಿ ಹೊರಟಿತು..

ಮಧ್ಯಾಹ್ನ ದಾಟಿತ್ತು...ಡ್ರೈವರ್ ಹೆಸರು ಕುಟ್ಟಿ (ನರೇಂದ್ರ ಕರೆಯುತ್ತಿದ್ದ ರೀತಿ)..ಗಾಡಿ ನಿಲ್ಲಿಸಿದರು..ಅಲ್ಲಿದ್ದ ಸ್ಥಳೀಯರು..ಉಂಚಳ್ಳಿ ಜಲಪಾತಕ್ಕೆ ಹೋಗುವ ಮಾರ್ಗ ತೋರಿಸಿದರು..ಮಳೆ ಬರುತಿತ್ತು...ಮಾರ್ಗ ಮಣ್ಣಿನ ಇಳಿಜಾರು ರಸ್ತೆಯಾಗಿತ್ತು..ಗಾಡಿ ಅಲ್ಲೀಗೆ ಹೋಗುವ ಸಾಧ್ಯತೆ ಕಡಿಮೆ ಇದ್ದದರಿಂದ ನಾವೆಲ್ಲಾ ನಡೆದೆ ಹೊರಟೆವು..

ಜಲಪಾತದ ದರ್ಶನ ಸರಿಯಾಗಿ ಆಗಿರಲಿಲ್ಲ..ಕಾರಣ, ಮಳೆ, ಇಬ್ಬನಿ, ಮಂಜು ಎಲ್ಲವು ಸೇರಿತ್ತು..ಅಚಾನಕ್ಕಾಗಿ ಸೂರ್ಯ ತನ್ನ ಹಲ್ಲನ್ನು ತೋರಿಸಿ ಸ್ವಲ್ಪ ಬಿಸಿಲನ್ನು ತೋರಿದ..ಮಬ್ಬು ಮೆಲ್ಲನೆ ಸರಿಯಿತು...
ಚಿತ್ರ ಕೃಪೆ : ಅಂತರ್ಜಾಲ
"ಶಿಟ್ ಮಾನ್ ವಾಟ್ ಅ ಫಾಲ್ಸ್..." ಶಶಿ ಉದ್ಗಾರ ತೆಗೆದ...ಎಲ್ಲರು ಓಡಿ ಬಂದೆವು...ಜಲಪಾತದ ಸೌಂದರ್ಯ ಅಬ್ಬ...ಮಾತಿನಲ್ಲಿ ಹೇಳಲಾರೆನು...ಗೀತೆಯಲ್ಲಿ ಬರೆಯಲಾರೆನು.....ಅದ್ಭುತ ಜಲಪಾತ ನೋಡಿದ ಕಣ್ಣುಗಳು  ಪಾವನವಾಯಿತು...ಸುಮಾರು ಹೊತ್ತು ಅಲ್ಲೇ ಕಳೆದೆವು...ಜಲಪಾತದ ಬುಡಕ್ಕೆ ಹೋಗುವ ಸಾಹಸಕ್ಕೆ ಇಳಿಯೋಣ ಅನ್ನಿಸಿತು..ಆದ್ರೆ ಅಲ್ಲಿದ್ದ ಸ್ಥಳೀಯರು ಎಚ್ಚರಿಕೆ ಕೊಟ್ಟರು..ಮಣ್ಣು ಜಾರುತ್ತಿತ್ತು..ಮಳೆ, ಇಬ್ಬನಿ...ಹಠ ಮಾಡುವುದು ಬೇಡ ಎಂದು ಕಣ್ಣಲ್ಲೇ ತುಂಬಿಕೊಳ್ಳುವ ಪ್ರಯತ್ನ ಪಟ್ಟೆವು...ಅತಿ ಸುಂದರ ಜಲಪಾತ "ಉಂಚಳ್ಳಿ/ಕೆಪ್ಪ ಜೋಗ/ಲಶಿಂಗ್ಟನ್ ಜಲಪಾತ"

ಮುಂದ...ಈ ಪ್ರಶ್ನೆ ಎಲ್ಲರನ್ನು ಕಾಡಿತು...

ಸಿರ್ಸಿಗೆ ಹೋಗೋದು ಎನ್ನುವುದು ಗಾಡಿಯಲ್ಲಿ ನಿರ್ಧಾರ ವಾಯಿತು...ಸಿರ್ಸಿಗೆ ಬಂದಾಗಲೇ ರಾತ್ರಿ ಬಹು ಹೊತ್ತಾಗಿತ್ತು...ವೆಂಕಿಗೆ ಮಾರನೆ ದಿನ ಸರ್ಕಾರಿ ಕೆಲಸಕ್ಕೆ ಇಂಟರ್ವ್ಯೂ ಗೆ ಹೋಗಬೇಕಿತ್ತು..ಅವನು ಸಿರ್ಸಿಯಿಂದ ಹೊರಟೆ ಬಿಟ್ಟ...ಬೆಂಗಳೂರಿಗೆ...

ಮಿಕ್ಕವರೆಲ್ಲರೂ ಅಲ್ಲಿಯೇ ಒಂದು ಹೋಟೆಲ್ನಲ್ಲಿ ರಾತ್ರಿ ಕಳೆದು...ಬೆಳಿಗ್ಗೆ ತಿಂಡಿ ಆದ ಮೇಲೆ ಏನು..? ಪ್ರಶ್ನೆ ಶುರುವಾಯಿತು..

ಮತ್ತೆ ಗಿರೀಶ್ ಆಪದ್ಭಾಂಧವನಾದ..."ಯಾಣ"ಕ್ಕೆ ಹೋಗೋಣ...ಅಲ್ಲಿಯೇ ಹೋಗುವ ಮಾರ್ಗ ಕೇಳಿದಾಗ ರಸ್ತೆ ಹೇಳಿದರು...ಯಾಣಕ್ಕೆ ಮೊದಲು ಮುಖ್ಯ ಹೆದ್ದಾರಿಯಿಂದ ನಡೆಯಬೇಕಿತ್ತು (ಸುಮಾರು ೧೨-೧೬ ಕಿ.ಮಿ)...ಆದ್ರೆ ನಾವು ಹೋಗುವ ಸ್ವಲ್ಪ ವರ್ಷಗಳ ಹಿಂದೆ..ಯಾಣದ ತನಕ ರಸ್ತೆ ಮಾಡಿದ್ದರು..ಕೇವಲ ಒಂದೆರಡು ಕಿ.ಮಿ.ಗಳು ಮಾತ್ರ ನಡೆಯಬೇಕಿತ್ತು..

ಯಾಣದ ಬಗ್ಗೆ ಒಂದು ಮಾತು..ಈ ಮಹಾನ್ ತಾಣವನ್ನು ಮೊದಲು ಚಿತ್ರದಲ್ಲಿ ತೋರಿಸಿದ್ದು ಆಗಂತುಕ ಎನ್ನುವ ಕನ್ನಡ ಸಿನಿಮಾದಲ್ಲಿ..ದೇವರಾಜ್, ವನಿತಾವಾಸು, ಸುರೇಶ ಹೆಬ್ಳಿಕರ್, ವಾಸುದೇವರಾವ್ ನಟಿಸಿದ್ದ ಈ ಚಿತ್ರ ತುಂಬಾ ಸೊಗಸಾಗಿತ್ತು...ದೇವರಾಜ್ ಗಡುಸು ಮುಖ, ವನಿತಾವಾಸು ಸುಂದರ ಮುಖ, ಯಾಣದ ಚೆಲುವು ಚಿತ್ರವನ್ನ ತುಂಬಿತ್ತು..
ನಂತರ ನಮ್ಮೂರ ಮಂದಾರ ಹೂವೆ ಚಿತ್ರದಲ್ಲಿ ತೋರಿಸಿದ ಮೇಲೆ ಎಲ್ಲರಿಗು ಚಿರಪರಿಚಿತ ತಾಣವಾಯಿತು
ಚಿತ್ರ ಕೃಪೆ : ಅಂತರ್ಜಾಲ
ಎಲ್ಲರು ಗಾಡಿಯಿಂದ ಇಳಿದು ಯಾಣದ ದರುಶನ ಮಾಡಿದೆವು...ಅಮೋಘ ಶಿಖರಗಳು...ಜ್ವಾಲಾಮುಖಿಯಿಂದ ಸಿಡಿದ ಲಾವಾರಸ ಹೀಗೆ ಶಿಖರವಾಯಿತು ಅಂತ ಇತಿಹಾಸ...ಮೋಹಿನಿ ಭಸ್ಮಾಸುರ ಕತೆ ಇದು ಎಂದು ಪೌರಾಣಿಕ ಕತೆಗಳು ಸಾರುತಿದ್ದವು..ಏನೇ ಅಗಲಿ ಇದರ ಸೊಗಸು ಬಲು ರೋಮಾಂಚನ ಮಾಡಿದವು...

ಎಲ್ಲಿಗೆ ಹೋಗುವುದು ಎನ್ನುವ ಮಾತು ನಡೆಯುತ್ತಿದ್ದಾಗ ನಾನು ಸಮುದ್ರ ನೋಡೇ ಇರಲಿಲ್ಲ..ಇಲ್ಲಿಂದ ಗೋಕರ್ಣ ಹತ್ತಿರ ಎಂದು ಗಿರೀಶ ಹೇಳಿದ..ಹೇಗಾದರೂ ಸರಿ ಸಮುದ್ರದ ಅಲೆಗಳನ್ನ ಒಮ್ಮೆ ಮುಟ್ಟಿ ನೋಡುವ ಬಯಕೆ ಕಾಡಿತ್ತು..ಗಿರೀಶನಿಗೆ ಹೇಳಿದೆ "ಹೇಗಾದರೂ ಸರಿ ಗೋಕರ್ಣಕ್ಕೆ ಹೋಗೋಣ ಎಂದು" ಎಲ್ಲರು ಸಮ್ಮತಿ ಕೊಟ್ಟರು...

ಸರಿ ಗಾದೆ ಮಾತನ್ನು ನಿಜ ಮಾಡಲು ಹೊರಟೆವು..."ಕೈಯಲ್ಲಿ ರೊಕ್ಕ ಇದ್ದರೆ ಗೋಕರ್ಣ..ಮೈಯಲ್ಲಿ ಸೋಕ್ಕಿದ್ದರೆ ಯಾಣ"

ಇಷ್ಟರಲ್ಲಿ ಒಂದು ಅದ್ಭುತ ಘಟನೆ ನಡೆಯಿತು...ಯಾಣದಿಂದ ಹೊರಟೆವು..ಕಾಡಿನ ದಾರಿ ಮಧ್ಯದಲ್ಲಿ ಒಂದು ವ್ಯಕ್ತಿ ಬಿಳಿ ಅಂಬಾಸೆಡರ್ ಕಾರಿನ ಬಳಿ ನಿಂತಿದ್ದರು..ನಾವೆಲ್ಲ..ಈ ಡಬ್ಬ ರಸ್ತೆಯಲ್ಲಿ ಇಲ್ಲೇಕೆ ಬರುತ್ತಾರೆ ಎಂದು ಅಂದು ಕೊಂಡೆವು..ಹತ್ತಿರ ಹತ್ತಿರ ಬರುತ್ತಲೇ...

ನರೇಂದ್ರ ಕೂಗಿದ "ಶಶಿ ನಿಮ್ಮ ಅಪ್ಪ....?!!!!

ಎಲ್ಲರಿಗೂ ಆಶ್ಚರ್ಯ.....ಗಾಡಿಯಿಂದ ಇಳಿದೆವು...

" ಏನ್ ಡ್ಯಾಡಿ ಇಲ್ಲಿ...?"
"ಗೋದ್ರೆಜ್ ಕಂಪನಿಯಲ್ಲಿ ನಿನಗೆ ಸೋಮವಾರ ಇಂಟರ್ವ್ಯೂ ಇದೆ...ಯಾವಾಗ ಬರ್ತೀರಾ ಬೆಂಗಳೂರಿಗೆ?"
"ಸೋಮವಾರ ಬೆಳಿಗ್ಗೆ ಬರ್ತೀವಿ ಡ್ಯಾಡಿ"
"ಸರೀನಪ್ಪ...ಹುಷಾರಾಗಿ ಹೋಗಿ ಬನ್ನಿ...ಬೇಗ ಬಂದು ಬಿಡಿ ಆಯ್ತಾ..."
"ಅದು ಸರಿ ಡ್ಯಾಡಿ ನಾವು ಇಲ್ಲಿದ್ದೀವಿ ಅಂತ ನಿಮಗೆ ಹೇಗೆ ಗೊತ್ತಾಯ್ತು?"
"ನೀವೆಲ್ಲ ಯಾಣ ಅಂತ ಮಾತಾಡ್ತಾ ಇದ್ದರಲ್ಲಾ ಇಲ್ಲೇ ಇರಬೇಕು ಅಂತ ಬೆಂಗಳೂರಿಂದ ಬಂದೆ..ಹೆದ್ದಾರಿಯಲ್ಲಿ ಕೇಳಿದಾಗ ಹೇಳಿದರು ಒಂದು ಮೆಟಡೋರ್ ನಲ್ಲಿ ಹುಡುಗರೇ ಇದ್ದರು..ಯಾಣದ ರಸ್ತೆ ಕೇಳಿದರು..ಅವಾಗ ಗ್ಯಾರಂಟೀ ಆಯಿತು ಅಂದ್ರು...ಹಾಗಾಗಿ ಇಲ್ಲಿಗೆ ಬಂದೆ..ಇಲ್ಲಿಗೆ ಬಂದಾಗ ಕಾರು ಸ್ವಲ್ಪ ರಿಪೇರಿಗೆ ಬಂತು..ನಮ್ಮ ಡ್ರೈವರ್ ರಿಪೇರಿ ಮಾಡ್ತಾ ಇದ್ದರು...ನಿಮ್ಮ ಗಾಡಿ ನೋಡಿದೆ ಖುಷಿ ಆಯಿತು" (ಶಶಿ ತಪ್ಪಿದ್ದರೆ ಸರಿ ಮಾಡು)

ನಮಗೆಲ್ಲ ಆಶ್ಚರ್ಯ ಅಂದ್ರೆ ಆಶ್ಚರ್ಯ...ಮೊಬೈಲ್ ಇಲ್ಲದಿದ್ದ ಕಾಲದಲ್ಲಿ ಎಂತಹ ಸಂಪರ್ಕ ವ್ಯವಸ್ಥೆ..ಮಕ್ಕಳ ಮೇಲೆ ನಂಬಿಕೆ ದೇವರಿದ್ದಾನೆ ಅನ್ನೋದಕ್ಕೆ ಇದು ಒಳ್ಳೆಯ ಉದಾಹರಣೆ...ನಿಜಕ್ಕೂ ಸೂಪರ್..

"ನೀವು ಹೊರಡ್ರಪ್ಪ...ಹೊತ್ತಾಗುತ್ತೆ...ನಾನು ಕಾರ್ ರಿಪೇರಿ ಮಾಡಿಸಿಕೊಂಡು ಬೆಂಗಳೂರಿಗೆ ಹೋಗುತ್ತೇನೆ..ನೀವೆಲ್ಲ ಬೇಗ ಬೆಂಗಳೂರಿಗೆ ಬಂದು ಬಿಡಿ..ಅವನಿಗೆ ಇಂಟರ್ವ್ಯೂ ಇದೆ.."
"ನೀವು ಏನು ಯೋಚನೆ ಮಾಡಬೇಡಿ ಅಂಕಲ್...ನಾವು ಸೋಮವಾರ ಬೆಳಿಗ್ಗೆ ಬಂದು ಬಿಡ್ತೀವಿ.....ಬೈ ಅಂಕಲ್" ಅಂತ ಹೇಳಿ ಹೊರಟೆವು...
(ಶಶಿಯ ಅಪ್ಪ ತಮ್ಮ ಮಗನಿಗೆ ಕೆಲಸ ಸಿಕ್ಕರೆ ಮತ್ತೆ ಕುಟುಂಬ ಸಮೇತ ಯಾಣಕ್ಕೆ ಬರುತ್ತೇನೆ ಎಂದು ಹರಸಿಕೊಂಡರು....ಶಶಿಗೆ ಗೋದ್ರೆಜ್ ಕಂಪನಿಯಲ್ಲಿ ಕೆಲಸ ಸಿಕ್ಕಿತು..ಅದು ಮುಂಬೈನಲ್ಲಿ...ಆಮೇಲೆ ಕಟ್ಟಿ ಕೊಂಡಿದ್ದ  ಹರಕೆಯನ್ನು ೨೦೦೨ ರಲ್ಲಿ ತಮ್ಮ ಕುಟುಂಬದೊಡನೆ ಹೋಗಿ ಬಂದು ಹರಕೆ ಸಲ್ಲಿಸಿದರು ..ಸುಂದರ ನೆನಪು..ಮಕ್ಕಳ ಏಳಿಗೆಗಾಗಿ ಅಪ್ಪ ಅಮ್ಮ ಮಾಡುವ ತ್ಯಾಗ...ಅಹ ಬಲು ದೊಡ್ಡದು...ಬೆಲೆಕಟ್ಟಲಾರದ್ದು)  

ಗೋಕರ್ಣ ತಲುಪಿದಾಗ ರಾತ್ರಿಯಾಗಿತ್ತು...ಅಲ್ಲಿಯೇ ಒಂದು ಮನೆ ಸಿಕ್ಕಿತು..ಒಂದು ದೊಡ್ಡ ಹಜಾರ..ಎಲ್ಲರು ಅಲ್ಲಿಯೇ ಮಲಗೋಕೆ ಅವಕಾಶ,  ಸೌಕರ್ಯ ಮಾಡಿಕೊಟ್ಟರು...ಊಟದ ವ್ಯವಸ್ಥೆ   ಕೂಡ ಮಾಡಿದರು...ಊಟವೆಲ್ಲ ಆದ ಮೇಲೆ..ಹಾಗೆ ಸುತ್ತಾಡಿ ಬರ್ತೇವೆ ಅಂತ..ಸಮುದ್ರ ತಡಿಗೆ ಹೋದೆವು...ನನಗೆ ಸಮುದ್ರ ಮೊತ್ತ ಮೊದಲಿಗೆ ನೋಡಿದ (ಕತ್ತಲಲ್ಲೂ) ಅನುಭವ...ಸಮುದ್ರದ ನೀರು ಉಪ್ಪು ಅಂತ ಹೇಳ್ತಾರಲ್ಲ ಅಂತ..ಒಂದು ಸರಿ ಪರೀಕ್ಷೆ ಮಾಡೋಣ ಅಂತ..ಒಂದು ತೊಟ್ಟು ನೀರನ್ನು ಬಾಯಿಗೆ ಹಾಕಿಕೊಂಡೆ ಗೊತ್ತಾಯ್ತು...:-)...

ಅಲೆಗಳ ಸೆಳೆತ ಅನುಭವಿಸಿ ಖುಷಿಯಾಯಿತು...ಬೆಳಿಗ್ಗೆ ಆಗುವುದನ್ನೇ ಕಾಯುತಿದ್ದೆ...ಮತ್ತೆ ಸಮುದ್ರದೊಡಲು ಸೇರಲು...
ಚಿತ್ರ ಕೃಪೆ : ಅಂತರ್ಜಾಲ
ಬೆಳಿಗ್ಗೆ ಎದ್ದ ಕೂಡಲೇ, ನಾನು, ಆನಂದ, ನರೇಂದ್ರ ಓಡಿದೆವು ಸಮುದ್ರದ ಕಡೆಗೆ...ತುಂಬಾ ಹೊತ್ತು ನೀರಲ್ಲಿ ಆಟಾಡಿ..ಬಂದು..ಸ್ನಾನ ಮಾಡಿ...ತಿಂಡಿ ತಿಂದು..ಮಹಾಬಲೇಶ್ವರ ದೇವಸ್ತಾನಕ್ಕೆ ಹೊರಟೆವು...
ಆ ಆತ್ಮಲಿಂಗದ ದರುಶನ...ಹತ್ತು ರುಪಾಯಿ ಕೊಟ್ಟು ಲಿಂಗದ ತುದಿ ಮುಟ್ಟಿದ್ದು..ಗಣಪನ ತಲೆಯನ್ನು ಮುಟ್ಟಿ ನೋಡಿದ್ದು...ಎಲ್ಲವು ಮನದಾಳದಲ್ಲಿ ಹಾಗೆಯೇ ನಿಂತು ಬಿಟ್ಟಿತು...

ಉಡುಪಿ ದರ್ಶನ ಮಾಡೋಣ ಅಂತ ಕೆಲವರು..ಇಲ್ಲ ಹೊತ್ತಾಗುತ್ತೆ ಅಂತ ಕೆಲವರು..ಸರಿ...ಯಾವುದು ಬೇಡ ಸೀದಾ ಬೆಂಗಳೂರಿಗೆ ಹೋಗೋಣ ಅಂತ ಮಾತಾಯಿತು...ಡ್ರೈವರ್ ನರೇಂದ್ರನಿಗೆ
"ಸರ್...ಈಗ ಮತ್ತೆ ghat section ಗೆ ಹೋಗೋದು ಕಷ್ಟ..ನಿಮಗೆಲ್ಲ ತುಂಬಾ ಸುಸ್ತಾಗಿದೆ..ಒಂದು ಸ್ವಲ್ಪ ಕಿ.ಮಿ.ಜಾಸ್ತಿ ಆಗುತ್ತೆ..ಆದ್ರೆ ಮಂಗಳೂರಿಗೆ ಹೋಗಿ ಅಲ್ಲಿಂದ ಹೋದರೆ ರಸ್ತೆ ಕೂಡ ಚೆನ್ನಾಗಿದೆ..ಹಾಗು ಬೇಗ ಕೂಡ ಹೋಗಬಹುದು"...
"ಎನ್ರಪ್ಪ ಏನು ಮಾಡೋಣ" ನರೇಂದ್ರ ಕೇಳಿದ..
ಎಲ್ಲರು ಒಂದು ಮಾತು "ಸರಿ ಹಂಗೆ ಮಾಡೋಣ"
ಡ್ರೈವರ್ ನಗುತ್ತ "ಸರಿ ಸರ್" ಎಂದು ಹೇಳಿ ಆರಾಮಾಗಿ ೧೦೦-೧೨೦ ರ ವೇಗದಲ್ಲಿ ಮಂಗಳೂರು ಹೆದ್ದಾರಿ ಕಡೆ ಪ್ರಯಾಣ ಆರಂಭವಾಯಿತು...

ದಾರಿಯಲ್ಲಿ  ಮಂಗಳೂರು ಬಂದರು, ಉಡುಪಿ ವೃತ್ತದಲ್ಲಿದ್ದ ಕೃಷ್ಣಾರ್ಜುನ ರಥದಲ್ಲಿದ್ದ ಭಂಗಿ..ಎಲ್ಲವನ್ನು ಹಾಗೆ ಕಣ್ಣು ತುಂಬಿಕೊಂಡೆವು.....ಜೆ. ಎಂ..ಹಾಸನದಲ್ಲೇ ಇಳಿದುಕೊಂಡ....ಸುಮಾರು ಮಧ್ಯರಾತ್ರಿಯ ಹೊತ್ತಿಗೆ ಬೆಂಗಳೂರು ತಲುಪಿದೆವು...ಶಶಿ ಮನೆಯಲ್ಲಿ ರಾತ್ರಿ ಮಲಗಿ ಬೆಳಗ್ಗೆ ಎದ್ದು ಮನೆ ಸೇರಿಕೊಂಡೆವು...

ಒಂದು ಅಮೋಘ...ಗೊತ್ತು ಗುರಿಯಿಲ್ಲದ ಒಂದು ಪ್ರವಾಸ ರೋಮಾಂಚನ ಅನುಭವ ಕೊಟ್ಟಿತು..ಎಲ್ಲರ ಮುಖದಲ್ಲೂ ಸಂತಸ...ಈ ಸಂತಸಕ್ಕೆ ನಾವು ಕೊಟ್ಟ ಬೆಲೆ ಕೇವಲ ನಾನೂರ ಐವತ್ತು ರೂಪಾಯಿಗಳು...ಆದ್ರೆ ಅದು ಕೊಟ್ಟ ಸಂತಸ ಬೆಲೆಕಟ್ಟಲಾಗದು...ಅಲ್ಲವೇ...!!!!

Wednesday, August 15, 2012

ತ್ರಿವೇಣಿ ಸಂಗಮ.... ಶ್ರೀ.ಬಾ.ಬ.....


ಪ್ರಯಾಗದಲ್ಲಿ ತ್ರಿವೇಣಿ ಸಂಗಮಕ್ಕೆ ಕಾರಣವಾದ ಮೂರು ನದಿಗಳು ತಮ್ಮಲ್ಲೇ ಮಾತಾಡುತಿದ್ದವು..
ಕೃಪೆ...ಅಂತರ್ಜಾಲ 
"ಗಂಗಕ್ಕ ನಾವೆಲ್ಲಾ ಒಂದೇ ಕಡೆ ಸೇರುವುದು ಎಷ್ಟು ಚಂದ ಅಲ್ವ.."

"ಹೌದು ಯಮುನಕ್ಕ ನಮ್ಮ ನೆನಪುಗಳು, ಒನಪುಗಳು ಹಂಚಿಕೊಳ್ಳುವ ಈ ಸಮಯ ಬೆಲೆಕಟ್ಟಲಾಗದ ಮಾಣಿಕ್ಯ"

"ಸರಸಕ್ಕ ನೀನು ಯಾಕೆ ಮೌನವಾಗಿದ್ದೀಯ...ಏನು ಮಾತಾಡ್ತಾ ಇಲ್ಲ..?"

"ಹಾಗೇನು ಇಲ್ಲ ಗಂಗಕ್ಕ, ಯಮುನಕ್ಕ...ನಾನು ಈ ತ್ರಿವೇಣಿ ಸಂಗಮದ ತರಹ ಇನ್ನೊಂದು ತ್ರಿವೇಣಿ ಸಂಗಮ ಆಗ್ತಾ ಇದೆ.ಅದರ ಬಗ್ಗೆ ಯೋಚನೆ ಮಾಡ್ತಾ ಇದ್ದೆ.."

"ಹೌದಾ ಸರಸಕ್ಕ!!! ಯಾವುದು ಅದು..? ಎಲ್ಲಿ ಆಯಿತು? ಯಾರು ಯಾರು ಭೇಟಿಯಾದರು?..ಏನು ಕತೆ?...ವಿವರವಾಗಿ ಹೇಳು..?"

"ಹೇಳುತ್ತೇನೆ ಕೇಳಿ...!!!"

ಬದರಿನಾಥ್ ಮಾನಸ ಆಸ್ಪತ್ರೆಯಲ್ಲಿ ಕುಳಿತು ಸಂಜೆ ಸುಮಾರು ೧೬.೩೬ಕ್ಕೆ ಶ್ರೀಕಾಂತ್ ಗೆ ಕರೆ ಮಾಡುತ್ತಾರೆ
"ಶ್ರೀಕಾಂತ್ ಸರ್ ನಮಸ್ಕಾರ...ಹೆಂಗಿದ್ದೀರ...ಆರಾಮ?
"ಬದರಿ ಸರ್ ನಮಸ್ಕಾರ..ಹೆಂಗಿದ್ದೀರ...?
"ನಾನು ನಿನ್ನೆ ಇಂದ ವಿಜಯನಗರದಲ್ಲೇ ಡ್ಯೂಟಿ...ನಮ್ಮ ಸಂಬಂಧಿಕರ ಮಗುಗೆ ಹುಷಾರು ಇಲ್ಲ ನಿನ್ನೆಯಿಂದ ಇಲ್ಲೇ ಇದ್ದೇನೆ.."
"ಎಲ್ಲಿ ಸಾರ್"
"ಇಲ್ಲೇ ಆದಿ ಚುಂಚನಗಿರಿ ಮಠದ  ಹಿಂಬಾಗ ಮಾನ..."
"ಮಾನಸ ಆಸ್ಪತ್ರೆ..ಎಷ್ಟು ಹೊತ್ತಿನ ತನಕ ಇರ್ತೀರಾ?
"ಇನ್ನೊಂದು ಅರ್ಧ ಮುಕ್ಕಾಲು ಘಂಟೆ..."
"ಓಕೆ..ಫ್ರೀ ಇದ್ರೆ ಹೇಳಿ..ಬರ್ತೇನೆ..ಭೇಟಿ ಮಾಡುವ"
"ಓಹ್ ಖಂಡಿತ ಸಾರ್ ಕಾಯ್ತಾ ಇರ್ತೀನಿ"

ನಮಸ್ಕಾರ..ಬದರಿ ಸರ್....ನಮಸ್ಕಾರ ಶ್ರೀಕಾಂತ್ ಸರ್...
ಹೀಗೆ ಶುರು ಆಯಿತು..ಮಾತಿನ ಪದರಂಗ...
ಇಬ್ಬರು ಒಬ್ಬರನ್ನ ಒಬ್ಬರು ಭೇಟಿ ಮಾಡಿದ್ದು..ಅಂತರಂಗ ಬಹಿರಂಗವಾಗಿದ್ದು ಇಬ್ಬರಿಗೂ ಖುಷಿ ತಂದಿತ್ತು...ಹೀಗೆ ಮಾತಾಡುತ್ತ ಉಭಯ ಕುಶಲೋಪರಿ ಸಾಂಪ್ರತ 
ಎನ್ನುವಾಗ ಇನ್ನೊಂದು ಅಚ್ಚರಿ ಕಾದಿತ್ತು..

ಜಂಗಮ ವಾಣಿಯಲ್ಲಿ ಬಂದರು ಬಾಲು ಸರ್.

ಅಲ್ಲಿಗೆ ಬಾಲು, ಬದರಿ, ಶ್ರೀ...ತ್ರಿವೇಣಿ ಸಂಗಮ ..ಸಂಗಮವಾಯಿತು...

ಆನಂದ್ ಚಿತ್ರದಲ್ಲಿ ಬರುವ ಒಂದು ಸಂಭಾಷಣೆ..
"ಜೀವನದಲ್ಲಿ ಒಬ್ಬರನ್ನು ಮಾತಾಡಿಸಿದೆ...ಕೆಲ ಸಮಯ ಅವರಜೊತೆಯಲ್ಲಿ ಕಳೆದೆ...ಸುಖ ದುಖ ಹಂಚಿಕೊಂಡೆ ಇದಕ್ಕಿಂತ ಇನ್ನೇನು ಬೇಕು.."

ಇದೆ ಅಲ್ಲವೇ ನಿರ್ಮಲ ಸ್ನೇಹ ಲೋಕ...ಯಾರು ಹುಟ್ಟಿನಿಂದ ಪರಿಚಿತರಲ್ಲ...
ಅಪರಿಚಿತ ಪದದಿಂದ "ಅ" ಅಕ್ಷರ ತೆಗೆದುಹಾಕಲು ಕೆಲ ಕ್ಷಣಗಳು ಸಾಕು..ಆ ಕ್ಷಣಗಳು ಬ್ಲಾಗ್ ಲೋಕದಲ್ಲಿ ಸಿಗುತ್ತದೆ...

"ಹೆಂಗಿದೆ ಗಂಗಕ್ಕ, ಯಮುನಕ್ಕ...ಈ ತ್ರಿವೇಣಿ ಸಂಗಮ..!!!!!".
"ಸರಸಕ್ಕ  ತುಂಬಾ ಚಂದದ ಸಂಗಮ...ಭೂಲೋಕದಲ್ಲಿ ತಾಮಸ ಗುಣಗಳಿಲ್ಲದ ಕೆಲವೇ ಜಾಗಗಳಲ್ಲಿ "ಬ್ಲಾಗ್ ಲೋಕ" ಕೂಡ ಒಂದು ಅಲ್ಲವೇ..

"ಬ್ಲಾಗ್ ಲೋಕಕ್ಕೆ ಬ್ಲಾಗ್ ಲೋಕದ ಗೆಳೆಯ ಗೆಳತಿಯರೆಲ್ಲರಿಗೂ ನಮನಗಳು..." ಎಂದು ಹೇಳುತ್ತಾ ಗಂಗಾ, ಯಮುನಾ, ಸರಸ್ವತಿ ತಮ್ಮ ಮನೆಯಲ್ಲಿ ದೀಪ ಹಚ್ಚಲು ಮನೆಯ ಕಡೆ ಒಟ್ಟಿಗೆ ಹರಿಯಲು ಶುರು ಮಾಡಿದವು!!!

Wednesday, July 18, 2012

ವೆಂಕಿ ಜನುಮದಿನದ ಶುಭಾಶಯಗಳು


ಪ್ರತಿಯೊಂದು ಸ್ನೇಹಿತರ ಗುಂಪಿನಲ್ಲೂ ಒಬ್ಬ ಉತ್ಸಾಹ ತುಂಬುವನು, ಎಲ್ಲವನ್ನು ತೂಗಿಸಿಕೊಂಡು ಹೋಗುವನು ಇದ್ದೆ ಇರುತ್ತಾನೆ...ಅಂತಹ ನಮ್ಮ ಸ್ನೇಹಿತ.."ವೆಂಕಿ" ..ಇಂದು ವೆಂಕಿಯ ಜನುಮದಿನ...ಹೀಗೆ ಒಂದು ಅನುಭವ ಹಂಚಿಕೊಳ್ಳೋಣ ಅಂತ ಈ ಪ್ರವಾಸದ ಕಥನ ನಿಮ್ಮ ಮುಂದೆ..

ತನ್ನ ತಮಾಷೆ ಭರಿತ ಮಾತುಗಳು, ಎಲ್ಲರನ್ನು ಸೇರಿಸಿಕೊಂಡು ಮುಂದೆ ಹೋಗುವ, ಸಮಸ್ಯೆಗಳಿಗೆ ಸರಿ ಉತ್ತರ ಹುಡುಕುವ ತಾಕತ್ ಇರುವ ಸ್ನೇಹಿತ...ನಮ್ಮ ವೆಂಕಿ...

ಅವನು ಒಮ್ಮೆ ಶಿವಮೊಗ್ಗದ ಅಬ್ಬಲಗೆರೆ ಗ್ರಾಮದಲ್ಲಿ ಒಂದು ತರಬೇತಿ ಶಿಬಿರಕ್ಕೆ ಸುಮಾರು ತಿಂಗಳುಗಳು  ಇರಬೇಕಿತ್ತು..ಆಗ ನಾವೆಲ್ಲಾ ಉದ್ಯೋಗ ಕ್ಷೇತ್ರಕ್ಕೆ ಆಗ ತಾನೇ ಕಾಲಿಟ್ಟ ದಿನಗಳು...ಹೀಗೆ ವೆಂಕಿ ಒಮ್ಮೆ ವಾರಾಂತ್ಯದಲ್ಲಿ ಬೆಂಗಳೂರಿಗೆ ಬಂದಾಗ  ನಮಗೆಲ್ಲ ಒಂದು ಸಲಹೆ ಕೊಟ್ಟ ಒಂದು ಶನಿವಾರ, ಭಾನುವಾರ ಶಿವಮೊಗ್ಗಕ್ಕೆ ಬನ್ನಿ...ಅಲ್ಲೇ ಸುತ್ತಾಡಿ ಬರೋಣ ಅಂತ..ನಮಗೂ ಸರಿ ಅನ್ನಿಸಿತು...

ಸರಿ..ಶಶಿ, ಲೋಕಿ, ಜೆ.ಎಂ, ಹಾಗು ನಾನು ಶಿವಮೊಗ್ಗಕ್ಕೆ ಶುಕ್ರವಾರ ಜೂನ್ ೨೯ ೧೯೯೬ ರಂದು ಪ್ರಯಾಣ ಬೆಳೆಸಿದೆವು.. ಶಿವಮೊಗ್ಗದಿಂದ ಸುಮಾರು ಕಿ.ಮಿ. ದೂರದಲ್ಲಿ ಸಾವಲಂಗ ಮಾರ್ಗದಲ್ಲಿ ಅಬ್ಬಲಗೆರೆ ಇತ್ತು... ಒಬ್ಬರು ರಾಜಸ್ತಾನಿ ತಾತ..ತನ್ನ ಅಂಬಾಸೆಡರ್ ಕಾರಿನಲ್ಲಿ ಹೋಗುತ್ತಿದ್ದವರು..ನಾವು ಬಸ್ಸಿಗಾಗಿ ಕಾಯುತ್ತ ನಿಂತ ಬಳಿಯಲ್ಲಿ ನಿಲ್ಲಿಸಿ ನಮಗೇನೋ ವಿಳಾಸ ಕೇಳಿದರು ನಮಗೆ ಗೊತ್ತಿಲ್ಲ ಅಂತ ಹೇಳಿದೆವು..ನಂತರ ನೀವೆಲ್ಲಿ ಹೋಗುತಿದ್ದೀರಿ ಅಂತ ಕೇಳಿದಾಗ ನಾನು ನಾವು ಹೋಗಬೇಕಾದ ಸ್ಥಳ ಹೇಳಿದೆ..ಸರಿ ಆ ತಾತ ಬನ್ನಿ ಅಲ್ಲಿಗೆ ಬಿಡುತ್ತೇನೆ ಎಂದು ಹೇಳಿ ಕೂರಿಸಿಕೊಂಡರು...ಸುಮಾರು ಹೊತ್ತು ಕಳೆದರು ನಾವು ಹೋಗಬೇಕಾದ ಸ್ಥಳ ಸಿಗಲಿಲ್ಲ..ಅಲ್ಲೇ ಗ್ರಾಮಸ್ತರನ್ನು ಕೇಳಿದಾಗ ತಿಳಿದು ಬಂದ ವಿಷಯ..ನಾವು ಹೋಗಬೇಕಾದ ದಾರಿಗೆ ವಿರುದ್ಧ ದಿಕ್ಕಿನಲ್ಲಿ ಸಾಕಷ್ಟು ದೂರ ಪಯಣ ಬೆಳೆಸಿದ್ದೆವು  ..ನಂತರ ತಾತನಿಗೆ ಒಂದು ನಮಸ್ಕಾರ ಹೇಳಿ..ಬೇರೆ ಬಸ್ಸಿನಲ್ಲಿ ಸರಿಯಾದ ವಿಳಾಸಕ್ಕೆ ಹೋದ ಮೇಲೆ ನಡೆದ ವಿಷಯವನ್ನೆಲ್ಲ ಕೇಳಿ "ವೆಂಕಿ"ನಮಗೆಲ್ಲರಿಗೂ..ಮತ್ತು ಹೆಚ್ಚಾಗಿ ನನಗೆ ಮಂಗಳಾರತಿ ಮಾಡಿದ...

ಎರಡು ದಿನದ ಕಾರ್ಯಕ್ರಮದಲ್ಲಿ ಒಂದು ದಿನ ಗಾಜನೂರು ಆಣೆಕಟ್ಟು ನೋಡುವುದು, ಎರಡನೇ ದಿನ ಜೋಗ ಜಲಪಾತಕ್ಕೆ ಹೋಗಿ ಬಂದು ಸಂಜೆ ಬೆಂಗಳೂರಿನ ಬಸ್ ಹತ್ತುವುದು ನಿರ್ಧಾರವಾಯಿತು...

ವೆಂಕಿ ತಂಗಿದ್ದ ಮನೆಯಲ್ಲಿದ್ದ ಆಚಾರ್ ಅವರು ನಮ್ಮನೆಲ್ಲ ಚೆನ್ನಾಗಿ ನೋಡಿಕೊಂಡರು.  ಸ್ನಾನ ಎಲ್ಲ ಮುಗಿಸಿ ಗಾಜನೂರು ಅಣೆಕಟ್ಟಿನ ಕಡೆ ಹೊರಟೆವು..

ನನ್ನ ಬಾಲ್ಯದಲ್ಲಿ ಕೆಲ ವರ್ಷಗಳು ಶಿವಮೊಗ್ಗದಲ್ಲಿದ್ದರು ಆ ಸ್ಥಳಕ್ಕೆ ಹೊಗಿರಲಾಗಿರಲಿಲ್ಲ..ಅಣ್ಣಾವ್ರು ಎರಡು ಕನಸು, ವಸಂತ ಗೀತ ಹೀಗೆ ಕೆಲ ಚಿತ್ರಗಳಲ್ಲಿ ಕುಣಿದು ಕುಪ್ಪಳಿಸಿದ್ದ ತಾಣ...ಒಂದು ತರಹ  ಖುಷಿ ತಂದಿತ್ತು...

ಜಲಾಶಯ ತುಂಬಿ ತುಳುಕುತ್ತಿತ್ತು..ಆಗ ಶಶಿ ಹೇಳಿದ "ooh idu over flowing principle" ನಲ್ಲಿ ಕಟ್ಟಿರುವ ಡ್ಯಾಮ್...

ಅಲ್ಲಿಯೇ ಇದ್ದ ತೆಪ್ಪದಲ್ಲಿ ಒಂದು ಸುತ್ತು ಸುತ್ತಿದೆವು..ತೆಪ್ಪ ಮಧ್ಯದಲ್ಲಿದ್ದಾಗ ನಮ್ಮ ಧೀರ ಜೆ.ಎಂ..ತೆಪ್ಪದವರಿಗೆ.."ಚೆನ್ನಾಗಿ ತಿರುಗಿಸಿ" ಎಂದಾಗ ನಮಗೆ ಮೈ ಎಲ್ಲ ನಡುಕ ಶುರುವಾಯಿತು...ಅವನಿಗೆ ಬುದ್ದಿ ಹೇಳಿ ಉಪಾಯವಾಗಿ ದಡಕ್ಕೆ ಬಂದಾಗ ಉಸಿರು ಬಿಟ್ಟೆವು...

ಅಲ್ಲೆಲ್ಲ ಕೋತಿ ಚೇಷ್ಟೆ, ತಮಾಷೆ ಮಾತುಗಳು, ರುಚಿಯಾದ ಕಡಲೆ ಪುರಿ, ಭೇಲ್ ಪುರಿ, ಮಾವಿನಕಾಯಿ ಎಲ್ಲವನ್ನು ತಿಂದು ಆನಂದಿಸಿ ಶಿವಮೊಗ್ಗೆಗೆ ಮರಳಿದೆವು.....ಸುಮಾರು ವರುಷಗಳು ಕಳೆದ ಕಾರಣ ಎಲ್ಲರು ಇದ್ದ ಫೋಟೋ ಇಲ್ಲದ ಕಾರಣ ಜೆ. ಎಮ್ . ತೆಗೆದ ಒಂದು ಚಿತ್ರ ಸಿಕ್ಕಿತು..ಅದನ್ನೇ ಲಗತಿಸಿದ್ದೇನೆ..ಈ ಚಿತ್ರ ತೆಗೆಯುವಾಗ ಲೋಕಿ ಹೇಳಿದ..ಲೋ ಸ್ವಲ್ಪ different  ಆಗಿ ನಿಲ್ಲಬೇಕು ಕಣ್ರೋ ಅಂತ.ಹಿಂಗೆ ನಿಂತ....

ರಾತ್ರಿ ಒಳ್ಳೆಯ ಭೋಜನ ಕಾದಿತ್ತು..

ಮಾರನೆ ದಿನ ಜೋಗ ಜಲಪಾತಕ್ಕೆ ನನ್ನ ಎರಡನೇ ಭೇಟಿ...ಎಲ್ಲರು ಜಲಪಾತದ ತಳಕ್ಕೆ ಹೋಗಿ, ಮಿಂದು, ಆಟವಾಡಿ ಮೇಲಕ್ಕೆ ಬಂದಾಗ ಮದ್ಯಾಹ್ನ ದಾಟಿತ್ತು...

ಅಲ್ಲಿಯೇ ಸಿಕ್ಕ ಹೋಟೆಲ್ ನಲ್ಲಿ ಸಿಕ್ಕದನ್ನು ತಿಂದು ಬಸ್ಸಿನಲ್ಲಿ ಕುಳಿತಾಗ ಟಿಕೆಟ್ ಟಿಕೆಟ್ ಎಂದು ಕೂಗಿಕೊಂಡು ಬಂದ...

ನಾನು ಟಿಕೆಟ್ ತೆಗೆದುಕೊಳ್ಳಲು ನೂರು ರುಪಾಯಿ ನೋಟನ್ನು ಕೊಟ್ಟೆ...(ಕೆಲವು ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಗಾಂಧಿ ಭಾವಚಿತ್ರವಿದ್ದ ನೋಟು ಅದು)...

ಆತ ಆ ನೋಟನ್ನು ತೆಗೆದುಕೊಳ್ಳಲು ಹಿಂಜರಿದ..ಕಾರಣ..ಖೋಟ ನೋಟು ಅಂತ ಅವನ ಭಾವನೆ..ಎಷ್ಟೇ ಹೇಳಿದರು ಒಪ್ಪಲಿಲ್ಲ ಆತ.... ಕಡೆಗೆ ಬೇರೆ ನೋಟನ್ನು ಕೊಟ್ಟು ಟಿಕೆಟ್ ಪಡೆದೆವು...

ಶಿವಮೊಗ್ಗಕ್ಕೆ ಬಂದು ನಿಂತಾಗ ಆಗಲೇ ರಾತ್ರಿಯಾಗಿತ್ತು..ನಮ್ಮ ಬಸ್ ಇನ್ನೇನು ಕೆಲ ಘಂಟೆಗಳಲ್ಲಿ ಹೊರಡುವುದಿತ್ತು  ..ಮತ್ತೆ ವೆಂಕಿಯ ಮನೆಗೆ ಹೋಗಿ ನಮ್ಮ ಬ್ಯಾಗನ್ನು ತರುವುದಕ್ಕೆ ಸಮಯವಿರಲಿಲ್ಲ..ಆಗ ವೆಂಕಿ ತಾನೇ ಎಲ್ಲ ಬ್ಯಾಗನ್ನು ಮುಂದಿನವಾರ ಬರುವಾಗ ತರುವುದಾಗಿ ಹೇಳಿದ..ಅಲ್ಲೇ ಹೋಟೆಲ್ನಲ್ಲಿ  ಊಟ ಮಾಡಿ..ಬಸ್ಸಿಗೆ ಬಂದು ಕೂತಾಗ ಮನಸು ಆನಂದದಲ್ಲಿ ತೇಲಾಡುತಿತ್ತು...

ಮಾರನೆ ದಿನ ಅಂದ್ರೆ ಸೋಮವಾರ ಜುಲೈ ಒಂದನೇ ತಾರೀಕು  ೧೯೯೬ ನಮ್ಮ ಆತ್ಮೀಯ ಗೆಳೆಯ ಶಶಿಯ ಹಾಗು ಹದಿನೆಂಟನೆ ತಾರೀಕು ವೆಂಕಿಯ ಹುಟ್ಟುಹಬ್ಬ ...ಎಂತಹ ಉಡುಗೊರೆ ನಮ್ಮ ಸ್ನೇಹಿತನಿಗೆ ಕೊಟ್ಟೆವು..ಬಹಳ ಸಂತಸ ತಂದ ಪ್ರವಾಸವನ್ನು ಹದಿನಾರು ವರುಷಗಳ ನಂತರ ಮೆಲುಕುಹಾಕುವುದು ಅನಂದವಲ್ಲದೆ ಇನ್ನೇನು...!!!!!!!!!!!!!!!!

Sunday, July 1, 2012

ಶಶಿ...... ಅಭಿಮಾನದ ಸ್ನೇಹಿತನಿಗೆ ಹುಟ್ಟು ಹಬ್ಬದ ಶುಭಾಶಯಗಳು


ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ...

ಇದು ನಮ್ಮ ಶಶಿಯಾ ವ್ಯಕ್ತಿತ್ವಕ್ಕೆ  ಸೂಕ್ತವಾದ ತಲೆ ಬರಹ!!!

ಗುಣಗಳ ಬಗ್ಗೆ ಹೊಗಳಿ ಬರೆದರೆ...ಏನ್ ತುಂಬಾ ಹೊಗಳುತ್ತಿಯಪ್ಪ...ಅಷ್ಟೆಲ್ಲ ಒಳ್ಳೆ ಗುಣಗಳಿಲ್ಲ ಅಂತಾರೆ
ಏನು  ಬರೆಯದೆ ಸುಮ್ಮನೆ ಹುಟ್ಟಿದ ಹಬ್ಬಕ್ಕೆ ಶುಭಾಶಯಗಳು ಅಂದ್ರೆ..ಯಾಕೆ ಮೂಡ್ ನಲ್ಲಿ ಇಲ್ವಾ..ಏನ್ ಸಮಾಚಾರ ಯಾಕೆ ಬೇಜಾರು? ಏನಾಯ್ತು? ಅಂತಾರೆ!!!
ಉದ್ದಕ್ಕೆ ಬ್ಲಾಗ್ ಬರೆದರೆ...ಮಾಡೋಕೆ ಏನು ಕೆಲಸ ಇಲ್ಲ ಅದಕ್ಕೆ ಹೀಗೆ ಟೈಮ್ ವೇಸ್ಟ್ ಮಾಡ್ತಾನೆ ಅಂತಾರೆ...?
 
ಇಂತಹ ಒಂದು ವಿರುದ್ಧ ದಿಕ್ಕಿನಲ್ಲಿ ಯೋಚನಾ ಲಹರಿ ಹರಿಯುತಿದ್ದಾಗ ನೆನಪಿಗೆ ಬಂದದ್ದು.... ಇವತ್ತು ನಮ್ಮ ಪ್ರೀತಿಯ ಗೆಳೆಯ ಶಶಿಯ ಜನುಮದಿನ...ನಮ್ಮ ಗತಕಾಲದಲ್ಲಿ ನಡೆದ ಒಂದು ಪ್ರಸಂಗವನ್ನು ಹಾಗೆ ಇಳಿಸೋಣ ಅಂತ...ಶುರುವಾಯಿತು ಲೇಖನದ ಹರಿವು!!
 
ಶಶಿ, ವೆಂಕಿ, ಜೆ.ಎಂ, ನಾನು ಶಾಲಾದಿನಗಳಿ೦ದಲೂ ಸ್ನೇಹಿತರು...ಲೋಕಿ ನಮಗೆ ಕಾಲೇಜು ದಿನಗಳಲ್ಲಿ ಜೊತೆಯಾದ..
ವೆಂಕಿ, ಜೆ.ಎಂ,ಶಶಿ, ಶ್ರೀ , ಲೋಕಿ
ಒಮ್ಮೆ..ಕಾಲೇಜು ದಿನಗಳಲ್ಲಿ..ನಾವೆಲ್ಲರೂ ಒಂದು ಸಿನೆಮಾಗೆ ಹೋಗಬೇಕು ಅಂತ ನಿರ್ಧಾರವಾಯಿತು...ಆ ದಿನಗಳಲ್ಲಿ ನಾವೆಲ್ಲ ಜಾಕಿ ಚಾನ್  ಸಿನೆಮಾಗಳ  ಬಹು ದೊಡ್ಡ ಅಭಿಮಾನಿಗಳು (ಈಗಲೂ ಕೂಡ)..ಸರಿ ಸಿಂಫೋನಿ ಟಾಕೀಸ್ನಲ್ಲಿ ಸಿನಿಮಾ ಇತ್ತು..ಎಲ್ಲರಿಗೋ ಅಲ್ಲಿಗೆ ಬರಲು ಹೇಳಿದೆವು..

ಶಶಿ ಮತ್ತು ನಾನು ಸುಮಾರು ೧೧.೩೦ಕ್ಕೆ ಅಲ್ಲಿ ತಲುಪಿದೆವು..ಸರೀ ಮಿಕ್ಕವರು ಬರುತ್ತಾರೆ ಎಂದು ಕಾದೆವು..೧೨.೩೦ ಆಯಿತು ೧೩.೦೦ ಆಯಿತು..ಯಾರು ಪತ್ತೆ ಇಲ್ಲ..

"ಶಶಿ..ಏನೋ ಇವರು ಯಾರು ಪತ್ತೆ ಇಲ್ಲ..ಸರಿಯಾಗಿ ಹೇಳಿದ್ದೆವು ಅಲ್ವ..
"ಏನೋ ಸ್ನೇಹಿತರೋ ಏನೋ...ಇವರು ಇನ್ನೆಲ್ಲಿ ಕಾಯ್ತಾ ಇದ್ದರೋ...ಮಜೆಸ್ಟಿಕ್ ಹತ್ತಿರ ಹೋಗಿ ನೋಡೋಣ...ಅಲ್ಲಿ ಇರಬಹುದು ನಡಿ ಅಲ್ಲಿಗೆ ಹೋಗೋಣ" 

ಅಲ್ಲಿಗೆ ಶಶಿ ಮತ್ತು ನಾನು ಬಂದೆವು...

ವೆಂಕಿ ನಮಗಾಗಿ ಕಾಯುತ್ತ ನಿಂತಿದ್ದ..ಸಂತೋಷ್ ಟಾಕಿಸ್ ಮುಂದೆ...

ವೆಂಕಿ ನಮಗೆ ಬಯ್ಯಲು ಬಾಯಿ ತೆಗೆದ...

ಅಷ್ಟರಲ್ಲಿ ಶಶಿ "ಎನಲೇ..ಎಂ.ಜಿ. ರೋಡ್ ಗೆ ಬಾ ಅಂದ್ರೆ ಇಲ್ಲಿ ನಿಂತಿದೀಯ...? ನಮಗೆ ಕಾದು ಕಾದು ಸುಸ್ತಾಯಿತು...#@#!@#!@#!@"
ವೆಂಕಿ ಮತ್ತೆ ಮಾತಿಲ್ಲ..
ಸರಿ ನಮ್ಮ "ಅಣ್ಣ ಬಾಂಡ್"  ಜೆ.ಎಂ. ನ ಹುಡುಕಬೇಕಿತ್ತು...ಎಲ್ಲಿರಬಹುದು ಅಂತ ಯೋಚನೆ ಮಾಡಿದೆವು..
ಸರಿ ಇರಲಿ ಅಂತ "ಕೈಲಾಶ್" ಟಾಕೀಸ್ ಹತ್ತಿರ ಹೋದೆವು..
ಮ್ಯೂಸಿಕ್ ಪ್ಲೆಯೇರ್ನಲ್ಲಿ ಹಾಡು ಹಾಕಿಕೊಂಡು..ತಲೆಗೆ ಟೋಪಿ ಹಾಕಿಕೊಂಡು...ಹಾಡನ್ನು ಸವಿಯುತ್ತ ನಿಂತಿದ್ದ ನಮ್ಮ ಜೆ.ಎಂ...

ಶಶಿ"ಲೇ ಎಲ್ಲಿ ಕಾಯೋಕೆ ಹೇಳಿದ್ವಿ..ನೀನು ಎಲ್ಲಿ ನಿಂತಿದ್ದೆಯ..."

"you people asked me to wait here..so am waiting for you from last two hours..why you all late....?"

ಶಶಿಗೆ ಅರ್ಥ ಆಯಿತು...ತಾಳ್ಮೆ ಒಂದೇ ಇವರಿಗೆಲ್ಲ ಮದ್ದು ಅಂತ 

ತನ್ನೆಲ್ಲ ಹಲ್ಲನ್ನು ತೋರಿಸುತ್ತ..ಸರಿ ಅಣ್ಣ..ಬಾ ಯಾವುದಾದರು ಸಿನೆಮಾಗೆ ಟಿಕೆಟ್ ಸಿಗುತ್ತಾ ನೋಡೋಣ...ಹಾಗೆ ಊಟ ಮಾಡಿ ಬರೋಣ...

ಎಲ್ಲರು ಒಂದು ಸಿನೆಮಾಗೆ ಹೋಗಿ ಹೊಟ್ಟೆ ತುಂಬಾ ಊಟ ಮಾಡಿ ಮನೆ ಸೇರಿದೆವು...

ಇವತ್ತಿಗೂ ಇಡಿ ಪ್ರಕರಣವನ್ನು ಶಶಿ ನಿಭಾಯಿಸಿದ ರೀತಿ ಮೆಚ್ಚುಗೆಯಾಗುತ್ತದೆ...ಅಂತಹ ತಾಳ್ಮೆಯ ಸ್ನೇಹಿತ ನಮ್ಮ ಜೊತೆಯಲ್ಲಿ ಇರುವುದು ಹಾಗು ಹಿರಿಯ ಅಣ್ಣನಂತೆ ನಮ್ಮನೆಲ್ಲ ಕೈ ಹಿಡಿದು ನಡೆಸುತ್ತಿರುವುದು ಖುಷಿ ಕೊಡುತ್ತದೆ..

ನಾವು ಐದು ಜನ ಸ್ನೇಹಿತರು ಕೈ ಬೆರಳಿನಂತೆ...ಒಂದಕ್ಕೊಂದು ಸಂಬಂಧವಿಲ್ಲ...ಎಲ್ಲರ ಗುಣಕ್ಕೂ ಅಜಗಜಾಂತರ..ಆದರು ನಾವೆಲ್ಲ ಕಳೆದ ೨೫ ವರುಷಗಳಿಂದ ಒಬ್ಬರಿಗೊಬ್ಬರು ಅಂಟು ಬಿಡದ ಸ್ನೇಹಿತರಾಗಿದ್ದೇವೆ...ಬೆರಳುಗಳು ಬೇರೆ ಬೇರೆ ಉದ್ದ ಅಗಲ ಇದ್ದರೂ ಅದನ್ನ ಹಿಡಿದಿಡುವುದು ಮುಷ್ಠಿ...ಹಾಗೆಯೇ ನಮ್ಮನ್ನ ಬಂಧಿಸಿಟ್ಟಿರುವ ಶಕ್ತಿ ನಿರ್ಮಲ ಸ್ನೇಹ ಹಾಗು ಹಿರಿಯಣ್ಣನ ಪ್ರೀತಿ..ಹಾಗು ಸ್ನೇಹ ...

ಅಂತಹ ಹಿರಿಯಣ್ಣನಿಗೆ, ಅಭಿಮಾನದ ಸ್ನೇಹಿತನಿಗೆ ಹುಟ್ಟು ಹಬ್ಬದ ಶುಭಾಶಯಗಳು!!!!

Sunday, April 29, 2012

ಮನೆ ಎನ್ನುವ ಗೃಹ ನಮ್ಮದಾದಾಗ

ಮನುಷ್ಯನ ಗುರಿ ಸದಾ ಕಣ್ಣ ಮುಂದೆಯೇ ಇರುತ್ತದೆ...
ಒಬ್ಬರಿಗೊಬ್ಬರು ಜೊತೆ ನಿಂತಾಗ..ಪ್ರಪಂಚವನ್ನೇ ಅಲುಗಾಡಿಸಬಹುದು ಇದು ಒಂದು ಆಡು ಮಾತು..

ಸ್ನೇಹ ಎನ್ನುವ ವಿಷಯ ಬಂದಾಗ ಅಲ್ಲಿ ಮಿಕ್ಕಿದೆಲ್ಲವು ಗೌಣ...
ಅಸಮಾನತೆ, ಮೇಲು, ಕೀಳು ಎನ್ನುವ ಭಾವ, ಭಾವನೆ ಯಾವುದು ಇರುವುದಿಲ್ಲ..
ಒಬ್ಬರ ಸಂತಸದಲ್ಲಿ, ದುಃಖದಲ್ಲಿ ಜೊತೆ ನಿಲ್ಲುವುದು ಗೆಳೆತನ..
ಒಬ್ಬ ಸಹಾಯ ಮಾಡಿದ್ದ ಅದಕ್ಕೆ ನಾನು ಸಹಾಯ ಮಾಡಬೇಕು ಅನ್ನುವ ಬದಲು..ನೀನು ಕುಳಿತಾಗ ನಾನು ನಿಲ್ಲುವೆ..ನೀನು ನಿಂತಾಗ ನಾನು ಕುಳಿತುಕೊಳ್ಳುವೆ ಇದು ಗೆಳೆತನ ಸೂಸುವ ಭಾವ...

ಶ್ರೀ ರಾಮಚಂದ್ರನು ವಾನರ ಸೇನೆಯ ಜೊತೆ ಇಡಿ ಲಂಕವನ್ನು ಹಾಗು ಸೀತೆಮಾತೆಯನ್ನ ರಾವಣನ ಹಿಡಿತದಿಂದ ಬಿಡಿಸಿ ಸಮುದ್ರ ದಾಟಿ ಬಂದಾಗ..ಸಾಗರದ ತಡಿಯಲ್ಲಿ ಒಂದು ಪುಟ್ಟ ಅಳಿಲು ಅಳುತ್ತ ಕುಳಿತಿತ್ತು....
ಶ್ರೀರಾಮಚಂದ್ರನು ಅದನ್ನ ನೋಡಿ ಯಾಕೆ ಅಳುತಿರುವೆ..ಎಂದು ಕೇಳಿದಾಗ...
ಅಳಿಲು ಹೇಳಿತು..

"ಹನುಮಂತ ಸಾಗರ ದಾಟಿ ಸೀತಾ ಮಾತೆಯನ್ನು ನೋಡಿ ಬಂದ."
ಜಾಂಬುವಂತ ಇಡಿ ಯುದ್ದದ ತಯಾರಿ ಹಾಗು ಅದಕ್ಕೆ ಸಿದ್ದತೆ ಮಾಡಿ ಗೆಲುವನ್ನ ಸಾಧಿಸಲು ಶ್ರಮಿಸಿದ"
ಅಂಗದ ರಾವಣ ಆಸ್ಥಾನಕ್ಕೆ ಹೋಗಿ ಬಂದ..
ನೀಲ ಸಾಗರದ ಮೇಲೆ ಸೇತುವೆ ಕಟ್ಟಲು ಸಹಾಯ ಮಾಡಿದ...

ಆದ್ರೆ ನಾನು ಏನು ಮಾಡಲು ಆಗಲಿಲ್ಲ..ನನ್ನ ಹತ್ತಿರ ಸಹಾಯ ಮಾಡುವ ಮನಸಿತ್ತು..ಆದ್ರೆ ಶಕ್ತಿ ಇರಲಿಲ್ಲ..ಅದಕ್ಕೆ ಬೇಸರವಾಗಿದೆ..ಇಲ್ಲಿರುವ ಕೆಲವು ಬಂಡೆಗಳು ಮಾತಾಡುತ್ತ ಇದ್ದವು..ನಾವು ಸೇತುವೆಯಾಗಿ ಶ್ರೀ ರಾಮಚಂದ್ರನಿಗೆ ಸಹಾಯಮಾಡಿದೆವು, ಮರಳು ಕೂಡ ಬಂಡೆಯ ಮಧ್ಯೆ ಸೇರಿಕೊಂಡು ಗಟ್ಟಿ ಮಾಡಿದವು...ಈ ಚಿಕ್ಕ ಅಳಿಲು ಏನು ಮಾಡಿಲ್ಲ.ಶ್ರೀರಾಮಚಂದ್ರನಿಂದ ಅನೇಕ ಬಾರಿ ಸಹಾಯ ಪಡೆಯಿತು..ಆದ್ರೆ ಪ್ರತಿಯಾಗಿ ಏನು ಸಹಾಯ ಮಾಡಲಿಲ್ಲ..ಅಂತ

ಆಗ ಶ್ರೀ ರಾಮಚಂದ್ರ ಹೇಳುತ್ತಾನೆ.."ಅಳಿಲೆ..ಪ್ರಪಂಚದಲ್ಲಿ ಸಹಾಯ ಮಾಡಬೇಕು ಎನ್ನುವ ಮನಸು ಬೇಕು..ಅದಕ್ಕೆ ನೀನು, ನಿನ್ನ ಗೆಳೆಯರಾದ ಬಂಡೆ, ಮರಳು, ನಮ್ಮ ವಾನರ ಸೇನೆಯೇ ಸಾಕ್ಷಿ...ಅವರ ಮಾತು ನಿಜ..ಆದ್ರೆ..ನೀನು ನಿನ್ನ ಶ್ರಮದಾನ ಮದುತಿದ್ದೀಯ..ಅವರ ಜೊತೆ ಸುಖದಲ್ಲೇ ಆಗಲಿ, ಕಷ್ಟದಲ್ಲೇ ಆಗಲಿ ಸದಾ ಇರುತ್ತೀಯ..ಇದಕ್ಕಿಂತ ಇನ್ನೇನು ಬೇಕು..ನಾನು ನಿನ್ನ ಜೊತೆ ಇದ್ದೀನಿ ಅನ್ನುವ ಭಾವ ಎಲ್ಲ ಸಂಪತ್ತು, ಸಹಾಯಕ್ಕಿಂತಲೂ ಮೇಲೆ ಇರುತ್ತದೆ...ಸಂಪತ್ತು ನೀರಲ್ಲಿ ಮರಳಿನ ಹಾಗೆ ಕರಗಿ ಹೋಗುತ್ತದೆ...ಆದ್ರೆ ಅದನ್ನು ಮತ್ತೆ ಮತ್ತೆ ಮರಳಿ ಹೊತ್ತು ತರುವ ಅಲೆಗಳ ಹಾಗೆ ಶ್ರಮದಾನ ಹಾಗು ಭಾವ...ಅದಕ್ಕಾಗಿ ಪ್ರಪಂಚದಲ್ಲಿ ಅಳಿಲು ಸೇವೆ ಅನ್ನುವ ಪದವಿದೆ...ನಿನ್ನ ಚಿಂತೆ ಬಿಡು..ನನ್ನ ಅಭಯ ಯಾವಾಗಲು ನಿನ್ನ ಮೇಲೆ ಇರುತ್ತದೆ..ಗೆಳೆತನವನ್ನು ರಕ್ಷಿಸುವ ಹೊಣೆ ಹೊತ್ತು ನೆದೆಯುತ್ತಿದೀಯ..ಅದೇ ದೊಡ್ಡ ಸಹಾಯ ನಿನ್ನಿಂದ"

"ಈ ಮೇಲಿನ ಮಾತುಗಳು ಗೆಳೆತನದ ಆಳವನ್ನು ತೋರಿಸುತ್ತದೆ.."

ಪ್ರಪಂಚದಲ್ಲಿ ನಿರ್ಮಲವಾದ ಗೆಳೆತನ ನಮಗೆ ದೊರಕಿಸಿಕೊಟ್ಟ ಆ ಭಗವಂತನು..ಇಂದು ವೆಂಕಿ ಹಾಗು ಅವನ ಮಾತಾ ಪಿತೃಗಳ ಕನಸಾದ ಒಂದು ಗೃಹ ನಿರ್ಮಾಣವನ್ನ ಮಾಡಿ..ಅದಕ್ಕೆ ಗೃಹ ಪ್ರವೇಶ ನಡೆಯಿತು..ಎಂತಹ ಒಂದು ಸುಂದರ ಕನಸು ನನಸಾದ ದಿನ..ಅವನ ಅಮ್ಮನಿಗೆ ಸಂತಸ ತಡೆಯಲಾರದಷ್ಟು ತುಂಬಿ ತುಳುಕುತ್ತಿತ್ತು..ಅವರು ನಮ್ಮನ್ನೆಲ್ಲ ನೋಡಿ..ಬಹಳ ಖುಷಿ ಪಟ್ಟರು..ಎಲ್ಲಿ ನಿರ್ಮಲ ಭಾವ ಇರುತ್ತದೆಯು..ಅಲ್ಲಿ ನಿರ್ಮಲ ಮನಸು ಇರುತ್ತದೆ..ಎನುವುದಕ್ಕೆ ಅವನ ಅಮ್ಮನೇ ಸಾಕ್ಷಿ..

ಅವನ ಗೆಳೆಯರು ಒಂದು ಸುಂದರವಾದ ಅಕ್ಷರಗಳನ್ನ ಜೋಡಿಸಿ ಸವಿ ನೆನಪಿಗಾಗಿ ಮಾಡಿಸಿದ ಚಂದದ ಚಿತ್ರ ಗೆಳೆತನದ ಮಹತ್ವ ಸಾರುತ್ತದೆ..


ಕೆಲವು ಮೆಲುಕು ಹಾಕುವ ಪಲುಕುಗಳು..ಕೆಳಕಂಡ ಚಿತ್ರಗಳಲ್ಲಿ..






ಓಹ್ ದೇವರೇ ಈ ಗೆಳೆತನದ ಸವಿ ಸದಾ ಹೀಗೆಯೇ ಮೇಲು, ಕೀಳು ಎನ್ನದೆ, ಭಾವ, ಅಂತಹಕರಣ, ಪ್ರತಿಭಾಶಾಲಿಗಳಾದ ಕಲಿಯುಗದ ಪಾಂಡವರಿಗೆ ಉಣಬಡಿಸುತ್ತ ಇರಲಿ ಎಂದು ಪ್ರಾರ್ಥಿಸುತ್ತೇನೆ..!!!!