Sunday, December 30, 2018

ಮತ್ತೆ ಬಾಲ್ಯಕ್ಕೆ ಶಾಲಾದಿನಗಳ ಕಡೆಗೆ.. 30.12.2018

​​
ಗೆಳೆತನ ಎಂದರೇನು..

ಶಾಲೆದಿನಗಳಲ್ಲಿಯಾಗಲಿ, ಸಹೋದ್ಯೋಗಿಗಳ ಜೊತೆಯಾಗಲಿ ಒಂದಷ್ಟು ಅದ್ಭುತ ಕ್ಷಣಗಳನ್ನು ನೆನೆಪಿಸಿಕೊಂಡು ಖುಷಿ ಪಡುವ ಆ ಘಳಿಗೆಗಳು ಅತ್ಯಮೂಲ್ಯ..

ಗೆಳೆತನ ಶುರುವಾಗೋದು ನಮ್ಮ ಪದವಿ, ಅಂತಸ್ತು, ಸಾಮಾಜಿಕ ಸ್ಥಾನಗಳಿಂದಲ್ಲ.. ಶುದ್ಧ ಮನಸ್ಸಿನ ಸರೋವರವದು.. ನಾವೆಲ್ಲಾ ಭೇಟಿಯಾಗೋದು ಇಂದು ನಾವೇನಾಗಿದ್ದೇವೆ ಎಂಬುದಕ್ಕಲ್ಲ.. ಅಂದು ನಾವು ಗೆಳೆಯರಾಗಿದ್ದೆವು ಇಂದೂ ಆ ಗೆಳೆತನದ ಭಾವವನ್ನು ಮುಂದುವರೆಸಿಕೊಂಡು ಹೋಗೋಣ ಎನ್ನುವ ಮನೋಸ್ಥಿತಿಯಿಂದ ಮಾತ್ರ ಭೇಟಿ ಸಾಧ್ಯ..

ಹೇಗೆ ನಿಂತಿದ್ದೇವೆ ಎನ್ನುವುದಕ್ಕಿಂತ ಗೆಳೆಯರ ಜೊತೆ ನಿಲ್ಲುವುದು ಮುಖ್ಯ..
(ಎಲ್ಲಾ ಗಾಡಿಗಳು ಒಂದು ದಿಕ್ಕಿನಲ್ಲಿ ನಿಂತಿದ್ದಾರೆ...
ಒಂದೇ ಒಂದು ಗಾಡಿ ವಿರುದ್ಧ ದಿಕ್ಕಿನಲ್ಲಿ ನಿಂತಿದೆ..
ಈ ಚಿತ್ರ ತೆಗೆಯಲು ಸ್ಫೂರ್ತಿ ನೀಡಿದ ರೂಪಶ್ರೀಗೆ ವಂದನೆಗಳು) 

ನ್ಯಾಷನಲ್ ಹೈ ಸ್ಕೂಲಿನಲ್ಲಿ ಓದಿದ್ದ ನಮ್ಮ ಸಹಪಾಠಿಗಳನ್ನು ಸುಮಾರು ೨೦೧೧ಇಸವಿಯಿಂದ ಅಂದ್ರೆ ಸುಮಾರು ಏಳು ವರ್ಷಗಳಿಂದ  ಭೇಟಿ ಮಾಡುತ್ತಲೇ ಇದ್ದೇವೆ.. ವರ್ಷ ವರ್ಷಕ್ಕೂ ಬರುವ ಗೆಳೆಯರ ಸಂಖ್ಯೆ ಬೆಳೆಯುತ್ತಿದೆ.. ಖುಷಿಯ ಸಂಗತಿ..  ಹಲವಾರು ವರ್ಷಗಳ ನಂತರ ಭೇಟಿಯಾದಾಗ ಸಿಗುವ ಆ ಖುಷಿ.. ಸಾಮಾಜಿಕ ಜಾಲತಾಣಗಳಿಲ್ಲದ ನಮ್ಮ ಆ ದಿನಗಳಿಂದ.. ಇಂದು ಬೆರಳಿನ ತುದಿಯಲ್ಲಿ ಪ್ರಪಂಚವೇ ಸಿಗುವ ಈ ದಿನಗಳ ನಡುವೆ ನಮ್ಮ ಗೆಳೆತನ ಗಟ್ಟಿಯಾಗಿ ನಿಂತಿರುವುದು ನಮ್ಮ ಶುದ್ಧ ಮನಸ್ಥಿತಿಯಿಂದ, ಗೆಳೆತನಕ್ಕೆ ಹಾತೊರೆಯುವ ನಮ್ಮೆಲ್ಲರ ಮನಸ್ಸಿನಿಂದ ಮಾತ್ರ..

ಅನಿಲ್,  ಗಿರೀಶ್ (ಎಚ್ ಡಿ ಮತ್ತು ಕೆ ಎಸ್), ಕಿರಣ್, ವೆಂಕಟೇಶ, ಚಂದ್ರಪ್ರಭ, ಕುಸುಮ, ನರೇಂದ್ರ ಇವರೆಲ್ಲಾ ಮೊದಲ ಬಾರಿಗೆ ಸಿಕ್ಕಾಗ ಸಂಭ್ರಮಿಸಿದ ಘಳಿಗೆಗಳು ಸೊಗಸಾಗಿದ್ದವು..

ಇಂದು ಕುಸುಮ ಮೊದಲ ಬಾರಿಗೆ ನಮ್ಮ ಗೆಳೆತನದ ಭೇಟಿಗೆ ಬಂದಾಗ.. ಅವರ ಮಾತುಗಳಲ್ಲಿ ನಾ ಕಂಡಿದ್ದು.. ಹೇಗೆ ಮಾತಾಡುವುದು, ಏನು ಮಾತಾಡುವುದು ಎನ್ನುವ ಗೊಂದಲ ಎನ್ನುವುದಕ್ಕಿಂತ ಹಿಂಜರಿಕೆ.. ಆದರೆ ನಮ್ಮ ವೆಂಕಿ ಇದ್ದಾನಲ್ಲ. ಅವನು ಯಾರನ್ನು ಆ ಗೊಂದಲದಲ್ಲಿ ಇರಲು ಬಿಡುವುದಿಲ್ಲ.. ಅವರ ಲೆವೆಲ್ಲಿಗೆ ಹೋಗಿ ಮೆಲ್ಲಗೆ ಕೈಹಿಡಿದು ನಮ್ಮೆಲ್ಲರ ಲೆವೆಲ್ಲಿಗೆ ಕರೆತರುವ ಅವನ ಮಾತುಗಳಿಗೆ ಸೋಲದವರು ಯಾರಿದ್ದಾರೆ..


ಸ್ವಲ್ಪ ಹೊತ್ತಿನಲ್ಲಿಯೇ ಕುಸುಮ ಸಹಜವಾಗಿ ಮಾತಾಡಲು ಶುರುಮಾಡಿದಳು... ಶಶಿ ಜೊತೆ ಫಾರ್ಮಲ್ ಆಗಿ ಆಡುತ್ತಿದ್ದ ಮಾತುಗಳು ವೆಂಕಿ ಬಂದಮೇಲೆ ಆರಾಮಾಗಿ ಶುರುವಾಯಿತು.. ನಂತರ ಲೀಲಾ, ರೂಪ, ಚಂದ್ರಪ್ರಭ ಬಂದ ಮೇಲೆ ಇನ್ನಷ್ಟು ಹಗುರಾಯಿತು.. ಆಗ ಸಿಕ್ಕಿದ್ದು ಮಾಸ್ಟರ್ ಸ್ಟ್ರೋಕ್ ಗಿರೀಶ್.. ಅವನ ಲೀಲಾಜಾಲವಾದ ಮಾತುಗಳು ಎಲ್ಲರನ್ನು ಇನ್ನಷ್ಟು ಹಗುರ ಮಾಡಿತು.. ಇಂದು ನಾವೆಲ್ಲರೂ ನಮ್ಮ ನಮ್ಮ ಕ್ಷೇತ್ರಗಳಲ್ಲಿ ಬೆಳೆದು ನಿಂತಿದ್ದೇವೆ ನಿಜ.. ಆದರೆ ನಮ್ಮ ಭೇಟಿ ನಾವು ಮೂರು ವರ್ಷ ಹೈ ಸ್ಕೂಲ್ ದಿನಗಳ ಗೆಳೆತನದ ಸುತ್ತ ಮಾತ್ರ ಸುತ್ತುತ್ತಿತ್ತು..


ಅಮೆರಿಕಾದಲ್ಲಿರುವ ರಮೇಶ್ ಸ್ಕೈಪ್ ಆಪ್ ಮೂಲಕ ನಮ್ಮೆಲ್ಲರ ಜೊತೆ ಮಾತಾಡಿದ್ದು..  ಬಹಳ ವರ್ಷಗಳ ನಂತರ ಸಿಕ್ಕಿದ್ದು ಅವನಿಗೂ ಖುಷಿ.. ಗೆಳೆಯನ ಜೊತೆ ಮಾತಾಡಿದ್ದು ನಮಗೂ ಖುಷಿ.. ಸುಮಾರು ಹದಿನೈದು ನಿಮಿಷಗಳು ಕರೆ ಮೂವತ್ತು ವರ್ಷಗಳ ಇತಿಹಾಸವನ್ನು ರೀವೈ೦ಡ್ ಮಾಡಿತ್ತು...

ಪ್ರಸಾದ್ ಬಂದ...  ಮಾತುಗಳು ಇನ್ನಷ್ಟು ಹಾಸ್ಯವನ್ನು ತುಂಬಿಕೊಂಡವು.. ಗೆಳೆಯರ ಕಾಲು ಎಳೆಯುವುದು, ನಗುವುದು ನೆಡೆದಿತ್ತು.. ಶ್ರೀಧರ ಬಂದ ಮೇಲೆ ವೆಂಕಿಯ ಸುತ್ತಾ ಮಾತುಗಳು ಜಾಸ್ತಿಯಾದವು.. (ಇಲ್ಲ ಇಲ್ಲ ಮುತ್ತತ್ತಿ ಅಡಿಗೆಯ ವಿಷಯ ಮಾತಾಡೋಲ್ಲ). ಮಾತು ಮಾತು ಮಾತು ಮುಗಿಯದಷ್ಟು ಮಾತುಗಳು.. ಗಿರೀಶನ ಶಾಲಾದಿನಗಳ ಘಟನೆಗಳು, ಹದಿನೈದು ವರ್ಷಗಳು ಸತತವಾಗಿ ಈ ಕೆಳಗಿನ ಶ್ಲೋಕವನ್ನು ಹೇಳಿದ ದಾಖಲೆ ಅವನದು ..

ಯಂ ಬ್ರಹ್ಮಾವರುಣೇಂದ್ರ ರುದ್ರಮರುತಃ
ಸ್ತುನ್ವಂತಿ ದಿವ್ಯೈಃ ಸ್ತವೈಃ
ವೇದ್ಯೆಸ್ಸಾಂಗಪದಕ್ರಮೋಪನಿಷದೈಃ
ಗಾಯಂತಿ ಯಂ ಸಾಮಗಾಃ
ಧ್ಯಾನಾವಸ್ಥಿತ ತದ್ಗತೇನ ಮನಸಾ
ಪಶ್ಯಂತಿ ಯಂ ಯೋಗಿನಃ
ಯಸ್ಯಾಂತಂ ನ ಮಿದುಸ್ಸುರಾಸುರ ಗಣಾಃ
ದೇವಾಯ ತಸ್ಮೈ ನಮಃ.. ಇನ್ನೂ ಇದೆ..


ಮಾತುಗಳ ಬತ್ತಳಿಕೆ ಮುಗಿದಿರಲಿಲ್ಲ.. ಆದರೆ ಹೊಟ್ಟೆ ಚುರುಗುಟ್ಟುತ್ತಾ ಇತ್ತು.. ಹಾಗಾಗಿ.. ಎಸ್ ಎಲ್ ವಿ ಕಡೆಗೆ ಹೆಜ್ಜೆ ಹಾಕಿದೆವು.. ಅಲ್ಲಿ ತಿಂದದ್ದು ಹೋಟೆಲಿನವ ತಂದು ಕೊಟ್ಟಿದ್ದನ್ನು ಆದರೆ.. ಅದರಿಂದ ಹೊಟ್ಟೆ ತುಂಬಿದ್ದಕಿಂತ ನಮ್ಮೆಲ್ಲರ ಹಾಸ್ಯ ಚಟಾಕಿಗಳಿಂದ ಹೊಟ್ಟೆ ತುಂಬಿದ್ದು ಹೆಚ್ಚು.. ಕೆಲವರಿಗೆ ಕಣ್ಣಲ್ಲಿ ನೀರು ತರಿಸುವಷ್ಟು ನಗೆ ಬಂದರೆ, ಇನ್ನು ಕೆಲವರಿಗೆ ಮಾತಾಡಲು ಆಗದಷ್ಟು ನಗೆ ಹೂರಣ ಬಡಿಸಿತ್ತು.. ಗಿಜಿಗಿಜಿ ಗುಟ್ಟವ ಭಾನುವಾರದ ದಿನವೂ, ನಮ್ಮ ಮಾತುಗಳಿಂದ ಅಲ್ಲಿ ಒಂದು ದೊಡ್ಡ ಸ್ಫೋಟವೇ ಆಗಿತ್ತು... ಅಕ್ಕಪಕ್ಕದವರ ಪರಿವೆ ನಮಗ್ಯಾರಿಗೂ ಇರಲಿಲ್ಲ.. ನಾವು  ನಮ್ಮ ಮಾತುಗಳು ನಮ್ಮ ಗೆಳೆಯರು.. ಇಷ್ಟೇ ತಲೆಯಲ್ಲಿದ್ದದ್ದು..


ಅನೂಪ್ ನಮ್ಮ ಗ್ಯಾಂಗ್ ಸೇರಿದ್ದು ತಡವಾಗಿದ್ದರೂ ... ಅವನ ಮಾತುಗಳು ಹಾಸ್ಯರಸವನ್ನು ಇನ್ನಷ್ಟು ಮೇಲಕ್ಕೇರಿಸಿತ್ತು .. ಇನ್ನೊಂದಷ್ಟು ಮಾತುಗಳು, ಅವನ ಕೆಲವು ಅನುಭವಗಳು ಮುದನೀಡಿತ್ತು..

ನಾವು ಸೇರಿದ್ದೇವೆ ಅಂದರೆ ಏನಾದರೂ ತರಲೆ ಇರಲೇ ಬೇಕಲ್ಲವೇ.. ಲೀಲಾ.. ಫೈರ್ ಪಾನ್ ತಿಂತೀನಿ ಅಂದಾಗ ನಮ್ಮೆಲ್ಲರ ಮೊಬೈಲ್, ಕ್ಯಾಮೆರಾ ಅತ್ತ ಕಡೆ ತಿರುಗಿತ್ತು.. ಮುಂದೆ ನೆಡೆದದ್ದು ಇನ್ನೊಂದು ನಗೆಯ ಮೆರವಣಿಗೆ.. ಫೈರ್ ಪಾನ್ ಹೇಗಿತ್ತು ಹೇಗಿರಲಿಲ್ಲ ಎನ್ನುವುದಕ್ಕಿಂತ... ನಮ್ಮ ನಗೆಯ ತೇರನ್ನು ಎಳೆಯೋಕೆ ಇನ್ನೊಂದು ಅಸ್ತ್ರ ಸಿಕ್ಕಿದ್ದು ಸುಳ್ಳಲ್ಲ..



ಈ ಭೇಟಿಗಳಲ್ಲಿ ಸಾಮಾನ್ಯ ಎರಡು ಘಂಟೆ ಕಳೆಯುವ ನಾವು ಇಂದು.. ಬೆಳಿಗ್ಗೆ ಹನ್ನೊಂದರಿಂದ ಓಹ್ ಸಾರಿ ಹತ್ತು ಮುಕ್ಕಾಲು ಘಂಟೆಯಿಂದ ಮದ್ಯಾನ್ಹ ಮೂರುವರೆ ಘಂಟೆಯ ತನಕ ನಾನ್ ಸ್ಟಾಪ್ ಹಾಸ್ಯ ಬಸ್ಸಲ್ಲಿ ಓಡಾಡಿದ್ದು ವಿಶೇಷ..



ಮೂರು ದಾರಿ ಸೇರುವ ಜಾಗದಲ್ಲಿ ಗಣಪತಿಯ ವಿಗ್ರಹ, ಫೋಟೋ ಇಟ್ಟು ಪೂಜಿಸುತ್ತಾರೆ.. ಎಲ್ಲೆಡೆಯೂ ಕಾಣುವ ಆ ಮಹಾಮಹಿಮನನ್ನ ಮರದಲ್ಲಿ ಕಂಡರೆ.. ಎಲ್ಲಾ ದಿಕ್ಕುಗಳಲ್ಲಿಯೂ ಪಸರಿಸಿರುವ ನಮ್ಮ ಗೆಳೆತನದ ಅಧಿನಾಯಕ ನಮ್ಮೆಲ್ಲರ ಮನಸ್ಸು. ಅದನ್ನು ನಮ್ಮ ಎಲ್ಲಾ ಗೆಳೆಯರ ಮನದಲ್ಲಿ ಕಾಣುತ್ತಿದ್ದೇವೆ..  ಅದಕ್ಕೆ ಒಂದು ಸಲಾಂ ಹೇಳೋಣ ಅಲ್ಲವೇ..
ಲೋ ಶ್ರೀಕಿ ಈ ಚಿತ್ರ ತೆಗೆಯೋ ನಿನಗೆ ಬರೆಯೋದಕ್ಕೆ
ಉಪಯೋಗವಾಗುತ್ತದೆ ಎಂದ ವೆಂಕಿಗೆ ಒಂದು ಸಲಾಂ 
ಒಂದು ಭಾನುವಾರವನ್ನು ಆಲಸ್ಯವಾಗಿ ಅದರಲ್ಲೂ ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ಆರಾಮಾಗಿ ಕಳೆಯುವ ಭಾನುವಾರವನ್ನು ಸಂತಸ, ಉಲ್ಲಾಸಯುಕ್ತ ದಿನವನ್ನಾಗಿ ರೂಪಿಸಿಕೊಂಡಿದ್ದು ನಮ್ಮ ಗೆಳೆತನದ ವಿಶೇಷವಾಗಿತ್ತು..

ಏನೀ ಸ್ನೇಹ ಸಂಬಂಧ ಎಲ್ಲಿಯದೋ ಈ ಅನುಬಂಧ.. ಗೆಳೆತನ ಇರಲಿ ಚಿರಕಾಲ.. 

Thursday, December 20, 2018

ರಂಗೋಲಿ ಹತ್ರ .. !!!

ರಾಜೀವನಿಗೆ ತಲೆ ಪೂರ್ತಿ ಕೆಟ್ಟುಹೋಗಿತ್ತು.. ಖುಷಿ ಪಡಬೇಕೋ ಇಲ್ಲಾ ಹೀಗಾಯ್ತಲ್ಲ ಅಂತ ತಲೆ ಚಚ್ಚಿಕೊಳ್ಳಬೇಕೋ ಗೊತ್ತಾಗುತ್ತಿರಲಿಲ್ಲ.. ವೃತ್ತಿಯಲ್ಲಿ ಬಹುಮಟ್ಟಿಗೆ ಯಶಸ್ಸು ಸಾಧಿಸಿದ್ದ ತನ್ನ ನೂರಾರು ವೃತ್ತಿ ಸಂಬಂಧಿ ಕಂಪನಿಗಳ ನೊರೆಂಟು ಸಮಸ್ಯೆಗಳನ್ನು ನಗು ನಗುತ್ತ ಬಿಡಿಸಿದವನಿಗೆ ತಲೆ ಚಿಟ್ಟು ಹಿಡಿದಿತ್ತು..

ತನ್ನ ಆಪ್ತ ಗೆಳೆಯ ರವೀಂದ್ರನಿಗೆ ಹೇಳಿಕೊಂಡ.. "ಲೋ ಗುರು.. ಇದಕ್ಕೆ ಯಾಕೆ ಅಷ್ಟೊಂದು ತಲೆ ಕೆಡಿಸ್ಕೊತೀಯ.. ಪಾನಿ ಪುರಿ ಕೊಡಿಸ್ತೀಯಾ.. ಐಡಿಯಾ ಕೊಡ್ತೀನಿ"

"ಅಷ್ಟೇ ತಾನೇ.. ಆಗಲಿ" ಹೊಟ್ಟೆ ತುಂಬಾ ಪಾನಿ ಪುರಿ ಸೇವೆ ಆಯಿತು..

 ರವೀಂದ್ರ.. ಮೆಲ್ಲಗೆ ಕಿವಿಯಲ್ಲಿ ಏನೋ ಉಸುರಿದ ..

ಮತ್ತೇನೂ ಮಾಡದೆ.. ಹೊಸದಾಗಿ ಕೊಂಡಿದ್ದ ಜಾವಾ ಬೈಕ್ ಹತ್ತಿ ಹೊರಟ .. ಮನಸ್ಸು ಹಗುರಾಗಿರಲಿಲ್ಲ ಆದರೆ ಕತ್ತಲೆ ಸುರಂಗದಲ್ಲಿ ಎಲ್ಲೋ ಒಂದು ಬೆಳಕಿನ ಬಿಂದು ಕಂಡ ಹಾಗಿತ್ತು ರವೀಂದ್ರನ ಮಾತುಗಳು..

ದೊಡ್ಡದಾದ ಕಟ್ಟಡ.. ಆಧುನಿಕ ವಿನ್ಯಾಸದಿಂದ ಸೊಗಸಾಗಿತ್ತು.. ಸೆಕ್ಯೂರಿಟಿ ಕಚೇರಿಯಲ್ಲಿ ತನ್ನ ಹೆಸರು ವಿಳಾಸ ಯಾರನ್ನು ಭೇಟಿ ಮಾಡಬೇಕು ಎಲ್ಲಾ ವಿವರವನ್ನು ಬರೆದು.. ಲಿಫ್ಟ್ ಇದ್ದರೂ ೨೮ನೇ ಮಹಡಿಗೆ ಮೆಟ್ಟಿಲುಗಳನ್ನೇ ಆಶ್ರಯಿಸಿದ.. ಏನೂ ಹೇಳಬೇಕು ಏನು ಕೇಳಬೇಕು.. ಹೇಗೆ ವಿವರಿಸಬೇಕು ಎಂದೆಲ್ಲ ಮನದಲ್ಲಿಯೇ ತಾಲೀಮು ಮಾಡಿಕೊಳ್ಳಲು ಈ ಮೆಟ್ಟಿಲು ಶ್ರಮ ಸಹಾಯ ಮಾಡುವುದು ಎನ್ನುವುದು ಅವನ ಎಣಿಕೆಯಾಗಿತ್ತು..

"ನಮಸ್ಕಾರ ನಾನು ರಾಜೀವ್.. ರವೀಂದ್ರ ಕಳಿಸಿದ್ದಾರೆ.. ಮೃಣಾಲಿನಿ ಮೇಡಂ ಅವರನ್ನು ಭೇಟಿ ಮಾಡಬೇಕಿತ್ತು.. " ಇಷ್ಟು ಹೇಳಿ ಸುಸ್ತಾಗಿತ್ತು.. ಅಲ್ಲಿಯೇ ಇದ್ದ ಸೋಫಾದ ಮೇಲೆ ಸ್ವಾಗತಕಾರಿಣಿ ಹೇಳುವುದಕ್ಕೆ ಮೊದಲೇ ಹೋಗಿ ಕೂತ...

ರಾಜೀವ್ ಸರ್... ಐದು ನಿಮಿಷ ಬಿಟ್ಟು.. ಮೇಡಂ ಅವರ ಕ್ಯಾಬಿನಿಗೆ ಹೋಗಬಹುದು.."

ಕ್ಯಾಬಿನ್ ಸುಂದರವಾಗಿ ಸಜ್ಜಾಗಿತ್ತು.. ಅಲ್ಲಿದ್ದ ಒಂದು ಚಿತ್ರ ಅವನು ಬಂದಿದ್ದು ಸರಿಯಾದ ಸ್ಥಳ ಎಂದು ಅರಿವಾಯಿತು..

"ಹೇಳಿ ರಾಜೀವ್.. ರವೀಂದ್ರ ಎಲ್ಲಾ ಹೇಳಿದ್ದಾರೆ.. ಎಲ್ಲಿ ಕೊಡಿ ಆ ವಿವರಗಳನ್ನು"

ಏಕ್ ದಂ ವಿಷಯಕ್ಕೆ ಬಂದಿದ್ದು.. ಆಕೆಯ ವೃತ್ತಿಪರತೆಯನ್ನು ಎತ್ತಿ ತೋರಿಸಿತು.

ಅಲ್ಲಿದ್ದದ್ದು ೩೦೦ ಸೆಕೆಂಡ್ಸ್.. ೩೦೧ ಸೆಕೆಂಡ್ ಕ್ಯಾಬಿನ್ ಹೊರಗಡೆ ಇದ್ದ.. ಹೋಗುವ ಮುನ್ನ.. ಬ್ಯಾಂಕ್ ಅಕೌಂಟ್ ವಿವರ ಕೊಟ್ಟಿದ್ದರು.. ಒಂದು ವಾರ ಕಳೆದ ಮೇಲೆ.. ಅಕೌಂಟಿಗೆ ಹಣ ಜಮಾ ಮಾಡಿದ ಮೇಲೆ ಬರೋಕೆ ಹೇಳಿದ್ದರು.. 

ಕೆಲಸದ ಗಡಿಬಿಡಿಯಲ್ಲಿ ವಿಚಾರ ಮರೆತು ಹೋಗಿತ್ತು.. ಆತನ ಸಹಾಯಕ .. "ಸರ್.. ನಿಮ್ಮ ಕ್ಯಾಲೆಂಡರ್ ಪ್ರಕಾರ ನಾಳೆ ೧೨ ಘಂಟೆಗೆ #$#$#$ ಆಫೀಸ್ ನಲಿ ಮೀಟಿಂಗ್ ಇದೆ" ಎಂದ ಮೇಲೆ ಅರಿವಾಗಿದ್ದು..

"ಸರಿ  ಥ್ಯಾಂಕ್ ಯು"

ಮಾರನೇ ದಿನ ಹೊರಟಿದ್ದ ..ಮತ್ತೆ ಜಾವ ಬೈಕಿನಲ್ಲಿ..

ಮೃಣಾಲಿನಿ ಎದ್ದು ನಿಂತು.. ಬನ್ನಿ ರಾಜೀವ್.. ರಿಪೋರ್ಟ್ ನಿಮ್ಮ ಜಿ-ಮೈಲ್ ಗೆ ಕಳಿಸಿದ್ದೇನೆ.. ಇದಕ್ಯಾಕೆ ಇಷ್ಟೊಂದು ತಲೆ ಕೆಡಿಸಿಕೊಂಡಿದ್ರಿ.. ಇದೊಂದು ಪ್ರೇಮಯಾಚನೆ ಅಷ್ಟೇ.. ಜಸ್ಟ್ ಚಿಲ್" ಎಂದು ಹಸ್ತ ಲಾಘವ ಮಾಡಿ.. ಕರೆ ಸ್ವೀಕರಿಸಿ ಮಾತಾಡತೊಡಗಿದರು ಮೃಣಾಲಿನಿ..

ಎಲ್ಲಾ ಗೊಂದಲ.. ಸ್ವಾಗತಕಾರಿಣಿ.. ಸರ್ ನೀವು ಆ ಗೆಸ್ಟ್ ಮೀಟಿಂಗ್ ರೂಮ್ ಉಪಯೋಗಿಸಬಹುದು.. ವೈಫೈ ಪಾಸ್ವರ್ಡ್ ಕೊಡ್ತೀನಿ.. ಮೇಲ್ ಚೆಕ್ ಮಾಡಿ. ನಿಮಗೆ ಸಮಾಧಾನವಾದ ಮೇಲೆ ನೀವು ಮೇಡಂ ಹತ್ರ ಮಾತಾಡಬಹುದು.. " ಎನ್ನುತ್ತಾ  ಹಲೋ ಯಸ್.. ಕಮ್ ಟು ಟ್ವೆಂಟಿ ಏಟ್ ಫ್ಲೋರ್" ಎನ್ನುತ್ತಾ ಬ್ಯುಸಿಯಾದಳು ಆಕೆ..

ಎಲ್ಲಾ ಅಯೋಮಯ.. ಇದು ಯಾರು ಬರೆದ ಕತೆಯೋ ನನಗಾಗಿ ಬಂದ ವ್ಯಥೆಯೋ ಎನ್ನುತ್ತಾ ಲ್ಯಾಪ್ಟಾಪ್ ಬಿಚ್ಚಿದ..

"ಹಲೋ ರಾಜೀವ್.. ಇದೊಂದು ಪ್ರೇಮ ಪತ್ರ . ನೋಡಿ ವಿವರವಾಗಿ ನೀಡುತ್ತೇನೆ.. PPT ಓಪನ್ ಮಾಡಿ.. "

PPT ಬಿಚ್ಚಿಕೊಳ್ಳುತ್ತಾ ಹೋಯಿತು..

ಪ್ರಿಯ ರಾಜೀವ್ ನಾನು ನಿಮ್ಮನ್ನು ಪ್ರೀತಿಸುತ್ತೇನೆ.. ಇದಕ್ಕೆ ಸಾಕ್ಷಿ ಶಂಖ .. ನನ್ನ ಪ್ರೀತಿ ಶಂಖದ ಹಾಗೆ.. ಪ್ರೀತಿಯನ್ನು ಕೂಗಿ ಹೇಳುತ್ತದೆ.. ಚಕ್ರ.. ನಿಮ್ಮ ಸುತ್ತಲೂ ಸುತ್ತುತ್ತಲೇ ಇರುತ್ತದೆ.. ನಕ್ಷತ್ರಗಳು.. ನನ್ನ ಕಣ್ಣಿನಲ್ಲಿ ನಿಮ್ಮನ್ನು ಕಂಡಾಗ ಹೊಮ್ಮುವ ಮಿಂಚು ಅದು.. ಅದರ ಸುತ್ತಲೂ ಇರುವ ವೃತ್ತವೆ ನಮ್ಮ ಜೀವನದ ಪರಿಧಿ.. !!!



ನಿಮ್ಮನ್ನು ನಾನು ಎಷ್ಟು ಇಷ್ಟ ಪಡುತ್ತೇನೆ ಹುಲಿ ಮುದ್ದು ಎನ್ನುತ್ತಾರೆ ಅಲ್ವ.. ಹಾಗೆ ಮಧ್ಯದಲ್ಲಿರುವ ಹುಲಿಯ ಮೈಮೇಲಿನ ಪಟ್ಟೆಗಳು ಹೇಳುತ್ತವೆ.. ನಾ ನಿಮ್ಮನ್ನು ಅಷ್ಟು ಗಾಢವಾಗಿ ಪ್ರೀತಿಸುತ್ತೇನೆ ಎನ್ನುವುದಕ್ಕೆ ಆ ಹುಲಿ ಪಟ್ಟೆಗೆ ಹಾಕಿರುವ ಗಟ್ಟಿ ಬೇಲಿಯೇ ಸಾಕ್ಷಿ.. !

 ವಯ್ಯಾರದಿಂದ ನಿಮ್ಮನ್ನು ಆಕರ್ಷಿಸೋಕೆ ಆಗೋಲ್ಲ ಅಂತ ಗೊತ್ತು.. ನಿಮ್ಮ ಪ್ರೀತಿ ಹಸಿರಿನ ಹಾಗೆ.. ಉಸಿರು ಸೇರಿದಾಗ ಮಾತ್ರ ನಳನಳಿಸೋದು.. ನಿಮಗೆ ಬಿಳಿ ಬಣ್ಣ ಇಷ್ಟ .. ಅದಕ್ಕೆ ಆ ಹಸಿರಾದ ಪ್ರೀತಿಗೆ ಬಿಳಿಯ ಸಂಕೋಲೆ ಹಾಕಿದ್ದೇನೆ.. !

 ನನಗೆ ಗೊತ್ತು.. ಮೇಲಿನ ರಂಗೋಲಿಗಳನ್ನು ನೋಡಿದ ಮೇಲೆ.. ನಿಮ್ಮ ಮನಸ್ಸಿಗೆ ಅನುಮಾನ ಶುರುವಾಗಿರುತ್ತೆ... ಯಾರಪ್ಪ ಇವಳು. ಹೀಗೆ ಕಾಡುತ್ತಿದ್ದಾಳೆ ಅಂತ.. ಅದಕ್ಕೆ ಬೂದು ಬಣ್ಣ ಉಪಯೋಗಿಸಿದ್ದೇನೆ.. ಆದರೆ ರಾಜೀವ ನೀವು ನನ್ನ ಜೀವ ಕಣ್ರೀ ಅದಕ್ಕೆ ಗೆರೆಗಳು ಇವೆ. ಅಂಕುಡೊಂಕಾದ ಗೆರೆಗಳು ಇವೆ.. ಇದು ನಿನಗೆ ಹೇಗೆ ಬೇಕೋ ಹಾಗೆ ನಾ ಬದಲಾಗುತ್ತೇನೆ ಎನ್ನುವುದು ತೋರಿಸುತ್ತದೆ.. !!!

ಆಹಾ ಕಳ್ಳ.. ಮೇಲಿನ ವಿವರಣೆ ಓದಿದ ತಕ್ಷಣ.. ಮುಖ ನೋಡಿ ಕೆಂಪಾಯಿತು.. ರಾಜೀವ ನಿಮ್ಮನ್ನು ಸದಾ ನಗು ನಗುತ್ತಾ ಇರುವಂತೆ ನೋಡಿಕೊಳ್ಳುವುದೇ ನನ್ನ ಉದ್ದೇಶ.. ಹಸಿರಾದ ಪ್ರೀತಿ ನಿಮ್ಮ ನಾಚಿಕೆಯಿಂದ ಕೆಂಪಾದ ಮೊರೆಯನ್ನು ಕಾಪಾಡುತ್ತದೆ.. ಎಂಗೆ.. !


ನಿಮ್ಮ ಕಣ್ಣುಗಳು ಬಾಗಿದೆ.. ಹೃದಯ ಮಿಡಿಯುತ್ತಿದೆ.. ನಿಮ್ಮ ಕಣ್ಣುಗಳಲ್ಲಿ ಹೊಳಪನ್ನು ಕಾಣುತ್ತಿದ್ದೇನೆ.. ಮಳೆಬಂದಾಗ ಗರಿ ಬಿಚ್ಚಿ ಹಾಡುವ ನವಿಲಿನಂತೆ ನನ್ನ ಮನಸ್ಸಾಗಿದೆ.. ಹಾರಲೇ.. ಕುಣಿಯಲೇ.. ನಲ್ಲ ನಿನಗಾಗಿ ನಾ ಇರುವೆ.. !!!


ನಿನ್ನ ಒಪ್ಪಿಗೆ ಸಿಕ್ಕಿದ್ದು ನನಗೆ ಖುಷಿಯಾಗುತ್ತಿದೆ.. ಅದಕ್ಕೆ ಮೆಟ್ಟಿಲುಗಳ ಸೋಪಾನ ಮಾಡಿದ್ದೇನೆ.. ಈ ಪ್ರೀತಿಯ ವೃತ್ತದಲ್ಲಿ ಒಂದೊಂದೇ ಮೆಟ್ಟಿಲನ್ನು ಏರಿ ಬನ್ನಿ.. ಜೊತೆಯಾಗೋಣ.. ಜೊತೆ ಹಾಡೋಣ.. !!!


 ನನಗಾಗಿ ನಾ ಏನೂ ಕೇಳಿಕೊಳ್ಳುವುದಿಲ್ಲ.. ಆದರೆ ನನಗೆ ಮೂಗಿನ ನತ್ತು ಎಂದರೆ ಬಹಳ ಇಷ್ಟ.. ಅದರಲ್ಲೂ ಸುಮ್ನೆ..  ಹರಳಿನ ಮೂಗುತಿ ಹಾಕಿಕೊಳ್ಳುವುದಕ್ಕಿಂತ ರಿಂಗ್ ಹಾಕಿಕೊಳ್ಳೋದು ಇಷ್ಟ.. ನಿಮಗೂ ಇಷ್ಟ ಅಂತ ಗೊತ್ತು .. ಕೊಡಿಸ್ತೀರಾ ಆಲ್ವಾ.. !!!

ನಿಮ್ಮ ಮನದಲ್ಲಿ ಹಾಡುತ್ತಿರುವ ಹಾಡು ಹೇಳಲೇ.. "ಆನೆಯ ಮೇಲೆ ಅಂಬಾರಿ ಕಂಡೆ.. ಅಂಬಾರಿ ಒಳಗೆ ನಿನ್ನನ್ನೇ ಕಂಡೆ.. ನನ್ನೇ ನಾ ಕಂಡೇ.. ಪಕ್ಕದಲ್ಲಿ ನನ್ನೇ ನಾ ಕಂಡೆ.. !!! ಬಾರೋ ರಾಜೀವ ನೀನೆ ರಾಜ.. ನಾನೇ ರಾಣಿ.. ಈ ಜಗತ್ತೇ ನಮ್ಮ ರಾಜ್ಯ.. ಆಳೋಣ.. ಅರಳೋಣ.. ಬೆಳೆಯೋಣ.. ಪ್ರೀತಿಯಲ್ಲಿ ಮೀಯೋಣ !!!


 ರಾಜೀವ ನಿಮ್ಮ ತಲೆ ಗರ ಗರ ತಿರುಗುತ್ತಿದೆಯೇ.. ಖಂಡಿತ ಬೇಡ.. ನೋಡಿ ಇದು ಬರಿ ಚಕ್ರವಲ್ಲ ..ನಮ್ಮ ಜೀವನ ಚಕ್ರ.. ತಿರುಗುತ್ತ ತಿರುಗುತ್ತ ಎಲ್ಲ ಬಣ್ಣಗಳು ಒಂದಾಗಿ ಬಿಳಿಯ ಬಣ್ಣವಾಗುತ್ತದೆ.. ಏಳು ಸ್ವರವು ಸೇರಿ ಸಂಗೀತವಾಯಿತು.. ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಅಂತ ಹಾಡಿಲ್ಲವೇ.. ಹಾಗೆ ಹತ್ತು ರಂಗೋಲಿ ಸೇರಿ ನಮ್ಮ ಜೀವನವಾಯಿತು.. ಹತ್ತು ಚಿತ್ರಗಳು ನನ್ನ ಪ್ರೇಮ ಪಾತ್ರವಾಯಿತು .. ಐ ಲವ್ ಯು ರಾಜೀವ.. !!!

 ರಾಜೀವನ ಮೊಗದಲ್ಲಿ ನಗು, ಸಂತೋಷ.. "ಹುರ್ರೆ ಹುರ್ರೇ ಹುರ್ರೇ" ತಾನು ಕೂತಿದ್ದು ಬೇರೆಯವರ ಆಫೀಸಿನಲ್ಲಿ ಎನ್ನುವುದನ್ನು ಮರೆತು ತುಸು ಜೋರಾಗಿಯೇ ಕೂಗಿದ..

ಮೃಣಾಲಿನಿ ಏನಾಯಿತು ಎಂದು ತನ್ನ ಕ್ಯಾಬಿನ್ ಇಂದ ಹೊರಗೆ ಬಂದು ನೋಡಿದರೆ.. ರಾಜೀವ ಸಂತಸದಲ್ಲಿದ್ದಾನೆ.. ಹತ್ತಿರ ಬಂದು.. ರಾಜೀವನ ಬೆನ್ನು ತಟ್ಟಿ ಮೆಲ್ಲನೆ ಮೆಲ್ಲನೆ ಎನ್ನುವ ಸನ್ನೆ ಮಾಡಿ.. ಅವನ ಕೈಕುಲುಕಿ.. "ಅಲ್ ದಿ ಬೆಸ್ಟ್ ರಾಜೀವ್.. ನಿಮ್ಮ ಪ್ರಿಯತಮೆಗೆ ನನ್ನ ಶುಭಾಶಯ ತಿಳಿಸಿ.. "  

ಮೇಡಂ.. ಇದನ್ನು ಹೇಗೆ ಡಿಕೋಡ್ ಮಾಡಿದಿರಿ ಹೇಳ್ತೀರಾ ಪ್ಲೀಸ್.. ನನಗೆ ಬಂದ ಲಕೋಟೆಯ ಮೇಲೆ ಕಳಿಸಿದವರ ವಿಳಾಸವಿಲ್ಲ.. ಫೋನ್ ಇಲ್ಲ .. ಹ್ಯಾಂಡ್ ಡೆಲಿವೆರಿ ಮಾಡಿದ್ದಾರೆ.. ಹಾಗಾಗಿ ಯಾರು ಬಂದಿದ್ದಾರೆ ಎನ್ನುವುದನ್ನು ಸಿಸಿಟಿವಿ ಯಲ್ಲಿ ನೋಡಿದೆ.. ಆದರೆ ನಮ್ಮ ಇಡೀ ಕಟ್ಟಡಕ್ಕೆ ಪೇಪರ್ ಹಾಕುವಾಗ ಪೇಪರ್ ಜೊತೆ ಇದು ಬಂದಿದೆ. .ಹಾಗಾಗಿ ಖಚಿತವಾಗಿ ಇವರೇ ಅಂತ ಹೇಳೋಕೆ ಆಗೋಲ್ಲ.. ಪೇಪರ್ ಏಜೆಂಟ್ ಹತ್ರ ವಿಚಾರಿಸಿದೆ.. ಅವ ಹೇಳಿದ್ದು ಸಾರ್ ನಮಗೆ ಸಾವಿರ ಪಾಂಪ್ಲೆಟ್ ಹಾಕಿದರೆ ಇಷ್ಟು ದುಡ್ಡು ಅಂತ ಹೇಳುತ್ತಾರೆ.. ಕೆಲವೊಮ್ಮೆ ಪೇಪರ್ ಹಾಕುವ ಹುಡುಗರನ್ನು ಅಡ್ಜಸ್ಟ್ ಮಾಡಿಕೊಂಡು ಹಾಕಿಸುತ್ತಾರೆ.. ಹಾಗಾಗಿ ಇವರೇ ಅಂತ ಹೇಳೋಕೆ ಆಗೋಲ್ಲ ಸರ್ ಎಂದು ಹೇಳಿ ಕೈ ತೊಳೆದುಕೊಂಡ.. ಪ್ಲೀಸ್ ಹೇಳಿ.. "

ಮೃಣಾಲಿನಿ ಒಂದು ಸುಂದರ ನಗೆ ಬೀರಿ.. "ಅದೆಲ್ಲ ಬಿಡಿ.. ಈ ರಂಗೋಲಿ ನೋಡಿ ನನ್ನ ಮನದಲ್ಲಿ ಏನೋ ಹೊಳೆಯಿತು.. ಗೂಗಲ್ ಹುಡುಕಿದೆ . .ಯಾವ ಯಾವ ಬಣ್ಣ ಯಾವುದಕ್ಕೆ ಅಂತ ತಿಳಿಯಬೇಕಿತ್ತು.. ಅದು ಗೊತ್ತಾದ ಮೇಲೆ. ಪ್ರತಿದಿನವೂ ಈ ರಂಗೋಲಿಯ ವಿನ್ಯಾಸವನ್ನು ಅರ್ಥ ಮಾಡಿಕೊಳ್ಳತೊಡಗಿದೆ.. ರಂಗೋಲಿಯ ಆಕಾರ, ಬಣ್ಣ, ವಿನ್ಯಾಸ ಬದಲಾಗುತ್ತಲೇ ಹೋಗಿದ್ದು ಅರಿವಾಯಿತು.. ನನಗೆ ತೋಚಿದ ಎಲ್ಲಾ ವಿಚಾರವನ್ನು ಬರೆದಿಟ್ಟುಕೊಂಡು ಒಂದೊಂದೇ ಚಿತ್ರವನ್ನು ಅದರ ಕ್ರಮಾಂಕದ ಅನುಸಾರವಾಗಿ ಜೋಡಿಸಿಕೊಂಡೆ.. ವಿವರ ಸಿಕ್ಕಿತು.. "

"ಧನ್ಯವಾದಗಳು ಮೇಡಂ.. ನಿಮ್ಮಿಂದ ನನ್ನ ಭುಜದ ಮೇಲಿದ್ದ ಒಂದು ಹೊರೆ ಕಡಿಮೆಯಾಯಿತು.. ಧನ್ಯವಾದಗಳು ಮದುವೆಗೆ ಖಂಡಿತ ನೀವು ಬರಲೇ ಬೇಕು.. ".

ಇದೇನ್ರಿ. ಆಕೆ ನಿಮಗೆ ಬರಿ ಪ್ರೇಮ ಪಾತ್ರ ಕೊಟ್ಟಿರೋದು ಅಷ್ಟೇ.. ಆಗಲೇ ಮದುವೆಯ ತನಕ ಹೋಗಿಬಿಟ್ಟಿದ್ದೀರಾ. ಶಭಾಷ್.. "

"ಮೇಡಂ. ಇಷ್ಟು ತಿಳುವಳಿಕೆಯುಳ್ಳ ಹುಡುಗಿ ನನ್ನ ಮನೆ ಮನ ತುಂಬಲು ಸರಿಯಾಗಿದ್ದಾಳೆ.. ಅವಳೇ ನನ್ನ ಹುಡುಗಿ.. " ಕಣ್ಣು ಮಿಟುಕಿಸಿ ಸರ ಸರ ಮೆಟ್ಟಿಲಿಳಿದು ಮರೆಯಾದ...

"ಕಿರಣ್.. ಈ ಕೇಸ್ ಆಯ್ತು.. ಅಕೌಂಟ್ ಕ್ಲೋಸ್ ಮಾಡಿ.. ಮುಂದಿನ ಕೇಸ್ ಆ ಪರ್ಪಲ್ ರೈನ್ ಕೋಟ್ ಅದನ್ನು ಓಪನ್ ಮಾಡು .. ಮುಂದಿನ ವಾರದೊಳಗೆ ಅದಕ್ಕೆ ಒಂದು ದಾರಿ ಕಾಣಿಸೋಣ.. " ಎನ್ನುತ್ತಾ "ಬಣ್ಣ ನನ್ನ ಒಲವಿನ ಬಣ್ಣ" ಹಾಡುತ್ತ ತನ್ನ ಕ್ಯಾಬಿನಿಗೆ ಹೋದರು.. !!!

ಇತ್ತ ರಾಜೀವ ತನ್ನ PPT ಪ್ರಿಯತಮೆಯನ್ನು ಊಟಕ್ಕೆ ಆಹ್ವಾನಿಸಿ.. ಆ ಹೋಟೆಲಿನ ಕಡೆಗೆ ಹೊರಟ!!!

                                                             **********

ನನ್ನ ಸಹೋದರ ಜ್ಞಾನೇಶನ ಮಡದಿ ಆಶಾ ಸರ್ಜಾ... ಇವರನ್ನು ನಾ ದೇವಿ ಎನ್ನುತ್ತೇನೆ... .ಕಾರಣ ಅವನ ಕಂಗಳಲ್ಲಿನ ಹೊಳಪು.. ಆಕೆಯ ಕೈ ಬೆರಳುಗಳಲ್ಲಿ ಅದೇನೋ ಜಾದು ಇದೆ.. ರಂಗೋಲಿ ಪುಡಿ ಆಕೆಯ ಮಾತಿಗೆ ನೆಲದ ಮೇಲೆ ನರ್ತಿಸುತ್ತವೆ. .. ನಗುತ್ತೀರಾ.. ನಗೋದು ಬೇಡವೇ ಬೇಡ.. ಆ ಮೇಲಿನ ರಂಗೋಲಿಗಳು ಆಕೆಯ ಸೃಷ್ಟಿಯೇ.. ದಸರಾಗೆ ಹತ್ತು ದಿನವೂ ವಿಭಿನ್ನ ಆಯಾಮದ ರಂಗೋಲಿ ಹಾಕಿದ್ದು ನೋಡಿ.. ಆಕೆಗೆ ಹೇಳಿದ್ದೆ "ದೇವಿ ನೀವು ಅನುಮತಿ ಕೊಟ್ಟರೆ.. ನಿಮ್ಮ ಹತ್ತು ದಿನದ ರಂಗೋಲಿ ವಿನ್ಯಾಸವನ್ನು ಇಟ್ಟುಕೊಂಡು ಒಂದು ಪ್ರೇಮಕತೆ ಮಾಡುತ್ತೇನೆ.. " ಗಾಬರಿಯಾಗಿದ್ದ ಆಕೆ. ."ಸರಿ ಬಾವ ಆಗಲಿ ಅದಕ್ಕೆ ಅನುಮತಿ ಯಾಕೆ.. ನನಗೂ ಕುತೂಹಲವಿದೆ  ಹೇಗೆ ಮೂಡುತ್ತವೆ" ಅಂತ ಹೇಳಿದ್ದರು..

ಆಶಾ ಸರ್ಜಾ & ಜ್ಞಾನೇಶ ಶುಭಾಶಯಗಳು!!!
ಇಂದು ಜ್ಞಾನೇಶ ಮತ್ತು ಆಶಾ ಅವರ ಹತ್ತನೆಯ ವಿವಾಹ ವಾರ್ಷಿಕೋತ್ಸವ.. ಈ ಸುಂದರ ದಿನಕ್ಕೆ ಶುಭಾಶಯಗಳು.. ನೀವು ಶುಭಾಶಯಗಳನ್ನೂ ಕೋರುತ್ತೀರಾ ಅಲ್ಲವೇ..!!! 

Friday, November 30, 2018

ಪ್ರತಿಭಾಮಯ ಶಶಿ

ನಮ್ಮದೊಂದು ಗುಂಪು.. ಸಮಾನಾಭಿರುಚಿ, ಸಮಾನ ಯೋಚನೆ.. ಊಹುಂ.. ಇಲ್ಲ.. ಎಲ್ಲರೂ ಬುದ್ದಿಯವಂತರೇ.. ಎಲ್ಲರೂ ಹೃದಯವಂತರೇ.. ಆದರೂ ಒಬ್ಬರ ಯೋಚನೆ ಇನ್ನೊಬ್ಬರ ತಲೆಗೆ ಬರೋಲ್ಲ.. ಆದರೂ ಕಳೆದ ಮೂರು ದಶಕಗಳಿಂದ ಜೊತೆ ಇದ್ದೀವಿ.. ನಮ್ಮಲ್ಲಿ ವೈಯುಕ್ತಿಕ ಎನ್ನುವ ಪದಕ್ಕೆ ಅರ್ಥವೇ ಗೊತ್ತಿಲ್ಲ.. ಎಲ್ಲರ ಬಗ್ಗೆ ಎಲ್ಲರಿಗೂ ಗೊತ್ತು.. ನಕರ ಮಾಡುವ ಪ್ರಶ್ನೆಯೇ ಇಲ್ಲ..

ಪೀಠಿಕೆ ಸಾಕು ಅಂತೀರಾ.. ಹಲವಾರು ವರ್ಷಗಳಿಂದ ಇದರ ಬಗ್ಗೆ ಬರೆಯುತ್ತಲೇ ಇದ್ದೇನೆ.. ಆದರೂ ಮುಗಿಯದ ಕಡಲು ಇದು..
ಶಶಿ, ಲೋಕಿ, ವೆಂಕಿ, ಜೆಎಂ ಮತ್ತು ಶ್ರೀ ಪಂಚ ಪಾಂಡವರು.. ವರ್ಷ ಪೂರ್ತಿ ನಮ್ಮದು, ನಮ್ಮ ಮಡದಿಯರದು, ಮಕ್ಕಳದು ಹುಟ್ಟು ಹಬ್ಬಗಳು ಇದ್ದೆ ಇರ್ತಾವೆ.. ಹಾಗಾಗಿ ಶುಭಾಶಯಗಳನ್ನ ಕೋರೋದು ನೆಡೆದೆ ಇರುತ್ತೆ. .

ವೆಂಕಿ ಅಕ್ಟೋಬರ್ ೧೮, ಜೆಎಂ,  ಮೇ ೧೩ ಹೀಗೆ ವಿವಾಹದಿನಗಳು ಬರುತ್ತವೆ.. ವಿಶ್ ಮಾಡುತ್ತೇನೆ..ದಿನಗಳು ಕಳೆಯುತ್ತವೆ.. ಆದರೆ ಈ ನವೆಂಬರ್ ಮೂವತ್ತು ಬಂದರೆ ಚಳಿ ಜ್ವರ ಬರುತ್ತೆ ನನಗೆ.. ಒಂದು ಬಾರಿ ೨೦೧೪ ರಲ್ಲಿ ಕೆಲಸದ ಒತ್ತಡಗಳಿಂದ ಮಿಸ್ ಮಾಡಿದ್ದಕ್ಕೆ ಒಂದು ವರ್ಷ ಬಹಿಷ್ಕಾರ ಹಾಕಿದ್ದರು ಅಕ್ಕಯ್ಯ ಪ್ರತಿಭಾ.. ಕಡೆಗೆ ನನ್ನ ಶೈಲಿಯಲ್ಲಿ ಪುಸಲಾಯಿಸಿ ಶರಣು ಅಂತ ಹೇಳಿ.. ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಿದ ಮೇಲೆ ಮನ್ನಿಸಿದ್ದು.. ಅಂತಹ ಅದ್ಭುತ ಪ್ರೀತಿ ಇವರದ್ದು..

ಇವರ ಬಳಿ ಪ್ರಶ್ನೆಗಳ ರಾಶಿಯೇ ಇರುತ್ತದೆ.. ಇಪ್ಪತ್ತು ವರ್ಷಗಳಿಂದ ಕೇಳಿದ ಪ್ರಶ್ನೆ, ಹೇಳಿದ ಉತ್ತರ ಗೊತ್ತಿದ್ದರೂ ಮತ್ತೆ ಮತ್ತೆ ಭೇಟಿಯಾದಾಗೆಲ್ಲ ಅದೇ ರಿಪೀಟ್..

"ಟೊಮೇಟೊ ಯಾಕೆ ತಿನ್ನಲ್ಲ?"
"ಕಾಫಿ ಯಾಕೆ ಅಷ್ಟೊಂದು ಕುಡಿತೀರಾ?"
"ಯಾಕೆ ಕಾಫೀ ಕುಡಿಯಲ್ಲ?"

ಹೀಗೆ ಪ್ರಶ್ನಾವಳಿಗಳು ನೆಡೆಯುತ್ತಲೇ ಇರುತ್ತವೆ..

"ಅಕ್ಕಯ್ಯ ದೇಶದಲ್ಲಿ ನೂರಾರು ಸಮಸ್ಯೆಗಳಿವೆ..   ಭಾರತ ಮುನ್ನುಗ್ಗುತ್ತಿದೆ, ಮುಂದಿನ ಚುನಾವಣೆಯಲ್ಲಿ ಮೋದಿ ಗೆಲ್ಲಬೇಕು, ಕ್ರಿಕೆಟ್ ವಿಶ್ವಕಪ್ ಭಾರತ ಗೆಲ್ಲಬೇಕು.. ಇಂಧನದ ದರ ಕಡಿಮೆಯಾಗಬೇಕು.. ನಾನು" ಹೇಳುತ್ತಲೇ ಇರುತ್ತೇನೆ.. ಆದರೆ ಅವಾಗ
"ಅಣ್ಣ.. ಅದೆಲ್ಲ ನನಗೆ ಬೇಡದ ವಿಷಯ.. ಅದನ್ನು ನೋಡಿಕೊಳ್ಳೋಕೆ ಇದ್ದಾರೆ.. ನನ್ನ ಅಣ್ಣನ ಬಗ್ಗೆ ಕಾಳಜಿ ಮುಖ್ಯ.." ಎಂದು ಗದರಿಸುತ್ತಾರೆ..

ಇದು ಇವರ ವಿಷಯವಾದರೆ..

ಶ್ರೀಕಿ.. ಬರಿ ಕತೆ ಹೇಳ್ತೀಯ ನೀನು.. ವೆಂಕಿ ಮಾತಿನಲ್ಲಿ ನಂಬಿಕೆ ಇದೆ.. ನಿನ್ನ ಮೇಲೆ..#$$#$#.. ನಿನಗೆ ಅರ್ಥವಾಯಿತು ತಾನೇ..

ಅದೇನು ಬರೀತೀಯೋ.. ಅದಕ್ಕೆ ಅರ್ಥಗಳನ್ನು ನೀನೆ ಹೇಳಬೇಕು ಎನ್ನುತ್ತಾ.. ಇನ್ನಷ್ಟು ವಿಚಿತ್ರವಾಗಿ ಬರೆಯಲು ಪ್ರೇರೇಪಿಸುತ್ತಾನೆ..

ಶ್ರೀಕಿ.. ನೀ ನಿನ್ನ ಆರೋಗ್ಯದ ಬಗ್ಗೆ ಯೋಚನೆ ಮಾಡು.. ಹೊರಗಿನ ಬಗ್ಗೆ  ಯೋಚಿಸೋಕೆ ನಾವಿದ್ದೇವೆ ಎಂದು ನನಗೆ ಧೈರ್ಯ ತುಂಬುವ ಶಶಿ...

ಶ್ರೀಕಿ ನಿಂದು ನಿನ್ನ ಅಕ್ಕಯ್ಯನದು ಹೊಡೆದಾಟ ನಾ ಮಧ್ಯೆ ಬರೋಲ್ಲ.. ಏನಾದರೂ ಮಾಡಿಕೊಳ್ಳಿ ಎನ್ನುತ್ತಾ.. ತಟಸ್ಥವಾಗಿರುವ ಶಶಿ..

ಈ ಇಬ್ಬರು ಜೊತೆಯಾಗಿ ನನ್ನ ಮೇಲೆ ಅಭಿಮಾನ ತೋರಿಸುತ್ತಾ ಕಳೆದ ವರ್ಷಗಳು ೨೦... ಇಂದು ಒಂದಾದ ದಿನ.. ಎರಡು ದಶಕಗಳು ಕಳೆದದ್ದೇ ಅರಿವಾಗದೇ ಸಾಗಿದೆ.. ತಂದೆಯಂತೆಯೇ ಬುದ್ಧಿವಂತನಾದ ಮಗರಾಯ ವೈದ್ಯನಾಗುವತ್ತ ಹೆಜ್ಜೆ ಇಟ್ಟಿದ್ದಾನೆ.. ಮನೆಯ ಕೆಲಸದ ಜೊತೆಯಲ್ಲಿ ತಂದೆ ಮಗನ ಯೋಗಕ್ಷೇಮ ವಿಚಾರಿಸುತ್ತಾ.. ಪತಿಗೆ ತಕ್ಕ ಸತಿಯಾಗಿ ಜವಾಬ್ಧಾರಿ ಹಂಚಿಕೊಂಡು ಸಾಗುವ ಪ್ರತಿಭಾ.. ಇಬ್ಬರಿಗೂ ವಿವಾಹ ದಿನದ ಶುಭಾಶಯಗಳು..

ಶಶಿ ಪ್ರತಿಭಾ ಈ ಸಮಯ ಎರಡು ದಶಕ ಕಳೆದ ಸಮಯ.. ಸುಖ ಸಂತೋಷ ನೆಮ್ಮದಿ ಸದಾ ನಿಮದಾಗಿರಲಿ.. !!!

Sunday, May 6, 2018

ಕಾಯಕವೇ ಕೈಲಾಸ .. DFR

ಗೆಳೆತನ ಮಾಡಿಕೊಂಡರೆ ಅದು ಉಸಿರಿರುವರೆಗೆ.. ಇಲ್ಲವೇ ಗೆಳೆತನದ ಉಸಿರು ತೆಗೆಯುವವರೆಗೆ ಎನ್ನುವ ಸಿದ್ಧಾಂತ ನನ್ನದು.. ಆದರೆ ಕೆಲವರು ಇರುತ್ತಾರೆ.. ಅವರ ಗೆಳೆತನದ ಹಸಿರಾದ ಗಿಡಕ್ಕೆ ಹೆಸರು, ಹಸಿರು, ಉಸಿರು ಯಾವುದು ಬೇಕಿಲ್ಲ.. ಇದೆ ಯೋಚನೆಯಲ್ಲಿ ರಾತ್ರಿ ಮಲಗಿದೆ.. ದ. ರಾ. .ಬೇಂದ್ರೆಯಜ್ಜನ ಕವನದಂತೆ ನಿದ್ದೆ ಮಾಡಿದರೆ ಮುಗೀತು.. ಮರುದಿನ ಬೆಳಿಗ್ಗೆಯೇ ಎಚ್ಚರ ನನಗೆ..

ಅಮೃತ ಘಳಿಗೆ .. ಸುವರ್ಣ ಸಮಯ.. ಚಿನ್ನದಂಥ ಕಾಲ ..ಹೀಗೆ ಅನೇಕ ರೀತಿಯಲ್ಲಿ ಹೇಳುವ ಬೆಳಗಿನ ಜಾವ ೩ ರಿಂದ ೫ರ ತನಕ ನನಗೆ ಬೀಳುವ ಕನಸುಗಳು. ... ಬರುವ ಯೋಚನೆಗಳು.. ಯೋಜನೆಗಳು ನೂರಕ್ಕೆ ೯೮ ಭಾಗ ನಿಜವಾಗುತ್ತದೆ.. ಉಳಿದ ಎರಡು ಭಾಗ.. ಬಿಡಿ ಅದರ ಬಗ್ಗೆ ಬೇಡ..

ಐರಾವತದ ಮೇಲೆ ಇಂದ್ರ ಬರುತ್ತಿದ್ದ.. ಪಕ್ಕದಲ್ಲಿ ಅಷ್ಟ ದಿಕ್ಪಾಲಕರು ತಮ್ಮ ತಮ್ಮ ವಾಹನಗಳಲ್ಲಿ ಬರುತ್ತಿದ್ದರು.. ಎಲ್ಲರ ಹಣೆಯ ಮೇಲೆ ಗೆರೆಗಳು.. ಹಾಗೂ ಎಲ್ಲರ  ಹಣೆಯ ಮೇಲೆ ಚಿಂತೆಯ ಮೋಡಗಳು.. ಇಂದ್ರನ ಐರಾವತ ತನ್ನ ಸೊಂಡಿಲನ್ನು ಅತ್ತಿತ್ತ ಬೀಸುತ್ತಾ.. ಕಾಮಧೇನುವಿಗೆ ಏನೋ ಸನ್ನೆ ಮಾಡುತ್ತಿತ್ತು.. ಕಾಮಧೇನು   ತಲೆಯಲ್ಲಾಡಿಸುತ್ತಿತ್ತು..

ಸಭೆಗೆ ಬಂದಾಗ.. ಸಪ್ತ ಋಷಿಗಳು ಎಲ್ಲರಿಗೂ ಆಶೀರ್ವಾದ ನೀಡಿದರು.. ಹಾಗೆ ನೋಡುತ್ತಾ.. ಎಲ್ಲರ ಹಣೆಯ ಮೇಲಿನ ಗೆರೆಗಳ ಮಧ್ಯೆ ಸಿಕ್ಕಿದ್ದ ಯೋಚನೆಗಳ ಸುಳಿವು ಸಿಕ್ಕಿತು.. ಇಂದ್ರನಿಗೆ ಕಣ್ಣಲ್ಲಿಯೇ ಸನ್ನೆ ಮಾಡಿ.. ತಮ್ಮ ತಮ್ಮ ಸ್ಥಾನದಲ್ಲಿ ಕೂರಲು ಹೇಳಿ ಎಂದರು..

ಇಂದ್ರ ಐರಾವತದಿಂದ ಇಳಿದು.. ಎಲ್ಲರೂ ತಮ್ಮ ತಮ್ಮ ಸ್ಥಾನದಲ್ಲಿ ವಿರಾಜಿಸಲು ಹೇಳಿದ..

ಎಲ್ಲರಿಗೂ ಮನದಲ್ಲಿಯೇ ತಳಮಳ. .ನಮ್ಮ ಸಮಸ್ಯೆಯನ್ನು ಕೇಳದೆ ಹೇಗೆ ಬಗೆ ಹರಿಸುತ್ತಾರೇ ಎಂದು..

ಹಿರಿಯರಾದ ದೇವರ್ಷಿ ವಸಿಷ್ಠರು "ನೋಡು ಇಂದ್ರ.. ನಿನ್ನ ಸಮಸ್ಯೆ ಅರ್ಥವಾಯಿತು.. ಸುತ್ತಿ ಬಳಸಿ ಹೇಳದೆ ನೇರವಾಗಿ ಹೇಳುತ್ತೇನೆ.. ಸದಾ ಚಟುವಟಿಕೆಯಲ್ಲಿ ನಿರತವಾಗಿರುತ್ತಾರೆ.. ಸಮಾಜಮುಖಿಯಾಗಿ ಹಲವಾರು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ.. ಅನೇಕ .. ಏ ಎಂಥ ಮಾತು.. ಅನೇಕ ಅಲ್ಲವೇ ಅಲ್ಲ ನೂರಾರು ಸ್ನೇಹಿತರಿಗೆ ಮಾದರಿಯಾಗಿ.. ಹತ್ತಾರು ತಂಗಿಯರಿಗೆ ಅಕ್ಕನಾಗಿ.. ಹತ್ತಾರು ತಮ್ಮಂದಿರಿಗೆ ಅಕ್ಕನಾಗಿ.. ಹಲವರಿಗೆ ದೇವರು ಕಳಿಸಿದ ಸ್ನೇಹಿತೆಯಾಗಿ ನಿಂತಿದ್ದರೂ.. ಅಹಂ ಅನ್ನುವ ಪದವೇ ಅವರ ವಿಳಾಸ ಸಿಗದೇ.. ಮೈಸೂರು ರಸ್ತೆಯಲ್ಲಿ ಎಲ್ಲೊ ಕಳೆದುಹೋಗಿದೆ.. ಅವರನ್ನು ಸುಮ್ಮನೆ ಹತ್ತು ನಿಮಿಷ ಏನೂ ಕೆಲಸ ಮಾಡದೆ ಕೂರಿಸಿಬಿಟ್ಟರೆ.. ಚತುರ್ಮುಖ ಬ್ರಹ್ಮ ಗಾಬರಿಯಾಗುತ್ತಾನೆ.. ತನ್ನ ಸೃಷ್ಟಿಯಲ್ಲಿ ಏನೋ ತೊಂದರೆಯಾಗಿದೆ ಅನಿಸುತ್ತದೆ..   ಕೈಲಾಸವಾಸಿ ಮಹಾದೇವ.. ಆ  ಮಂಜಿನ ಗಿರಿಯಲ್ಲಿದ್ದರೂ ಸಣ್ಣಗೆ ಬೆವರುತ್ತಾನೆ .. ಕ್ಷೀರಸಾಗರದಿ ಸದಾ ಶಾಂತವಾಗಿರುವ ಶ್ರೀಮನ್ ಮಹಾವಿಷ್ಣು.. ಕೊಂಚ ವಿಚಲಿತನಾಗುತ್ತಾನೆ.. ಅವರ  ಮಂತ್ರ ಒಂದೇ.. "ಜಗಕೆ ಮುಕ್ಕೋಟಿ ದೇವರಿದ್ದರೂ ನೀ ನನ್ನ ದೇವರು" ಎನ್ನುತ್ತಾ ತಾಯಿಯನ್ನೇ ದೇವರು ಎನ್ನುತ್ತಾ.. ತಾಯಿ ಸುಖದ ಮುಂದೆ ಮಿಕ್ಕಿದ್ದೆಲ್ಲ ತೃಣ ಸಮಾನ ಎನ್ನುವ ಇವರ ಗೆಳೆಯರ ಬಳಗ ನೋಡಿದರೆ.. ಕೇಳಿದರೆ.. ಅಬ್ಬಬ್ಬಾ ಎನ್ನಿಸುತ್ತದೆ.. "

ಸ್ವಲ್ಪ ಸುಧಾರಿಸಿಕೊಂಡು.. ಕಮಂಡಲದಲ್ಲಿದ ತೀರ್ಥವನ್ನು ಕೊಂಚ ಕುಡಿದು.. "ನೋಡಪ್ಪಾ ಇಂದ್ರ.. ಇವರಿಗೆ ಕಾಫೀ ಬಲು ಪ್ರಿಯ.. ಸೆಲ್ಫಿ ಚಿತ್ರಗಳು ಕಡಿಮೆ ಆದರೆ ಇವರ ಗೆಳೆಯರ ಬಳಗ ತೆಗೆಯುವ ಚಿತ್ರಗಳು ಒಂದು ವ್ಯಕ್ತಿತ್ವವನ್ನು ಹೊರಹೊಮ್ಮಿಸುತ್ತದೆ... ಇವರ ಚಿತ್ರಗಳಿಗೆ ನೂರಾರು ಪ್ರತಿಕ್ರಿಯೆ ಬರುತ್ತದೆ.. ಎಲ್ಲವನ್ನು ಸಮಾಧಾನ ಚಿತ್ತದಿ ಸ್ವೀಕರಿಸಿ ಉತ್ತರಿಸಿ.. ಮತ್ತೆ ಭೂರಮೆಯ ಹಸಿರಿನ ಐಸಿರಿಯನ್ನು ತಮ್ಮ ಖಾತೆಗೆ ಲಗತ್ತಿಸಿ.. ಭೂತಾಯಿಗೆ ನಮಿಸುತ್ತಾರೆ..
ಭಕ್ತರು ದೇವರನ್ನು ಕುರಿತು ತಪಸ್ಸು ಮಾಡಿ.. ದೇವರು ಪ್ರತ್ಯಕ್ಷವಾದಾಗ.. ದೇವರು ಹೇಳುತ್ತಾರೆ ..ಅಮೃತ ಘಳಿಗೆಯಲ್ಲಿಯೇ ಉತ್ತರಿಸಬೇಕು.. ಹಾಗಾಗಿ.. ಇವರ ಅನೇಕ ಸ್ನೇಹಿತರು.. ಕ್ಷಣಗಳ ಲೆಕ್ಕದಲ್ಲಿ ಮಾತಾಡುತ್ತಾರೆ.. ಮತ್ತೆ ಇವರ ಹೆಗಲ ಮೇಲೆ ಯಾವಾಗಲೂ ಒಂದು ಭಾರವಿದ್ದೇ ಇರುತ್ತದೆ.. "

ತಕ್ಷಣ ಎಲ್ಲರೂ ಒಮ್ಮೆಲೇ.. "ಮಹರ್ಷಿಗಳೇ.. ಹೆಗಲ ಮೇಲೆ ಭಾರವೇ.. ?"

"ಹೌದಪ್ಪ.. ಭಾರವೇ.. ಇವರು ಎಲ್ಲರ ಬಳಿ ಮಾತಾಡಬೇಕು ..ಎಲ್ಲರಿಗೂ ಸಮಯ ಕೊಡಬೇಕು.. ಎಲ್ಲಾ ಸಮಯದಲ್ಲಿಯೂ ಸಿಗಬೇಕು ಎನ್ನುವ  ಪ್ರೀತಿಯ ಒತ್ತಡ.. ಆದರೆ.. ಇವರು ಇದನ್ನು ಒತ್ತಡ ಅಂದುಕೊಳ್ಳದೆ.. ಅದನ್ನು ಒಂದು ಕಾರ್ಯ ಎನ್ನುತ್ತಾ.. ಎಲ್ಲರಿಗೂ ಇವರು ಸಮಯ ಕೊಡುವುದನ್ನು ಕಂಡು.. ಅಷ್ಟ ದಿಕ್ಪಾಲಕರೇ ಹಲವು ಬಾರಿ ಗಾಬರಿಗೊಂಡಿದ್ದಾರೆ.. .. ಆದರೆ ಆದರೆ..ಬ್ರಹ್ಮ ದೇವನು.. ಮಹಾದೇವನು.. ಮಹಾವಿಷ್ಣುವೂ ತನ್ನ ಭಕ್ತರನ್ನು ಪೊರೆವಂತೆ.. ಇವರು ತಮ್ಮ ಸ್ನೇಹವಲಯದಲ್ಲಿ ಎಲ್ಲರಿಗೂ ಇಷ್ಟವಾಗುವ ಹಾಗೆ ಇರುತ್ತಾರೆ.. "

ದೇವರ್ಷಿ ವಸಿಷ್ಠರು.. ಇಷ್ಟು ಹೇಳಿ ಇನ್ನೊಮ್ಮೆ ತೀರ್ಥ ಸೇವಿಸಿ.. ಆಸೀನರಾದರು..

ಎಲ್ಲರ ಹಣೆಯ ಮೇಲೆ ಇದ್ದ ಸುಕ್ಕುಗಳು ರವಿಯ ಕಿರಣಗಳಿಗೆ ಮಾಯವಾಗುವ ಮಂಜಿನ ಹನಿಯಂತೆ ಮಾಯವಾಯಿತು..

ಐರಾವತ ಮತ್ತು ಕಾಮಧೇನು ಸಭೆಯ ಮಧ್ಯಕ್ಕೆ ಬಂದು ನಿಂತವು..

ಇಂದ್ರನಿಗೆ ಅರ್ಥವಾಯಿತು... ದೇವರ್ಷಿ ವಸಿಷ್ಠರು ಕಣ್ಣಿನ ಸನ್ನೆಯಲ್ಲಿ ಹೇಳು ಎಂದು ಸೂಚನೆ ಕೊಟ್ಟರು..

ಐರಾವತ "ಇವರ ಹೆಸರು ಶ್ರೀ ಕರೆಯುವಂತೆ DFR .. ನನ್ನಷ್ಟೇ ನೆನಪಿನ ಶಕ್ತಿ ಹೆಚ್ಚು ಮತ್ತೆ ನನ್ನ ಹಾಗೆ ನೆಡೆದದ್ದೇ ಹಾದಿ.. ಎಲ್ಲರೂ ತುಳಿಯುವ ಹಾದಿಯನ್ನು ಇವರು ತುಳಿಯುವುದಿಲ್ಲ.. ಹಾಗಾಗಿ ನನಗೆ ಇವರೆಂದರೆ ಅತಿ ಗೌರವ"


ಬಿಳಿಮುಗಿಲಿನಂತೆ ಶ್ವೇತ ವರ್ಣಕ್ಕೆ ಇನ್ನೊಂದು ಹೆಸರಾಗಿದ್ದ ಕಾಮಧೇನು  "ನಾ ಕೇಳಿದ್ದನ್ನು ಕೊಡುವ ಕಾಮಧೇನು ಅನ್ನುತ್ತಾರೆ.. ಇವರೂ ಕೂಡ ಹಾಗೆ.. ಇವರ ಹತ್ತಿರ  ಇಲ್ಲ ಎನ್ನುವ ಮಾತೆ ಇರೋಲ್ಲಾ.. ಅದಕ್ಕೆ ಇವರನ್ನು ಕಂಡರೆ ನನ್ನನ್ನೇ ಕಂಡಂತೆ ಆಗುತ್ತದೆ.. "

ಇಂದ್ರ ಎದ್ದು ನಿಂತು.. "ಮಹಾಜನತೆಗಳೇ.. .. ನಮಗೆಲ್ಲಾ ತವಕ ಇದ್ದಿದ್ದು.. ಇಷ್ಟೆಲ್ಲಾ ಹೆಸರು ಗಳಿಸಿಯೂ ಕೂಡ ಅಹಂ ತಲೆಗೇರಿಲ್ಲ ಮತ್ತು ಎಲ್ಲರ ಮನಸ್ಸಿಗೂ ಹತ್ತಿರವಾಗಿರುವ ಇವರ ಬಗ್ಗೆ ಭುವಿಯಲ್ಲಿ ಹರಡಿರುವ ಖ್ಯಾತಿಯ ವಿಚಾರ ನಮಗೆ ತಿಳಿದುಬಂದಿದ್ದರಿಂದ ಇವರ ಬಗ್ಗೆ ತಿಳಿಯಬೇಕು ಎನ್ನುವ ನಮ್ಮ ಪ್ರಶ್ನೆಗಳಿಗೆ ಗುರುಗಳಾದ ದೇವರ್ಷಿ ವಸಿಷ್ಠರು ಪರಿಪೂರ್ಣ ಮಾಹಿತಿ ನೀಡಿದ್ದಾರೆ.. ಹಾಗಾಗಿ ಅವರಿಗೆ ವಂದನೆಗಳು.. ಜೊತೆಯಲ್ಲಿ ಇಂದು  DFR ಅವರ ಜನುಮದಿನ.. ಈ ಲೇಖನ ನೋಡಿದ ಮೇಲೆ ಅವರು ಈ ಕೆಳಗಿನ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ

೧) ನನ್ನ ದಿನದಲ್ಲಿ ಅಳಿಸುವ ನಿಮಗೆ  ಏನು ಹೇಳಲಿ
೨) ನಿಮ್ಮೆಲ್ಲರ ಅಭಿಮಾನಕ್ಕೆ ಧನ್ಯವಾದಗಳು
೩) ನನ್ನ ಜನುಮ ಸಾರ್ಥಕ ಎನ್ನುವಂತಹ ಭಾವ ನನಗೆ
೪) ಎಲ್ಲರಿಗೂ ಧನ್ಯವಾದಗಳು

ಇಷ್ಟು ಹೇಳಿ ಸುಮ್ಮನಾಗುತ್ತಾರೆ.. ಮತ್ತೆ ಕಣ್ಣಂಚಿನಲ್ಲಿ ಧುಮುಕುವ ಜೋಗದ ಹಿನ್ನೀರಿಗೆ ಆಣೆಕಟ್ಟು ಕಟ್ಟಿ ಧನ್ಯತಾ ಭಾವದಿಂದ ಕೈಮುಗಿದು ಹೇಳುತ್ತಾರೆ

"ಎಂದರೋ ಮಹಾನುಭಾವುಲು ಅಂದರೇಕಿ ವಂದನಮು"


Sunday, March 25, 2018

ಕಮಲದಲ್ಲಿ ಅರಳಿದ ಮೊದಲ ದಳ

ಮೊದಲ ಭೇಟಿ !!!

"ಕಣಿ  ಹೇಳ್ತೀವಮ್ಮ ಕಣೀ.. "

ಗೇಟಿನ ಹತ್ತಿರ ಬಂದ ಕೊರವಂಜಿಯನ್ನು ಕಂಡು .. "ಏನಮ್ಮ ಅದು ಕಣೀ"

"ಅಯ್ನೊರೆ.. ಇವತ್ತಿನ ವಿಸೇಸ ಹೇಳ್ತಿವ್ನಿ.. ಕಣೀ ಹೇಳ್ತೀನಿ ಬುದ್ದಿ.. "

"ಸರಿ ಕಣಮ್ಮ ಅದೇನು ಹೇಳ್ತೀರೋ ಹೇಳಿ"

"ಗೇಳ್ತಾನ ಅಂದ್ರೆ ಸಕ್ತಿ ಅನ್ನೋದು ಗೊತ್ತು.. ಅದ್ನ ಇಂಗೆ ಮುಂದುವರ್ಸು.. ಒಸಿ ರೊಕ್ಕ ಕೊಡ್ಪ.. ದೇವಿ ಒಳ್ಳೆದಾ ಮಾಡ್ತಾಳೆ.. "

ಜೇಬಿನಲ್ಲಿದ್ದ ಒಂದತ್ತು ರೂಪಾಯಿ ಕೊಟ್ಟೆ..

ಕಣಿ ಹೇಳ್ತೀವಮ್ಮ ಕಣೀ ಅನ್ನುತ್ತಾ ಮುಂದಿನ ಮನೆಗೆ ಹೋದಳು..

ಜಗದಿ ದುಡ್ಡು ಕಾಸು ಏನೂ ಇಲ್ಲದೆ ಸಿಗುವ ವಸ್ತು ಒಂದೇ .. ಅದು ಶುದ್ಧವಾದ ಗೆಳೆತನ....ಗೆಳೆತನ ನಿಲ್ಲೋದು ಮುಗ್ಧತೆಯಿಂದ.. ಪ್ರಾಥಮಿಕ.. ಮಾಧ್ಯಮಿಕ ಶಾಲಾ ದಿನಗಳಲ್ಲಿ ಹೋಮ್ ವರ್ಕ್ ಅನ್ನೋ ಭೂತ ನಮ್ಮ ಶಾಲಾದಿನಗಳಲ್ಲಿ ಇರಲಿಲ್ಲ.. ಆಟ.. ಆಗಾಗ ಪಾಠ.. ಮನೆಗೆ ಬಂದರೆ ಪುಸ್ತಕ ಒಂದು ಕಡೆ.. ನಾವೊಂದು ಕಡೆ..

ಶನಿವಾರ ಬೆಳಗಿನ ತರಗತಿ ಮುಗಿಸಿಬಂದರೆ.. ರಾತ್ರಿ ಊಟದ ತನಕ ಮನೆಗೆ ಬರದೇ...  ಭಾನುವಾರ ಹೊಟ್ಟೆ ಬಟ್ಟೆ ಬಗ್ಗೆ ಯೋಚಿಸದೆ.. ಆಟ, ಗೆಳೆಯರು.. ಅಷ್ಟೇ ತಲೆಯೊಳಗೆ ಇರುತ್ತಿದ್ದದ್ದು..

ಕಮಲಾ ನೆಹರು ಪಾಠ ಶಾಲಾ.. ಈ ಶಾಲೆಯಲ್ಲಿ ಏನೂ ಕಲಿತೆವು.. ಏನೂ ಗಳಿಸಿದೆವು ಅನ್ನೋದಕ್ಕಿಂತ.. ನಮ್ಮ ವಿದ್ಯಾಭ್ಯಾಸಕ್ಕೆ ಅಡಿಪಾಯ ಹಾಕಿದ್ದು ಇಲ್ಲಿ..

ನಾ ಓದಿದ್ದು ಬರಿ ಮೂರು ವರ್ಷ ಈ ಶಾಲೆಯಲ್ಲಿ ನಾಲ್ಕರಿಂದ ಆರನೇ ತರಗತಿಯ ತನಕ ಮಾತ್ರ ಓದಿದ್ದು.. ಆದರೆ ಒಂದು ಮೂವರು ನಾಲ್ಕು ಮಂದಿ ಬಿಟ್ಟರೆ ಏನೂ ನೆನಪಿಲ್ಲದ ನನಗೆ.. ಈ ಒಂದು ವರ್ಷದಲ್ಲಿ.. ಲೇ ಶ್ರೀಕಾಂತ.. ನೀ ನನ್ನ ಜೊತೆ ಕಣೋ ಓದಿದ್ದು.. ಅನ್ನುವ ಗೆಳೆಯರನ್ನು ಕಂಡಾಗ ಎದೆ ತುಂಬಿಬರುತ್ತೆ ..ನನ್ನ ಮೆದುಳನ್ನು ಪರ ಪರ ಕೆರೆದುಕೊಂಡರೂ ನೆನಪಿಗೆ ಬರೋಲ್ಲ.. ಸತೀಶ.. ಸುರೇಶ..ನವನೀತ .. ರೇವತಿ.. ಚಲಪತಿ.. ಹೀಗೆ ಬೆರಳಲ್ಲಿ ಎನಿಸಬಹುದಾದಷ್ಟು  ಗೆಳೆಯರು ಮಾತ್ರ.. ಆದರೆ ಇಂದು ಸುಮಾರು ಮೂವತ್ತೈದಕ್ಕೂ ಹೆಚ್ಚು ಗೆಳೆಯರು ಶ್ರೀ.. ಶ್ರೀಕಾಂತಾ.. ಎನ್ನುತ್ತಾ ನನ್ನ ಅವರ ಸ್ನೇಹದ ವಲಯದೊಳಗೆ ಸ್ಥಾನ ಕೊಟ್ಟಿರುವುದು ನೋಡಿದರೆ.. ದೇವರು ಇಂತಹ ಗೆಳೆಯರ ಮಧ್ಯವೇ ಇರುತ್ತಾನೆ ಎನ್ನಿಸುತ್ತದೆ..

ಇಂದು ನಮ್ಮ ಭೇಟಿಯ ಮೊದಲ ವರ್ಷದ ಸಂಭ್ರಮ.. ನಾ ಹೋಗುವ ಸಾಧ್ಯತೆ ಎಳ್ಳಷ್ಟೂ ಇರಲಿಲ್ಲ.. ಗೆಳೆಯರ ಕರೆಗಳು ಬರುತ್ತಲೇ ಇದ್ದವು.... ಏನೂ ಹೇಳೋದು.. ಎನ್ನುವ ಗೊಂದಲ.. ಆದರೆ ಹೋಗದೆ ಇರೋಕೆ ಮನಸ್ಸು ಒಪ್ಪುತ್ತಿಲ್ಲ.. ಮನಸ್ಸನ್ನು ಸ್ವಲ ಸಮಾಧಾನ ಮಾಡಿಕೊಂಡು.. ಪರಿಸ್ಥಿತಿಯನ್ನು ಸ್ವಲ್ಪ ನಿಭಾಯಿಸಿ.. ಅದಕ್ಕೆ ತಕ್ಕ ಅಡ್ಜಸ್ಟ್ಮೆಂಟ್ ಮಾಡಿ.. ಹೊಂದಿಸಿ ಹೊರಟೆ..

"ಲೋ ಯಾಕೋ ಫೋನ್ ತಗೋಳಲಿಲ್ಲ.."
"ಶ್ರೀ ಯಾಕೋ ಲೇಟ್"
"ಬೇಗನೆ ಬರೋದಲ್ವಾ ತಮ್ಮ"
"ರಾಜಕುಮಾರ ಎಲ್ಲೋ ಬಂದೆ"

ಹೀಗೆ ಒಂದಕ್ಕಿಂತ ಒಂದು ವಿಶೇಷಣ ಹೊತ್ತು ಬಂದ ಸ್ವಾಗತ ಮನಸ್ಸನ್ನು ಗಾಳಿಪಟದಂತೆ ಮಾಡಿತು..

ಆಫೀಸ್ ಮೀಟಿಂಗ್ ತರಹ ಗೆಳೆಯರು ಗೆಳತಿಯರು ಕೂತಿದ್ದರು.. ನಗು.. ಜಾಲಿ.. ಒಬ್ಬರ ಕಾಲು ಇನ್ನೊಬ್ಬರು ಎಳೆಯುವುದು ನಡೆದಿತ್ತು.. ಕೆಲವು ಕಾರಣಗಳಿಂದ ಬರಲಾಗದ ಗೆಳೆಯರಿಗೆ ಮತ್ತೆ ಕರೆ ಮಾಡಿ ಕೇಳಿದ್ದು.. ಅವರು ಬರಬೇಕಿತ್ತು.. ಇವರು ಬರಬೇಕಿತ್ತು ಎಂದು ಬರದಿದ್ದವರ ಹೆಸರು ಹೇಳಿ.. ಮತ್ತೆ ಇನ್ನೂ ಹಲವಾರು ಮಧುರ ನೆನಪುಗಳನ್ನು ಮೆಲುಕು ಹಾಕುತ್ತಾ ಸಾಗಿತ್ತು ಸ್ನೇಹ ಕೂಟ..

ಶಾಲೆಯ ಮುಂದೆ ಬೆಳೆದಿದ್ದ ಪಾರ್ಥೇನಿಯಂ ಗಿಡಗಳನ್ನ ಕಿತ್ತು ಮೈದಾನ ಸಿದ್ಧ ಮಾಡಿದ್ದು.. ಶಾಲೆಯ ಮುಂದೆ ಹರಿಯುತ್ತಿದ್ದ ಮೋರಿಯ ಹರಿವು.. ಶಾಲೆಯ ಅಂದ ಚಂದ.. ಮಾಸ್ತರುಗಳು.. ಅವರ ಪಾಠಗಳು ಎಲ್ಲವೂ ಆ ಕೋಣೆಯಲ್ಲಿ ಹರಿದಾಡುತ್ತಿತ್ತು..

ಪೆನ್ಸಿಲ್ ಇಟ್ಟು ಪಂದ್ಯಗಳನ್ನು ಆಡುತ್ತಿದ್ದದು.. ಸೋತಿದ್ದು, ಗೆದ್ದಿದ್ದು.. ಎಲ್ಲವೂ ಮನದ ಪಟಲದಲ್ಲಿ ಹಾರಾಡುತ್ತಿದ್ದವು..

ಇದರ ಮಧ್ಯೆ ತಿನಿಸುಗಳು.. ಗರಂ.. ಮಸಾಲೆಯುಕ್ತ ತಿನಿಸುಗಳು.. ಸಿಹಿ ಪಾನೀಯ.. ಬರುತ್ತಲೇ ಇದ್ದವು.. ಊಟದ ಜೊತೆಯಲ್ಲಿ ಇವೆಲ್ಲ ಬರಲಿ ಕಣೋ.. ಆಮೇಲೆ ಊಟ ಮಾಡೋಕೆ ಆಗೋಲ್ಲ ಅನ್ನುವ ಮಾತುಗಳು ಬಂದರೂ ಕೈ ಬಾಯಿಯ ಜಗಳ ಸಾಗುತ್ತಲೇ ಇದ್ದವು..

ಅನುರಾಧ ಅವರ ಮಗಳ ಸುಮಧುರ ಗಾಯನ.. ಮತ್ತೆ ನಾರಾಯಣ ಅವರ ಮಗಳ ನೃತ್ಯ ಈ ಭೇಟಿಯನ್ನು ಇನ್ನಷ್ಟು ಸ್ಮರಣೀಯವಾಗಿ ಮಾಡಿದ್ದು ವಿಶೇಷ ಜೊತೆಯಲ್ಲಿ ಶೋಭನ್ ಬಾಬು ಇಂಗ್ಲೆಂಡಿನಿಂದ ಸಿಕ್ಕಿದ್ದು ಖುಷಿಯನ್ನು ಹೆಚ್ಚಿಸಿತು..

ನಮ್ಮ ಗೆಳೆತನವನ್ನು ಬರಿ ಅಲ್ಲಿ ಇಲ್ಲಿ ಮಾತಾಡಿ ಕಳೆಯದೆ ಸಮಾಜಕ್ಕೆ ಒಂದು ಸಣ್ಣಗೆ ಸಹಾಯ ಮಾಡುವ ನಿಟ್ಟಿನಲ್ಲಿ ಯೋಜನೆ ಸಿದ್ಧವಾಗುವ ಮಾತು ಬಂತು.. ಅದಕ್ಕೆ ಒಂದು ರೂಪರೇಷೆ ಕೊಡುವ ಮತ್ತು ಅದನ್ನು ಒಂದು ಹಾದಿಯಲ್ಲಿ ನೆಡೆಸುವ ಬಗ್ಗೆ ಆದಷ್ಟು ಬೇಗ ಕಾರ್ಯ ನಿರತವಾಗುವ ಬಗ್ಗೆ ಮಾತಾಡಿ ನಮ್ಮ ಭೇಟಿಗೆ ಮಾತಿನ ಸಂಕೋಲೆಯನ್ನು ಕಳಚಿ ಹೊಟ್ಟೆಯ ಬಗ್ಗೆ ಯೋಚಿಸುವ ಸಾಹಸಕ್ಕೆ ಕೈ ಹಾಕಿದೆವು..

ಪುಷ್ಕಳವಾದ ಭೋಜನ.. ರೋಟಿ, ಅದಕ್ಕೆ ತಕ್ಕ ಜೋಡಿ. ಬಿರಿಯಾನಿ (ಅಥವಾ ಅದಕ್ಕೆ ಹತ್ತಿರವಾದ ತಿನಿಸು) ಅನ್ನ, ಸಾರು.. ಉಪ್ಪಿನಕಾಯಿ.. ಬೆಳೆಯ ತೊವ್ವೆ ಹೋಲುವ ಖಾದ್ಯ.. ಮೊಸರನ್ನ.. ಐಸ್ಕ್ರೀಮ್. ಜಾಮೂನು.. ಎಲ್ಲವೂ ಸೊಗಸಾಗಿತ್ತು..

ಊಟ ಮಾಡಿದ ಮೇಲೆ ಎಲ್ಲರ  ತುಟಿಯ ಮೇಲೆ ಇದ್ದ ಮಾತು ಒಂದೇ "ಅನ್ನ ಧಾತೋ ಸುಖೀಭವ"

ಈ ಸುಂದರ ಭೇಟಿಯ ಒಂದಷ್ಟು ಕಣ್ಣಿಗೆ ಇಂಪು ಕೊಡುವ ಚಿತ್ರಗಳು ನಿಮಗಾಗಿ..


























ಮತ್ತಷ್ಟು ಭೇಟಿ
ಮತ್ತಷ್ಟು ಮಾತುಗಳು
ಮತ್ತಷ್ಟು ಚಿತ್ರಗಳು
ಮತ್ತಷ್ಟು ಗೆಳೆತನ
ಬರುತ್ತಲೇ ಇರುತ್ತವೆ

ಗೆಳೆತನಕ್ಕೆ ಜಿಂದಾಬಾದ್.. .!

Sunday, January 21, 2018

ಕಾಲೇಜು ದಿನಗಳ ನಮ್ಮೆಲ್ಲರ ಸ್ನೇಹಕ್ಕೆ ಒಂದು ಜೈ... !!!

ಕಡ್ಲೆಮಿಠಾಯಿ (ಬರ್ಫಿ) ತಿಂದಾಗ ಹಲ್ಲುಗಳ ಮಧ್ಯೆ ಸಿಕ್ಕಿ ಹಾಕಿಕೊಳ್ಳುವುದು ಸಾಮಾನ್ಯ.. ಅಯ್ಯೋ ಇಷ್ಟು ಬೇಗ ಮುಗಿದು ಹೋಯಿತಲ್ಲ ಎಂದಾಗ... ಆ ಸವಿಯನ್ನು ಮತ್ತೆ ಮತ್ತೆ ಮೆಲುಕು ಹಾಕಿಕೊಂಡು  ಅದನ್ನು ಅನುಭವಿಸುವಾಗ ಸಿಗುವ ಸಂತಸ ಜಗತ್ತಿನ ಯಾವುದೇ ಕರೆನ್ಸಿ (ಮೊಬೈಲ್ ಕರೆನ್ಸಿ ಅಲ್ಲ) ಕೊಟ್ಟರೂ ಸಿಗೋಲ್ಲ..

ಒಂದು ಭೇಟಿಗಾಗಿ ಈ ಪದವಿ ಕಾಲೇಜು ದಿನಗಳ ಸ್ನೇಹಿತರು ಕಾಯುತ್ತಲೇ ಇದ್ದರು.. ಅವತ್ತು ಇವತ್ತು ಅಲ್ಲಿ ಇಲ್ಲಿ ಹೀಗೆ ಕಾರಣಗಳು, ಜಾಗಗಳು, ದಿನಗಳು ಬದಲಾಗುತ್ತಲೇ ಇದ್ದವು..

ಕಡೆಗೆ ನಾ ತಡೆಯಲಾರದೆ.. ಸುಮ್ಮನೆ ಒಂದಷ್ಟು ಪದಗಳನ್ನು ಜೋಡಿಸಿ ಕವಡೆ ಹಾಕಿದೆ..

"​ಇ​​ಬ್ಬರಿರಲಿ
ಮೂವರಿರಲಿ
ಒಂದು ಕಾಫೀ
ಒಂದು ಟೀ
ಒಂದು ಬೊಂಡ
ಒಂದು ದೋಸೆ
ಇದೇ ಸಾಕೆ ಅಂತಾ ಕೇಳಿದೆ‌ ಜೇನುನೊಣವನ್ನ

ಅಯ್ಯೋ ಶ್ರೀ... ಒಬ್ಬ ಬಂದರೂ ಸಾಕು
ಗೆಳೆತನದ ಹಣತೆಗೆ ತೈಲ ಹಾಕಲು ಎಂದು ಹೇಳಿ ಮಕರಂದ ತರಲು ಹೋಯಿತು
....

ಅಷ್ಟೇ... ಶುರು ಮಾಡಿದರೆ ಸಾಕು...
ನಿರಂತರವಾಗುರುತ್ತೆ"

ಪಗಡೆ ಆಡುವಾಗ ಒಳ್ಳೆಯ ಗರ ಬಿದ್ದರೆ ಖುಷಿಯಾಗುವ ಹಾಗೆ.. ಎಲ್ಲರೂ ಖುಷಿ ಪಟ್ಟರು..

ಐದು ಘಂಟೆ ಶನಿವಾರ ಮಯ್ಯ ..

"ಶ್ರೀ ಎಲ್ಲಿದೀಯಾ.. "
ನಿಂತ ಜಾಗ ಹೇಳಿದೆ.. ಭೂಮಿ  ಗುಂಡಾಗಿದೆ ಆಲ್ವಾ.. ಆ ಕಡೆಯೂ ಅದೇ ಫಲಕ.. ಈ ಕಡೆಯೂ ಇದೆ ಫಲಕ.. ಸರಿ ಒಂದತ್ತು ಸೆಕೆಂಡ್ಸ್.. ಇಬ್ಬರೂ ಭೇಟಿಯಾದೆವು..

ಅನಿಲ್ ಹೇಳಿದಾ.. "ಶ್ರೀ This meeting is for the past.. not for the present" ಅದ್ಭುತ ಮಾತುಗಳು ..

ನಾವು ಕಾಲೇಜು ದಿನಗಳಲ್ಲಿ ಇದ್ದ ಸಂಕೋಚವೂ, ಮಸ್ತಿ, ಜೋರು.. ಎಲ್ಲವೂ ಕಾಲನ ಹೊಡೆತಕ್ಕೆ ಸಿಕ್ಕಿ ಬದಲಾಗಿರಬಹುದು.. ಅಂದು ಸಂಕೋಚದ ಮುದ್ದೆಯಾಗಿದ್ದ ನಾನು ಇಂದು ಎಲ್ಲರೊಡನೆ ಮಾತಾಡುವ ಹಂತಕ್ಕೆ ತಲುಪಿದ್ದು ಇತ್ತು.. ಇನ್ನೂ ಕೆಲವರು.. "ಕಾಲವನ್ನು ತಡೆಯೋರು ಯಾರೂ ಇಲ್ಲ.. ನಮ್ಮನ್ನು ಬದಲಾಯಿಸೋರು ಎಲ್ಲೂ ಇಲ್ಲ"  ಎನ್ನುತ್ತಾ ಅಂದಿನ ದಿನಗಳಲ್ಲಿ ಇದ್ದ ಅದೇ ಗುಣವನ್ನು ಉಳಿಸಿಕೊಂಡಿದ್ದರು..

ಇವೆಲ್ಲಾ ಸರಿ.. ಆದರೆ ಆ ದಿನಗಳ ಗೆಳೆಯರನ್ನು ಭೇಟಿ ಮಾಡಬೇಕು .. ಸಂಪರ್ಕದಲ್ಲಿರಬೇಕು ಎನ್ನುವ ತವಕ ಎಲ್ಲರಲ್ಲೂ ಇತ್ತು..

ಒಂದು ಸುಂದರ ಸಂಜೆ ಇದಕ್ಕೆ ಸಾಕ್ಷಿಯಾಗಿತ್ತು..

ತ್ಸುನಾಮಿ ಒಮ್ಮೆಲೇ ಬರುವುದಿಲ್ಲ .. ಕೊಂಚ ಕುರುಹುಗಳನ್ನು ಕೊಡುತ್ತದೆ..

ನಾ ಒಬ್ಬನೇ ಪ್ಯಾದೆ ತರಹ ನಿಂತಿದ್ದೆ..
ನಗುವಿನ ಸುಂದರಾಂಗ ಅನಿಲ ಜೊತೆಯಾದ
ನಾಯಕನ ನಾನೇ ಈ ಕಥೆಗೆ ಎಂದು ಹರಿನಾಥ ಬಂದ
ಶ್ರೀ I was in to everything now am in to my own ಅಂತ ಅನು ಬಂದಳು
ಇಂದಿನ ತಣ್ಣನೆ ನಗುವಿನ ಜೊತೆ happy new year ಅಂತ ನಂದಿನಿ ಕಾಲಿಟ್ಟಳು
ನೆನಪಿನ ಗಣಿಯಾಗಿ.. ಆ ದಿನಗಳ ನೆನಪಿನ ಮೂಟೆ ಹೊತ್ತು ವೃಂದಾ ಅಡಿಯಿಟ್ಟಳು

ಆರು ಮಂದಿ ಇದ್ದೇವೆ.. ನಡೀರಿ ಮಯ್ಯಕ್ಕೆ ಲಗ್ಗೆ ಹಾಕೋಣ ಅಂದಾ ಹರಿ..

ಬಿಸಿ ಬಿಸಿಯ "ತಣ್ಣನೆ" ಜಾಮೂನು ಮಸಾಲೆ ದೋಸೆಯ ಸವಿಯನ್ನು ಕದ್ದಿತ್ತು..
ರವೇ ಇಡ್ಲಿ ತನ್ನ ಜಾದೂವನ್ನು ಮೂಡಿಸಿತ್ತು..

ನಾ ಬಂದೆ ಕಣೋ ಎನ್ನುತ್ತಾ ಚೆಲುವ ರಾಜಶೇಖರ್ ಬಂದ..
ಪಾಟೀಲ.. ನಾ ನಾನು ಇದ್ದೇನೆ ನಗುಮೊಗದ  ಅರಸ ರವೀಂದ್ರ..
ಇದಕ್ಕಾಗಿ ಸ್ವಲ್ಪ ಸಮಯ ಮಾಡಿಕೊಂಡು ಬಂದೆ ಎಂದ ಎಂದಿನ ಹಾಸ್ಯ ಮಾತುಗಳ ಆನಂದ

ಈ ಭೇಟಿಗೆ  ಇನ್ನೂ ಸ್ವಲ್ಪ ಫಿಟ್ನೆಸ್ ತೂಕ ಬೇಕಿತ್ತು.. ಅಷ್ಟರಲ್ಲಿ ಕಾಲೇಜು ದಿನಗಳ ಮೂರು ವರ್ಷಗಳ ಸಂತಸವನ್ನು ಹೆಕ್ಕಿ ಹೆಕ್ಕಿ ಬಡಿಸಲು ಶುರುವಾಗಿತ್ತು..

ತಮಾಷೆ ಎಂದರೆ.. ಇದು ನಮ್ಮ ಸ್ನೇಹದ ರಜತ ಮಹೋತ್ಸವ.. ಹೌದು ೧೯೯೩ ರಂದು ಕಾಲೇಜು ಮುಗಿಸಿದ ಮೇಲೆ.. ೨೫ ವರ್ಷಗಳ ನಂತರ ಮತ್ತೆ ಒಂದು ಭೇಟಿ (ಮಧ್ಯೆ ಮಧ್ಯೆ ಅಲ್ಲಿ ಇಲ್ಲಿ ಸಿಗುತಿದ್ದರೂ.. ಒಂದು ದೀಪದ ಹಣತೆಯನ್ನು ಮತ್ತೆ ಹಚ್ಚಲೇ ಬೇಕು ಎನ್ನುವ ಬಲವಾದ ನಿರ್ಧಾರ ತಳೆದ ದಿನ ಇದಾಗಿತ್ತು.. ಹಾಗಾಗಿ ರಜತ ಸಂಭ್ರಮ)

ಆಗ ಬಂದ ಫಿಟ್ನೆಸ್ ಫ್ರೀಕ್ ಮಧುಸೂದನ್.. ಹ ಹ ಹ ಹ.. ನಾಲ್ಕು ಮೆಟ್ಟಿಲುಗಳ ನಗು ಅವನ ಪ್ರತಿ ವಾಕ್ಯಕ್ಕೂ ಇತ್ತು.. ನಗು ನಗು ನಗು..

ಮಯ್ಯದ ಎರಡನೇ ಮಹಡಿಯಲ್ಲಿ ನಮ್ಮ ಟೇಬಲ್ ಮಸ್ತಿ ನಗು.. ಎಲ್ಲರೂ ಒಮ್ಮೆ  ತಿರುಗಿ ನೋಡುವಂತೆ ಮಾಡಿದ್ದು ಸುಳ್ಳಲ್ಲ..

ಅಚಾನಕ್ ಭೇಟಿ ಇದಾಗಿದ್ದರೂ.. ಹತ್ತು ಮಂದಿಸಿಕ್ಕಿದ್ದು .. ಖುಷಿಯಾಗಿತ್ತು..

ದೊಡ್ಡ ದೊಡ್ಡ ಭೇಟಿ ಬಿಟ್ಟು.. ಹೀಗೆ ಬೆಳಗಿನ ತಿಂಡಿಗೆ, ಊಟಕ್ಕೆ, ಸಂಜೆ ಲಘು ಉಪಹಾರಕ್ಕೆ ಭೇಟಿ ಮಾಡುತ್ತಲೇ ಇರಬೇಕು ಎನ್ನುವ ಸುಗ್ರೀವಾಜ್ಞೆಯನ್ನು ಹೊರಡಿಸಿ ಈ ಭೇಟಿಗೆ ಶುಭಮಂಗಳ ಹಾಡಿದೆವು..




ದೀಪದಲ್ಲಿ ಬತ್ತಿ ಇರುತ್ತೆ
ದೀಪದ ಎಣ್ಣೆ ಇರುತ್ತೆ
ಬೆಂಕಿ ಪೊಟ್ಟಣದಿಂದ ದೀಪವನ್ನು ಬೆಳಗುತ್ತೇವೆ..
ಆದರೆ ಆ ದೀಪ ಸದಾ ಉರಿಯಲು ಏನೂ ಮಾಡಬೇಕು
ದೀಪದ ಬತ್ತಿಯನ್ನು ಸರಿ ಮಾಡುತ್ತಿರಬೇಕು
ಮತ್ತೆ ದೀಪಕ್ಕೆ ದೀಪದ ಎಣ್ಣೆಯನ್ನು ಹಾಕುತ್ತಿರಬೇಕು
ಆ ಕೆಲಸವೇ ಈ ಗೆಳೆಯರ ಭೇಟಿ..

ಸಿಗುತ್ತಿರೋಣ ಅಲ್ಲವೇ.
ಸಿಗುತ್ತಿರಲೇ ಬೇಕು
ಸಿಗ್ಗುತ್ತಿರಲಿ ಎಂದೇ ಈ ವಾಟ್ಸಾಪ್ ಗ್ರೂಪ್ ಮಾಡಿರೋದು
ಭೂಪಟದಲ್ಲಿ ನಲಿದಾಡುತ್ತಿರುವ ನ್ಯಾಷನಲ್ ಕಾಲೇಜಿನಲ್ಲಿ ಓದಿದ್ದು ಅದಕ್ಕೆ ಆಲ್ವಾ
ನಾವು ಕೈಯೆತ್ತಿದರೆ ವಿದ್ಯಾರ್ಥಿ ಭವನ ದೋಸೆ ಸಿದ್ಧ ಮಾಡುತ್ತೆ
ಮಯ್ಯ ಹೋಟೆಲಿನಲ್ಲಿ ಸ್ಟ್ರಾಂಗ್ ಕಾಫಿ ರೆಡಿ ಇರುತ್ತೆ
ಕ್ಲಬ್, ರೆಸಾರ್ಟ್, ಹೋಟೆಲು ನಮಗಾಗಿ ಕಾದಿರುತ್ತೆ ..

(ಆರ್ಮುಗಂ ಸಂಭಾಷಣೆ ಅಲ್ಲಾ.. ನಿಮ್ಮೆಲ್ಲರ ಮನದಲ್ಲಿರುವ ಸ್ನೇಹದ ಮಾತುಗಳು)

ಕಾಲೇಜು ದಿನಗಳ ನಮ್ಮೆಲ್ಲರ ಸ್ನೇಹಕ್ಕೆ ಒಂದು ಜೈ... !!!