Thursday, October 24, 2019

ಸಿಬಿ ಜನುಮದಿನದ ಶುಭಾಷಯಗಳು

ಹರಿಯ ದಶಾವತಾರದ ಬಗ್ಗೆ ಓದಿದ್ದೇವೆ..ಕೇಳಿದ್ದೇವೆ.. ಅದೊಂದು ರೀತಿಯಲ್ಲಿ ದಿನ ನಿತ್ಯದ ವಿಷಯವಾಗಿ ಒಂದಲ್ಲ ಒಂದು ರೀತಿ ನಮ್ಮ ಸುತ್ತಲೂ ಸುತ್ತುತ್ತಲೇ ಇರುತ್ತದೆ.

ಗೆಳೆತನ ಅನ್ನೋದು ಸುಮ್ಮನೆ ಸಿಕ್ಕವರ ಜೊತೆಯಲ್ಲೆಲ್ಲ ಆಗೋಲ್ಲ.. ಗಾಢವಾದ ಗೆಳೆತನ ಆಗಬೇಕೆಂದರೆ ಅಷ್ಟೇ ಆಳವಾದ ಬಂಧನ ಇರಬೇಕು.. ಅಂತಹ ಅತ್ಯುತ್ತಮ ಗೆಳತೀ ನಿವೇದಿತಾ ಚಿರಂತನ್ ಅಲಿಯಾಸ್ ಸಿಬಿ..

ಇವರ ಬುದ್ದಿಮತ್ತೆ, ವಿಷಯ ಚರ್ಚಿಸುವಿಕೆ, ಕಲೆ, ಸಾಹಿತ್ಯ ಇವನ್ನೆಲ್ಲ ಒಮ್ಮೆ ಗಮನಿಸಿದಾಗ ನನಗೆ ಹೊಳೆದದ್ದು.. ಹತ್ತು ವಿಷಯಗಳಲ್ಲಿ ನಿಪುಣನಾದ ಪ್ರಚಂಡ ರಾವಣ ಒಂದು ಕಡೆಯಾದರೆ.. ಹತ್ತು ಅವತಾರಗಳನ್ನು ಎತ್ತಿದ ಹರಿಯ ನೆನಪು ಒಂದು ಕಡೆ..

ಬನ್ನಿ ಅದನ್ನು ಹಾಗೆ ಒಮ್ಮೆ ಗಮನಿಸಿ ಬರೋಣ..

ಮತ್ಸ್ಯಾವತಾರ : ವಿಷಯಗಳ ಪ್ರಳಯ ಆಗುವಾಗ.. ಅದನ್ನು ಸರಿಯಾಗಿ ವಿಶ್ಲೇಷಿಸಿ ಅದಕ್ಕೊಂದು ಸರಿಯಾದ ನೆಲೆ ಕೊಡುತ್ತಾರೆ

ಕೂರ್ಮಾವತಾರ: ಚರ್ಚೆ ಮಾಡುವಾಗ ವಿಷಯದ ಭಾರಕ್ಕೆ.. ಚರ್ಚೆಗಳೇ ಮುಳುಗಿ ಹೋಗುವ ಸಂಭವ ಬಂದಾಗ ಕ್ಷೀರ ಸಾಗರವನ್ನು ಕಡೆಯುವಾಗ ಕೂರ್ಮ ಮುಳುಗುತ್ತಿದ್ದ ಮಂಧರ ಪರ್ವತವನ್ನು ತನ್ನ ಬೆನ್ನ ಮೇಲೆ ಹೊತ್ತು ಕಾರ್ಯ ನೆರವೇರುವಂತೆ ಇವರು ಕೂಡ ಚರ್ಚೆಯ ವಿಷಯ ಭಾರವಾಗಿ ಮುಳುಗದಂತೆ ನೋಡಿಕೊಳ್ಳುತ್ತಾರೆ

ವರಹ: ತನ್ನ ಗೆಳೆಯ ಗೆಳತಿಯರನ್ನು ರಕ್ಷಿಸುವ ಸಮಯ ಬಂದಾಗ ತಮ್ಮ ಶಕ್ತಿ ಮೀರಿ ಜೊತೆಯಾಗಿ ನಿಲ್ಲುತ್ತಾರೆ.. ಮತ್ತೆ ಅವರನ್ನು ಯಥಾಸ್ಥಿತಿಗೆ ತಲುಪಿಸುವಲ್ಲಿ ಯಶಸ್ವಿಯಾಗುತ್ತಾರೆ

ನರಸಿಂಹ: ನಂಬಿಕೆ, ಭಕ್ತಿಯಿಂದ ಪ್ರಹ್ಲಾದ ಸ್ತುತಿಸಿದಾಗ.. ಕಂಬದಿಂದ ಹೊರಗೆ ಬಂದು.. ರಕ್ಷಿಸಿದ ಹಾಗೆ.. ಇವರು ಜೊತೆಯಲ್ಲಿದ್ದಾಗ ಸೇಫ್ ಅನ್ನುವ ಭಾವ ಇರುತ್ತದೆ..

ವಾಮನ: ಆಕಾರದಲ್ಲಿ ಪುಟ್ಟದಾಗಿದ್ದರೂ ಇಡೀ ಮೂರುಲೋಕಗಳನ್ನು ತನ್ನ ಪಾದದಲ್ಲಿ ಅಳೆಯುವ ವಾಮನನಂತೆ.. ವಿಷಯ ಎಷ್ಟೇ ದೊಡ್ಡದಿರಲಿ.. ಅದರ ಆಕಾರಕ್ಕೆ ಬೆಳೆದು ವಿಷಯವನ್ನು ಮುಟ್ಟಿಸುವ ಪರಿ..

ಪರಶುರಾಮ: ಇಪ್ಪತ್ತದೊಂದು ಬಾರಿ ಭೂಮಂಡಲ ಸುತ್ತಿ ಕ್ಷತ್ರಿಯರನ್ನು ಅಳಿಸಿದಂತೆ.. ಇವರ ಜೊತೆಯಲ್ಲಿ ವಿಷಯವನ್ನು ಚರ್ಚಿಸಿದಷ್ಟು.. ಅದರಲ್ಲಿನ ಬೇಡವಾದ ವಿಷಯಗಳು ನಾಶವಾಗುತ್ತಾ ಹೋಗುತ್ತದೆ..

ರಾಮ: ರಾಮ ಭೋದಿಸಲಿಲ್ಲ.. ಆದರೆ ತಾನು ನೆಡೆದು ಅದನ್ನು ಮಾದರಿಯನ್ನಾಗಿ ಮಾಡಿದ.. ಇವರು ಹಾಗೆ ಹಾಗಿರಿ, ಹೀಗಿರಿ ಅಂತ ಹೇಳದೆ ತಮ್ಮ ವಿಚಾರಗಳ ಮೂಲಕ ತಮ್ಮ ಹಾದಿಯನ್ನು ತೋರುತ್ತಾರೆ..

ಕೃಷ್ಣ:  ಕೃಷ್ಣ ಬಿಡಿಸದ ಸಮಸ್ಯೆಗಳೇ ಇಲ್ಲ ಎನ್ನುತ್ತದೆ ಮಹಾಭಾರತ.. ಇವರ ಹತ್ತಿರ ಯಾವುದೇ ಸಮಸ್ಯೆ, ವಿಷಯಗಳನ್ನು ಹೇಳಿ.. ಅದನ್ನು ಬಿಡಿಸಿ ಅದಕ್ಕೆ ಒಂದು ತಾರ್ಕಿಕ ಪರಿಹಾರ ಕೊಡುತ್ತಾರೆ

ಬುದ್ಧ: ಸತ್ಯ , ಶಾಂತಿಗಾಗಿ ಬುದ್ಧ.. ಇವರ ಬಳಿ ಸತ್ಯ, ಶಾಂತಿ ಸದಾ ಇರುತ್ತದೆ.. ಮತ್ತೆ ಮಂದಸ್ಮಿತೆಯಾಗಿ ಗೆಳೆತನದ ಬಂಧವನ್ನು ಗಟ್ಟಿಗೊಳಿಸುತ್ತಾರೆ

ಕಲ್ಕಿ: ಯಾವುದೇ ವಿಷಯಗಳಲ್ಲಿ ಜಿಜ್ಞಾಸೆ ಮೂಡಿದಾಗ, ವಿಷಯ ಹಾದಿ ಬಿಟ್ಟು ಹೋಗುತ್ತಿದೆ ಎನ್ನುವಾಗ ಇವರ ಮಾತುಗಳು ವಿಷಯಗಳಿಗೆ ಮತ್ತೆ ಮರಳಿ ಬರುವುದೇ ಅಲ್ಲದೆ.. ಶಾಂತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ..

ಇಂತಹ ಹತ್ತಾರು ಸುಮಧುರ, ಸದ್ಗುಣಗಳ ಒಡತಿ ನನ್ನ ಆತ್ಮೀಯ ಗೆಳತೀ ಎನ್ನುವುದರಲ್ಲಿ ನನಗೆ ಹೆಮ್ಮೆ..

ಸಿಬಿ ಜನುಮದಿನದ ಶುಭಾಶಯಗಳು .. ಸುಂದರ ದಿನ ನಿಮದಾಗಲಿ.. !!!