Friday, June 21, 2013

ಪ್ರೀತಿಯೇ ನನ್ನುಸಿರು .....:-)

 ಕುಮಾರಿ ಭಾಗ್ಯ ಭಟ್  ಎಂಬ ಉತ್ತಮ ಬ್ಲಾಗಿತಿಯ (ಬ್ಲಾಗರ್) ಒಂದು ಸುಂದರ ಪ್ರೇಮ ನಿವೇದನೆಯ ಲೇಖನವನ್ನುಓದಿದಾಗ.. ಮನಸಲ್ಲಿ ಒಂದು ಸಣ್ಣ ಎಳೆ ಹುಟ್ಟಿತು... 

ಅವರ ಲೇಖನವನ್ನು ಹಾಗೆಯೇ ಇಟ್ಟುಕೊಂಡು ಯಾವ ಸಾಲು, ಯಾವ ಅಕ್ಷರ ಬದಲಾಯಿಸದೆ ಅದಕ್ಕೆ ಒಂದು ಬೇರೆ ರೂಪ ಕೊಡುವ ಮನಸ್ಸಾಯಿತು. 

ಭಾಗ್ಯ ಅವರಿಗೆ ಇದನ್ನು ಹೇಳಿದಾಗ ಅವರು "ಜಿ ಇದೊಂದು ವಿಭಿನ್ನ ಪ್ರಯತ್ನ ಅನ್ನಿಸುತ್ತೆ ಖಂಡಿತ ಬರೆಯಿರಿ.. " ಎಂದು ತಮ್ಮ ಅನುಮತಿ ನೀಡಿದರು.. 

ಆ ಲೇಖನವನ್ನು ಓದಿ ಅದರ ಮೂಸೆಯಲ್ಲಿ ಅರಳಿದ ಕಥೆ ನಿಮ್ಮ ಮುಂದೆ ಇಟ್ಟಿರುವೆ.. ಈ ಲೇಖನಕ್ಕೆ ಬೆನ್ನೆಲುಬು, ಅಡಿಪಾಯ, ಗೋಡೆ, ಕಟ್ಟಡ ಎಲ್ಲಾ ಭಾಗ್ಯ ಅವರದು.. ನನ್ನದೇನಿದ್ದರೂ ಮನದ ಪ್ರೇರಣೆಯ ಮಾತಿನಿಂದ... ಅವರು ಕಟ್ಟಿದ  ಸುಂದರವಾದ ಮನೆಗೆ  ಒಂದೆರಡು ಹೂವುಗಳನ್ನು ಇಟ್ಟು ಅಲಂಕರಿಸಿದ್ದೇನೆ.. 

ಭಾಗ್ಯ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಾ ಈ ಲೇಖನ ನಿಮ್ಮ ಮುಂದೆ ಇಡುತಿದ್ದೇನೆ. 

ವಿ ಸೂ : ಬಣ್ಣ ತುಂಬಿದ ಭಾವಪೂರಿತ ಅಕ್ಷರಗಳು, ಸಾಲುಗಳು ಲೇಖಕಿಯದು! 
----------------------------------------------------------------------------- ಕೈಯಲ್ಲಿದ್ದ ಮೊಬೈಲಿನಲ್ಲಿ ಮಸಣದ ಹೂವು ಚಿತ್ರದ ಇಷ್ಟವಾದ  
"ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ" ಹಾಡು ಪ್ರಸಾರವಾಗುತ್ತಿತ್ತು. ಕಿವಿಗೆ ಹ್ಯಾಂಡ್ಸ್ ಫ್ರೀ ಹಾಕಿಕೊಂಡದ್ದರಿಂದ ಅಲೆಗಳ ಮೊರೆತ ಹಾಡಿಗೆ ಭಂಗ ತಂದಿರಲಿಲ್ಲ.. 

ಒಮ್ಮೆ ಕೈನಲ್ಲಿದ್ದ ಗಡಿಯಾರ ನೋಡಿಕೊಂಡಾಗ ಅದು ಹಲ್ಲು ಬೀರುತ್ತಾ "ಇನ್ನೂ ಸಮಯವಿದೆ" ಅಂತ ಹೇಳಿದಂತೆ ಭಾಸವಾಯಿತು. 

ಸರಿ ಅಲೆಗಳ ರಭಸಕ್ಕೆ, ಗಾಳಿಯ ಬೀಸಾಟಕ್ಕೆ ಅಂದು ತಾನೇ ಬ್ಯೂಟಿ ಪಾರ್ಲರ್ನಲ್ಲಿ ಹೊಸದಾಗಿ ಮೂಡಿಸಿದ್ದ ಕೇಶವಿನ್ಯಾಸ 
ಹಾಗೆ ಇರಲಿ ಎಂದು ಬಿಟ್ಟಿದ್ದಕ್ಕೆ ರೇಷ್ಮೆಯಂತ ಜೋಂಪು ಕೂದಲು ಮುಖದ ಮೇಲೆ ಚಿತ್ತಾರ ಮೂಡಿಸುತ್ತಿತ್ತು. ಪರ್ಸ್ನಲ್ಲಿ ಇದ್ದ ಲಕೋಟೆಯನ್ನು ಹಾಗೆ ಒಮ್ಮೆ ಬಿಚ್ಚಿದ ಹುಡುಗಿ.. ತುಟಿಯ ಮೇಲೆ ಒಂದು ಕಿರು ನಗೆ ಬೀರಿ ಅದೆಷ್ಟೋ ಬಾರಿ ಓದಿ ಓದಿ ಕಂಠ ಪಾಠವಾಗಿದ್ದ ಪದಗಳನ್ನು ಮತ್ತೆ ಮತ್ತೆ ಓದಲು ಶುರುಮಾಡಿದಳು.
ಮೊಬೈಲಿನಲ್ಲಿ ಹಾಡು ಬದಲಾಯಿತು "ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ ನಾ ಬರೆವೆ"

"ಪ್ರೀತಿಯ ಮುದ್ದು, 

ಬದುಕಿನ ಒಂದು ಹಂತವ ಹತ್ತಿ ಹಿಂತಿರುಗಿದಾಗ ತುಂಬಾ ಕಾಡಿದ್ದ ಸಂಗಾತಿ ನೆನಪಿದು . ಬಾಳ ದೋಣಿಯಲ್ಲಿ ಅಂಬಿಗನ ಹುಡುಗಾಟದಲ್ಲಿದ್ದಾಗ ಸಿಕ್ಕ ಹುಡುಗ ನೀನು !
ಪ್ರೀತಿ ಪ್ರೇಮದ ಬಗೆಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರದ ನನ್ನಲ್ಲಿ ಅದ್ಯಾಕೋ ಒಂಟಿತನದ ಭೂತ ಕಾಡ ಹತ್ತಿತ್ತು ...ಎಲ್ಲರಂತೆ ನಂಗೂ ಪ್ರೀತಿಸೋ, ಮುದ್ದಿಸೋ ಮನವೊಂದು ಬೇಕನಿಸತೊಡಗಿತ್ತು .."

ಪತ್ರವನ್ನು ಅಲ್ಲಿಯೇ ನಿಲ್ಲಿಸಿದ ಆ ಬೆಡಗಿ ನೀಲ ಆಗಸದ ಕಡೆ ಕಣ್ಣನ್ನು ಚಾಚಿದಳು.. 

ಮನಸಲ್ಲಿ ಏಳುತಿದ್ದ ಅಲೆಗಳನ್ನೆಲ್ಲ ಶರಧಿಗೆ ಮತ್ತೆ ಬಿಟ್ಟು ಬಿಡಬೇಕೆಂಬ ಹಂಬಲ! 
ನಡುವೆಯೇ ಮತ್ತೆ ಇನ್ನೊಂದು ಗಾನ ಶುರುವಾಯಿತು. 
"ನೇರ ಬಿಟ್ಟು ನೆಲದ ಮೇಲೆ ದೋಣಿ ಸಾಗದು.. ನೆಲವ ಬಿಟ್ಟು ನೀರಮೇಲೆ ಬಂಡಿ ಹೋಗದು.. ನಿನ್ನ ಬಿಟ್ಟು ನನ್ನ.. ನನ್ನ ಬಿಟ್ಟು ನಿನ್ನ ಜೀವನ ಸಾಗದು". 

ಮತ್ತೆ ಪತ್ರ ಓದುವತ್ತ ಕಣ್ಣು ಓಡಿತು. 


"ಹುಚ್ಚು ಕನಸು ಕಾಣೋ ವಯಸಲ್ಲೇ ನೀ ನನಗೆ ಪರಿಚಯವಾಗಿದ್ದು...  ಗಂಟೆಗಟ್ಟಲೇ ಹರಟಿದ್ದು ..
ತುಂಬಾ ಕಾಲೆಳೆಯುತ್ತಿದ್ದ ಸ್ನೇಹಿತರ ಗುಂಪಲ್ಲಿ ನೀ ಯಾಕೋ ತೀರಾ ಅಪರೂಪನಾಗಿ ಕಂಡೆ ನಂಗೆ . 
ಆತ್ಮೀಯನಾದೆ ,ಆಧರಿಸಿದೆ.ಅದೆಷ್ಟೋ ಮಾತುಗಳಿಗೆ ಕಿವಿಯಾದೆ ,ಪ್ರೀತಿಗೆ ಹೆಸರಾದೆ,ನನ್ನ ಬೇಸರಕ್ಕೆ ನೀ ಕೈ ಹಿಡಿದು ನೀಡೋ ಸಾಂತ್ವಾನಕ್ಕೆ ನಾ ಯಾವತ್ತೋ ಕಳೆದು ಹೋದೆ .ತೀರಾ ಸೌಮ್ಯನಲ್ಲದ ತೀರಾ ಮಾತಾಡೋನೂ ಅಲ್ಲದ ನಿನ್ನ ಮೇಲೆ ಸಣ್ಣದೊಂದು ಒಲವಾಗಿತ್ತಲ್ಲಿ."

ಓದುತ್ತ ಹೋದ ಹಾಗೆ ಅಲೆಗಳ ತರಹ ಭಾವಗಳ ಹೊಯ್ದಾಟ..

ಹೃದಯ ಮಿಡಿತ, ಬಡಿತ ಆ ಸಮುದ್ರ ದಂಡೆಯಲ್ಲಿ ಅಪ್ಪಳಿಸುತಿದ್ದ ಅಲೆಗಳು ಮಾಡುವ ಶಬ್ಧದ ನಡುವೆಯೂ ಸ್ಪಷ್ಟವಾಗಿ ಕೇಳಿಸುತಿತ್ತು!  
ಕಿವಿಗೆ ಹ್ಯಾಂಡ್ಸ್ ಫ್ರೀ ಹಾಕಿಕೊಂಡಿದ್ದರೂ ಹೆಜ್ಜೆಗಳ ಸಪ್ಪಳ ಕೇಳಿಸಿದ ಮೇಲೆ ಎದೆಯ ಬಡಿತ ಇನ್ನೂ ಜೋರಾಯಿತು.. 
ಯಾರೋ ಕಿವಿಯ ಹತ್ತಿರದಲ್ಲಿ "ಹಾಯ್ ಬಂಗಾರಿ" ಅಂದಂತೆ ಆಯಿತು.. 
ತಟ್ಟನೆ ತಿರುಗಿ ನೋಡಿದರೆ.. ದೂರದಲ್ಲಿ ನಿಧಾನವಾಗಿ ಇಳಿಯುತ್ತಿದ್ದ ಸೂರ್ಯನ ಹೊಂಬಣ್ಣದಲ್ಲಿ ಹೊಳೆಯುತಿದ್ದ ಆ ಹುಡುಗ.. 
ತನ್ನ ತಂಪು ಕನ್ನಡಕವನ್ನು ತೆಗೆದು ಮುಗುಳು ನಗೆ ಬೀರಿದ... 
ಹುಡುಗಿಯು ಒಂದು ಮಲ್ಲಿಗೆ ಹೂವಿನ ನಗೆಯನ್ನು ಬೀರಿದಳು. 
ಜೇಬಿಂದ ಹೊರಬಂದ ಮಿಲ್ಕ್ ಬಾರ್ ಚಾಕ್ಲೆಟ್ ಹುಡುಗಿಯ ಮುನಿಸನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಯಿತು. 

"ಅಲ್ಲಾ ಬಂಗಾರಿ ಈ ಪತ್ರವನ್ನು ಎಷ್ಟು ಬಾರಿ ಓದ್ತೀಯ.. ಅಪ್ಪಾ ನನಗಂತೂ ಪ್ರತಿ ಪದ.. ಪ್ರತಿ ಅಕ್ಷರ ಕೇಳಿ ಕೇಳಿ ಸಾಕಾಗಿದೆ... 
ಇರು ಇನ್ನು ಮುಂದೆ ನಾ ಹೇಳ್ತೇನೆ.. ಸರಿ ಇದೆಯಾ ನೀನೆ ಹೇಳು" 

ಹುಡುಗಿ ಚಾಕ್ಲೆಟ್ ಮೆಲ್ಲುತ್ತಾ ಕಣ್ಣು ಮಿಟುಕಿಸಿದಳು... 


ಹುಡುಗ ನಿಂತುಕೊಂಡು ವಯ್ಯಾರದಿಂದ 

"ಅವತ್ತದ್ಯಾವುದೋ ಹುಡುಗನ ಹೆಸರ ಹೇಳಿ ರೇಗಿಸಿದ್ದ ನಿನ್ನ ಮೇಲೆ ತೀರಾ ಸಿಟ್ಟು ಬಂದಿತ್ತು ನಂಗೆ. ಈ ಹುಡುಗ ಯಾಕೆ ಇನ್ಯಾರದೋ ಹೆಸರಿಗೆ ತನ್ನ ಹುಡುಗಿಯ ಹೆಸರ ಹೇಳಿದ್ದಾನೆ ಅನ್ನೋ ಕೋಪ ಸೀದಾ ಮನದ ಮಾತನ್ನ ನಿನ್ನೆದುರಿಗೆ ತೆರೆದಿಟ್ಟಿತ್ತು ...ನಿನ್ನನ್ನಿಲ್ಲಿ ಆರಾಧಿಸುತ್ತಿರೋ ಹುಡುಗಿಯನ್ಯಾಕೆ ಇನ್ಯಾರದೋ ಹೆಸರ ಜೊತೆಯಾಗಿಸುತ್ತೀಯಾ? 

"ಲವ್ ಯು ಸ್ಟುಪಿಡ್ " 

ಅಂತ ಹೇಳಿ ಆಮೇಲೆ ನಾಲಿಗೆ ಕಚ್ಚಿ ಕೊಂಡ ನೆನಪು ನಿನ್ನೆ ಮೊನ್ನೆಯದು ಅನಿಸುತ್ತಿದೆ ಕಣೋ! ನೀ ನಕ್ಕು ಮುದ್ದಿಸಿದ್ದೆ ನೆನಪಿದ್ಯಾ ನಿಂಗೆ?" 

ಹುಡುಗಿ ಜೋರಾಗಿ ನಗಲು ಶುರು ಮಾಡಿದಳು.. ಹುಡುಗ ಕಕ್ಕಾಬಿಕ್ಕಿ "ಯಾಕೆ ಬಂಗಾರಿ ಏನಾಯ್ತು.. ನಾನು ಹೇಳಿದ್ದು ತಪ್ಪಿದೆಯ"


"ಇಲ್ಲಾ ಕಣೋ ನೀನು ಹೇಳಿರೋದು ಪರ್ಫೆಕ್ಟ್ ಇದೆ.. ತಮಾಷೆ ಗೊತ್ತಾ ಮುಂದಿನ ಸಂಭಾಷಣೆಗಿಂತ ಮುಂಚೆ ಕೇಳು ಈ ಹಾಡನ್ನ" ಅಂದಳು ಹುಡುಗಿ.. 

ಹ್ಯಾಂಡ್ಸ್ ಫ್ರೀ ಕಿವಿಗೆ ಹಾಕಿಕೊಂಡು ಹೇಳಿದ ಹುಡುಗ ಹೊಟ್ಟೆ ಹಿಡಿದು ನಗಲು ಶುರುಮಾಡಿದ.... ನಕ್ಕು ನಕ್ಕು ಸುಸ್ತಾಗಿ ಬಿದ್ದು ಬಿಟ್ಟಾ.. ಹ್ಯಾಂಡ್ಸ್ ಫ್ರೀ ಕಿವಿಯಿಂದ ಕಿತ್ತು ಬಂದ  ಕಾರಣ ಸ್ಪೀಕರ್ ಫೋನ್ ನಲ್ಲಿ ಹಾಡು ಬರುತಿತ್ತು 
"ಕೇಳಿಸದೆ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ" 

ಹುಡುಗಿ ನಗುತ್ತಲೇ ಮುಂದಿನ ಪತ್ರದ ಸಾಲನ್ನು ಹೇಳತೊಡಗಿದಳು 

"ಆಮೇಲಿನದು ನಂಗಿಂತ ಜಾಸ್ತಿ ಗೊತ್ತಿರೋದು ಪ್ರತಿ ದಿನದ ಸಂಜೆಯಲ್ಲಿ ಮರಳ ತೀರದಲ್ಲಿ ಕೂರುತ್ತಿದ್ದ ಅದೇ ಕಲ್ಲು ಬಂಡೆಗಳಿಗೆ ..ನಮ್ಮಿಬ್ಬರ ಭಾವಗಳ ಏಕೈಕ ಸಂಬಂಧಿ ಎಂದರೆ ಅದೇ ಇದ್ದೀತು ..."

ಹುಡುಗ ಒಂದು ತುಂಡು ಚಾಕ್ಲೆಟ್ ಮೆಲ್ಲುತ್ತ ಮತ್ತೆ ತನ್ನ ಹಾವ ಭಾವ ತೋರಿಸುತ್ತಾ   ಪತ್ರದ ಮುಂದಿನ ಸಾಲನ್ನು ಹೇಳಿದ

"ಆ ತೀರದಲ್ಲಿ ನಿನ್ನೊಟ್ಟಿಗೆ ನಿನ್ನ ಕಿರುಬೆರಳ ಹಿಡಿದು ದಿನವೂ ಕೂರುತ್ತಿದ್ದ ದಿನಗಳ್ಯಾಕೋ ನೆನಪಾಗಿದೆ ಕಣೋ . ಭಾವಕ್ಕೆ ಜೊತೆಯಾಗಿ ,ಬದುಕಿಗೆ ಪಾಲುದಾರನಾಗಿ ಬರುವೆ ಗೆಳತಿ ಅಂತ ನೀ ನೀಡಿದ್ದ ಭರವಸೆಯ ಆ ದಿನಗಳು ನೆನಪಾಗುತ್ತಿವೆ.. ಜೊತೆಯಾಗಿ ಸುತ್ತಿದ್ದೆಷ್ಟೋ , ಎದುರು ಕೂತು ಕಣ್ಣಂಚ ಒದ್ದೆಯಾಗಿಸಿದ್ದೆಷ್ಟೋ ,ಪ್ರೀತಿಯಿಂದ ತಲೆ ಸವರಿ ನೀ ಹೇಳಿದ್ದ ಧೈರ್ಯ, ಕಣ್ಣಲ್ಲಿ ಕಣ್ಣಿಟ್ಟು ಕೊಟ್ಟ ಭರವಸೆ ಈ ಜನ್ಮಕ್ಕಾಗುವಷ್ಟಿದೆ."

ಅವನ ಪಕ್ಕದಲ್ಲಿಯೇ ಕಡಲೆಕಾಯಿ,  ಖಾರ ಹಚ್ಚಿದ ಮಾವಿನ ಕಾಯಿ, ಅನಾನಸ್, ಸೌತೆಕಾಯಿ ಇವನೆಲ್ಲಾ ತಳ್ಳು ಗಾಡಿಯಲ್ಲಿಟ್ಟುಕೊಂಡು ಒಬ್ಬಾತ ಜೋರಾಗಿ ಹಾಡುತ್ತಾ ಸಾಗಿದ್ದ "ಜನ್ಮ ಜನ್ಮದ ಅನುಬಂಧ ಹೃದಯ ಹೃದಯಗಳ ಪ್ರೇಮಾನುಬಂಧ..ಜನ್ಮ ಜನ್ಮದ ಅನುಬಂಧಾ ಆ ಆ ಆ" 


ಇಬ್ಬರಿಗೂ ನಗು ತಡೆಯಲಾಗಲಿಲ್ಲ.. "ಏನ್ ಬಂಗಾರಿ ಇದು! ನಾವ್ ಹೇಳುವ ಪದಕ್ಕೆಲ್ಲ ಒಂದು ಹಾಡು ನುಗ್ಗುತ್ತಿದೆ" ಎಂದ


ಮತ್ತೆ ಹುಡುಗಿ ಮುಂದುವರೆಸಿದಳು "ನಮ್ಮಿಬ್ಬರ ಪ್ರತಿ ಭಾವಗಳೂ ಆ ಮರಳ ದಂಡೆಗೆ ಗೊತ್ತೇನೋ ...
ಪಾರ್ಕಿನಲ್ಲಿ ಕೂತು ಮನಸೋ ಇಚ್ಚೆ ಹರಟಿದ್ವಿ ಬಿಟ್ರೆ.... ಅಲ್ಲಿರೋ ಜೋಡಿಗಳ ತರ ನಾವ್ಯಾವತ್ತೂ ಮಾಡಿಲ್ಲ .
ನೀನ್ಯಾವತ್ತೂ ನನ್ನ ತಬ್ಬಿಕೊಂಡಿಲ್ಲ, ಕೈಯಲ್ಲಿ ಬೆಸೆವ, ನಾನಿದ್ದೇನೆ ಜೊತೆ ಅನ್ನೋ ಕೈ, ಹಣೆಯ ಮೇಲೊಂದು ಮುತ್ತು ಬಿಟ್ಟು... ಅದರಾಚೆಯ ಯಾವುದನ್ನೂ ನಿರೀಕ್ಷಿಸಿಲ್ಲ!..ನಿನ್ನ ಮೇಲಿನ ನನ್ನ ಹೆಮ್ಮೆ ಜಾಸ್ತಿಯಾಗೋದು ಇಲ್ಲೆ ಕಣೋ ....ಎಲ್ಲರೆದುರು ಪ್ರೀತಿಯ ಪ್ರದರ್ಶನ ಮಾಡೋ, ಪ್ರೀತಿ ಅಂದ್ರೆ ಅಸಹ್ಯ ಆಗೋ ತರ ಆಡೋ ಅದೆಷ್ಟೋ ಮಂದಿಯೆದುರು ನೀ ಆದರ್ಶನಾದೆ ಅನ್ನೋ ಖುಷಿ ನಂದಾಗಿತ್ತು ಅಲ್ಲಿ!"

ಚುರುಮುರಿ ಗಾಡಿಯವ ಜೋರಾಗಿ ಹಾಡು ಹಾಡುತಿದ್ದ  "ಪ್ರೀತಿನೆ ಆ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೆ" 


ಹುಡುಗ ಹುಡುಗಿ ಇಬ್ಬರು ನಸು ನಗುತ್ತಾ ಒಬ್ಬರನ್ನು ಒಬ್ಬರು ನೋಡುತ್ತಾ ಮೈ ಮರೆತಿದ್ದರು.. ಕೈಯಲ್ಲಿದ್ದ ಪತ್ರ ಸಮುದ್ರ ತೀರದ ಗಾಳಿಗೆ ಹಾರಿ ಹೋಯ್ತು..


ಅದನ್ನ ಹಿಡಿಯಲು ಹುಡುಗ ಓದಲು ಶುರ ಮಾಡಿದ ಅಷ್ಟರಲ್ಲೇ ಅವರ ಪಕ್ಕದಲ್ಲೇ ಮಧುರ ಧ್ವನಿ ಕೇಳಿಸಿತು 

"ಆದರೆ ಇವತ್ಯಾಕೋ ನೀ ನನ್ನ ಕನವರಿಕೆಯ ಕನಸಾಗಿ ಕಾಡ ಬಂದೆ, 
ಏನನ್ನೋ ಹುಡುಕುತ್ತಾ ಇದ್ದಾಗ ಸಿಕ್ಕ "ಮಿಸ್ ಯು ಸ್ವೀಟ್ ಹಾರ್ಟ್" ನೀ ನನಗೆ ಕೊಟ್ಟಿದ್ದ ಮೊದಲ ಗ್ರೀಟಿಂಗ್ ನಿನ್ನಲ್ಲೇ ಕಳೆದುಹೋಗಿದ್ದ ನನ್ನ ಹುಡುಕ ಹೊರಟಿತ್ತು ...ಬಿಡು, ನೀನಿಲ್ಲದೆಯೂ ಇರಬಲ್ಲ ನಂಗೆ... ನೆನಪನ್ನೂ ಕೊಡವಿ ಎದ್ದು ಬರೋದು ಅಷ್ಟು ಕಷ್ಟವಾಗಲಾರದು!
ಆದರೆ ಮುದ್ದು! 
(ಕ್ಷಮಿಸು... ನೀ ಇನ್ಯಾರದೋ ಮುದ್ದು ಆದ್ರೂ ನಂಗೆ ನೀನ್ಯಾವತ್ತೂ ನನ್ನ ಮುದ್ದು) 
ಕಾರಣವೇ ಹೇಳದೆ ಎದ್ದು ಹೋದೆಯಲ್ಲೊ ನೀ.
ಭಾವಗಳ ಹೊಯ್ದಾಟವನ್ನ ನಿನ್ನಲ್ಲಿ ನಾನವತ್ತೇ ಗುರುತಿಸಿದ್ದೆ!...
ಮೆಸೇಜ್ ಗೆ ಬರದ ರೀಪ್ಲೈ ,ಅಮೇಲೊಮ್ಮೆ ನೀ ಕೇಳೋ ಅರ್ಥವಿಲ್ಲದ ಪ್ರಶ್ನೆಗಳಾದ 
"ನಾ ಇರದಿದ್ದರೆ ನೀ ಏನು ಮಾಡ್ತೀಯ?......."ನನ್ನನ್ನ ನೆನಪಿಂದಳಿಸಿ ಬಿಡೆ ಹುಡುಗಿ"
ಅನ್ನೋ ಅದೆಷ್ಟು ಅಸಂಬದ್ದ ಮಾತುಗಳಿಗೆ ಬಿಕ್ಕಿ ಬಿಕ್ಕಿ ಅತ್ತಿದ್ದೆ ..
ನಿನ್ನ ನಿರ್ಧಾರಗಳ ಅರಗಿಸಿಕೊಳ್ಳೋ ಶಕ್ತಿ ನನಗವತ್ತಿರಲಿಲ್ಲ ನಿಜವಾಗ್ಯೂ ...
ಕಾಡಿಸಿ ಕಾಡಿಸಿ ಕೇಳಿದ್ದೆ. ಮನ ಹಗುರಾಗಿಸಿ ಅತ್ತು ಬಿಡೋ ನಾನಿದ್ದೀನಿ ಜೊತೆಗೆ ಅಂತದೆಷ್ಟೋ ಸಲ ಹೇಳಿದ್ದೆ.
ನಂಗೇನು ಗೊತ್ತು? 
ಶಾಶ್ವತ ಕಣ್ಣೀರೊಂದನ್ನು ನನಗೇ ಕೊಟ್ಟು (ಬಿಟ್ಟು) ಹೋಗೋ ಹುನ್ನಾರವಿದು ಅನ್ನೋದು ....!!"

ಹುಡುಗ ಹುಡುಗಿ ಇಬ್ಬರು ಆಶ್ಚರ್ಯ ಚಕಿತರಾಗಿ ತಿರುಗಿ ನೋಡಿದರು.. 

ತಕ್ಷಣ ಹುಡುಗ ಹೇಳಿದ "ಅರೆ.. ನೀನು.. ಏನು ಇಲ್ಲಿ.. ಚೆನ್ನಾಗಿದ್ದೀಯ.. ?"

ಹುಡುಗಿಯು ಕೂಡ "ಏನೇ.. ನಮ್ಮನ್ನು ಮರೆತು ಬಿಟ್ಟಿದ್ದೆಯ.. ಎಲ್ಲಿದ್ದೆ.. ಹೇಗಿದ್ದೀಯ?"


ಆ ಮಧುರ ಧ್ವನಿಯ ಪಕ್ಕದಲ್ಲಿ ಮೀನು ಮಾರುತಿದ್ದ ತಾತನ ಹತ್ತಿರ ಇದ್ದ ರೇಡಿಯೋ ಕಿರುಚುತಿತ್ತು 
"ಎಲ್ಲಿದ್ದೆ ಇಲ್ಲಿ ತನಕ ಎಲ್ಲಿಂದ ಬಂದ್ಯವ್ವ.. ನಿನ ಕಂಡು ನಾ ಯಾಕೆ ಮರುಗಿದೇನೋ"

ಆ ಮಧುರ ಧ್ವನಿಯ ಒಡತಿ ಮತ್ತೆ ಶುರು ಮಾಡಿದಳು 

"ಯಾಕೋ ಸಪ್ಪಗಿದ್ದೀಯಾ? ಅನ್ನೋ ನನ್ನ ಪ್ರಶ್ನೆಗಳನ್ನ... 
ಪ್ರಶ್ನೆಗಳನ್ನಾಗಿಯೆ ಉಳಿಸಿ,
ನೀನಿಲ್ಲದ ಜಗತ್ತೇ ಇಲ್ಲ ಅನ್ನೋ ಮನವೊಂದನ್ನು ಪೂರ್ತಿಯಾಗಿ ಬಿಟ್ಟು ಹೊರಟು ಹೋದೆ ನೀನು ..!
ಕೊನೆಗೆ ನೀ ಎದ್ದೇ ಹೋದೆ ,ಮನಸ್ಸಿಂದಲ್ಲ ..
ಕನವರಿಕೆಯ ಕನಸಿಂದ ಮಾತ್ರಾ.... 
ನೆನಪುಗಳನ್ನಿಲ್ಲೇ ಬಿಟ್ಟು ಹೋಗಿದ್ದೀಯಲ್ಲೋ ಹುಡುಗಾ..ಮರೆತು ಹಾಗೇ ಹೋದೆಯೋ ಅಥವಾ ನಿನ್ನ ಪ್ರೀತಿಸಿದ ತಪ್ಪಿಗೆ...  
ನನ್ನನ್ನದು ಕೊನೆಯ ತನಕ ಕಾಡಲಿ ಅಂತ ಬೇಕಂತಲೇ ಬಿಟ್ಟು ಹೋದೆಯೋ ನಾ ಅರಿಯೆ ..."

ಐಸ್ ಕ್ಯಾಂಡಿಯ ತಳ್ಳುಗಾಡಿಯಲ್ಲಿ ಬೀಡಿ ಸೇದಿಕೊಂಡು ಒಬ್ಬ ತನ್ನಷ್ಟಕ್ಕೆ ತಾನೇ ಹಾಡಿಕೊಂಡಿದ್ದ 
"ಪ್ರೀತೀಯ ಕನಸೆಲ್ಲಾ ಅ ಅ ಅ ... ಕರಗಿ ಹೋಯಿತೇ ಕೊನೆಗೂ"

ಆ ಮಧುರ ಧ್ವನಿಗೆ ಸಮಾಧಾನ ಮಾಡುತ್ತಾ ಆ ಹುಡುಗಿ ಹುಡುಗನಿಗೆ ಹೇಳಿದಳು 

"ನೀ ನನಗೆ ಸಿಕ್ಕ ಭ್ರಮೆಯಲ್ಲಿ ಜಗತ್ತೇ ನನ್ನದು ಅಂತ ಬೀಗುತ್ತಿತ್ತಲ್ಲೋ ಈ ಹುಚ್ಚು ಮನಸ್ಸು! ಪಾಠವೊಂದ ಕಲಿಸಿದೆ ನೀ ..ಕೊನೆಯ ತನಕ ಮರೆಯದ ಅತೀ ಹತ್ತಿರವಾದ ಪಾಠವದು!
ಮನ ಮಾತ್ರ ಯಾರನ್ನೂ ನಿನಗಿಂತ ಜಾಸ್ತಿ ಪ್ರೀತಿಸದಿರೆ ಹುಚ್ಚಮ್ಮ ಅಂತ ಪ್ರತಿ ದಿನ ನೆನಪಿಸುತ್ತೆ ...
ನಾ ನಿನ್ನ ಪ್ರೀತಿಸಿದ ಖುಷಿಗೆ ನನ್ನದೇ ಮನ ನನ್ನ ಖುಷಿ ಕಸಿದುಕೊಂಡಂತನಿಸುತ್ತೆ ಕ್ಷಣವೊಂದಕ್ಕೆ!
ಅದಕ್ಕೂ ನನಗಿಂತ ನಿನ್ನ ಮೇಲೇ ಜಾಸ್ತಿ ವ್ಯಾಮೋಹ ನೋಡು!"

ಹುಡುಗ ಮುಗುಳು ನಕ್ಕ.. ತನ್ನಷ್ಟಕ್ಕೆ ತಾನೇ ಜೋರಾಗಿ ಹಾಡಿದ 

"ರಾಣಿ ರಾಣಿ ರಾಣಿ.. ಎಂದೋ ಮೆಚ್ಚಿದೆ ನಾನು.. ನಿನ ಎಂದೋ ಮೆಚ್ಚಿದೆ ನಾನು"

ಆ ಮಧುರ ಧ್ವನಿ ಮತ್ತೆ ಮುಂದುವರೆಸಿತು 

"ಹೊಟ್ಟೆ ಕಿಚ್ಚಾಗುತ್ತೆ ಕಣೋ ನಿನ್ನ ಮೇಲೆ ..ಮನಸ್ಸಿನ ಮೇಲೆ ಸರ್ವಾಧಿಕಾರಿಯಾಗಿ ಮೆರೆದು 
ಈಗ ನಿನಗಿದು ಸಂಬಂಧಿಸಿದ್ದೇ ಅಲ್ಲಾ ಅನ್ನೋ ತರ ಹೊರ ನಡೆದೆಯಲ್ಲೋ ..
ಪೂರ್ತಿಯಾಗಿ ನಿನ್ನದಾಗಿದ್ದನ್ನ ಬಿಟ್ಟು ಹೋಗೋವಾಗ ಸ್ವಲ್ಪವೂ ಬೇಸರವಾಗಲಿಲ್ವಾ ನಿಂಗೆ? 
ನೀನೆ ಕಟ್ಟಿದ್ದ ಕನಸಮನೆ ಮಗುಚಿ ಬಿದ್ದಾಗ್ಲೂ ಒಂದಿನಿತು ದುಃಖವಾಗ್ಲಿಲ್ವಾ?
ಅಥವಾ ಮುಖವಾಡದ ಪ್ರೀತಿ ಅದಾಗಿತ್ತಾ?
ನಿಜ ಹೇಳು ..ಹಾರಿಕೆಯ ಉತ್ತರ ಕೇಳಿ ಕೇಳಿ ಮನ ಬಿಕ್ಕುತ್ತಿದೆ, 
ನೀ ನಡೆದ ಈ ಮನಸ್ಸು ಯಾರಿಗೂ ಕಾಣದಂತೆ ಆತ್ಮಹತ್ಯೆ ಮಾಡಿಕೊಂಡು ತುಂಬಾ ದಿನಗಳಾಯ್ತು !..."

ಮಧುರ ಧ್ವನಿಯ ಮೊಬೈಲ್ ನಲ್ಲಿ ಹಾಡೊಂದು ಮೂಡಿ ಬರುತಿತ್ತು 

"ಆಟವೇನು? ನೋಟವೇನು? ನನಗೆ ಹೇಳಿದ ಮಾತೇನು? ಏಕೆ ಸುಮ್ಮನೆ ಸುಳ್ಳು ಹೇಳುವೆ ನಿನ್ನ ನಾ ಬಲ್ಲೆನು!"

ಆ ಹುಡುಗಿಗೆ ಯಾಕೋ ಮನ ತಡೆಯಲಿಲ್ಲ.. ತಾನು ಆ ಮಧುರ ಧ್ವನಿಗೆ ಹೇಳತೊಡಗಿದಳು 
"ಯಾರದೋ ಎದೆಯಲ್ಲಿ ಕನಸ ಸೌಧವನ್ನ ಕಟ್ಟಿ ಒಮ್ಮೆಗೇ ಅದನ್ನ ದ್ವಂಸ ಮಾಡಿ ಹಿಂದೆ ತಿರುಗಿಯೂ ನೋಡದೇ ಹೋಗೋ ಅಷ್ಟು ಕೆಟ್ಟವನಲ್ಲ ನನ್ನ ಹುಡುಗ ...! ಯಾವುದೋ ಹೇಳಲಾಗದ ಅನಿವಾರ್ಯತೆಗೆ ಕಟ್ಟುಬಿದ್ದು ನೀ ಹೊರನಡೆದೆಯೇನೋ...."

ಆ ಹುಡುಗಿ ಹುಡುಗನ ಕಡೆ ತಿರುಗಿ ಹೇಳಿದಳು 

"ನನಗರ್ಥವಾದೀತು ಕಣೋ ....ಯಾಕಂದ್ರೆ ನೀ ನನ್ನ ಪ್ರೀತಿ .."

ಮಧುರ ಧ್ವನಿ ಮಧ್ಯದಲ್ಲೇ ತಡೆದು ಹುಡುಗನಿಗೆ ಹೇಳಿದಳು 

"ಬಾಳ ತೆಪ್ಪ ಹುಟ್ಟಿಲ್ಲದೇ ಹೊಯ್ದಾಡುತ್ತಿದ್ದಾಗ ಹುಟ್ಟು ಹಾಕಿದ್ದು ನೀ ಬಿಟ್ಟು ಹೋದ ಮಧುರ ನೆನಪುಗಳೇ..
ಸುನಾಮಿಯಾಗದೆ ಮೃದು ಮಧುರ ನೆನಪುಗಳ ಖುಷಿಸೋ ಅಲೆಯಾಗಿ ದಡ ಸೇರಿಸಿತು ನನ್ನ ...ಇದೇ ನಾ ನನ್ನೊಟ್ಟಿಗೆ ಮಾಡಿಕೊಂಡ ಕಾಂಪ್ರಮೈಸ್ ..." ಎಂದು ಹೇಳಿ ನಿಲ್ಲಿಸಿದ ಆ ಮಧುರ ಧ್ವನಿ ತನ್ನಷ್ಟಕ್ಕೆ ತಾನೇ "ಸವಿ ನೆನಪುಗಳು ಬೇಕು ಸವಿಯಲಿ ಬದುಕು.!" ಎಂದು ಹಾಡ ಹತ್ತಿದಳು!

ಆ ಹುಡುಗ ಹೇಳಿದ  
"ನೀ ನನ್ನ ಬಿಟ್ಟು ಹೋಗಿದ್ದು ಸಣ್ಣ ಬೇಸರ ನನ್ನ ಮಟ್ಟಿಗೆ ...ನೀ ನೀನಾಗಿ ನನ್ನೊಟ್ಟಿಗಿಲ್ಲ ಅಷ್ಟೆ .."

ಆ ಮಧುರ ಧ್ವನಿ ಮಧ್ಯೆ ಬಾಯಿ ಹಾಕಿ ಹೇಳಿದಳು 

"ನೆನಪಾಗಿ ,ಕನಸಾಗಿ,ಪ್ರೀತಿಯಾಗಿ,ಆತ್ಮ ಸಂಗಾತಿಯಾಗಿ ನಾ ಯಾವತ್ತೋ ಜೋಪಾನ ಮಾಡಿದ್ದೇ ನಿನ್ನ! ಈಗಲೂ ಬೆಚ್ಚಗೆ ಇದ್ದೀಯ ನೀ ನನ್ನೊಳಗೆ....
ಆದರೆ ನನ್ನ ಯಶಸ್ಸಿಗೆ ಸಂಪೂರ್ಣವಾಗಿ ಖುಷಿಸೋ ಒಂದು ಜೀವದ ಕೊರತೆ ಮತ್ತೆ ಕಾಡುತ್ತಿದೆ ನನ್ನ, 
ಎದೆಯ ನಿಟ್ಟುಸಿರಾಗಿ, ಬೇಸರದ ಮುಸ್ಸಂಜೆಯಾಗಿ,ಮನದ ಕಣ್ಣೀರಾಗಿ, ಅದೇ ಮರಳು ದಂಡೆಯ ಬಂಡೆಯಾಗಿ, ಕೈ ತಾಕೋ ಅಲೆಯಾಗಿ. 
ಆದರೇ ನಾನಿನ್ಯಾವತ್ತೂ ಬೇರೊಬ್ಬ ಅಂಬಿಗನ ಹುಡುಕಾಟ ಮಾಡಲಾರೆ.
ಯಾಕಂದ್ರೆ ನಾ ನೀನಲ್ಲ ! 
ನನ್ನ ಪ್ರೀತಿ ಸತ್ತಿಲ್ಲ, ಒಲವು ಕವಲೊಡೆಯಲ್ಲ ..
ಬೆಚ್ಚಗಿದ್ದೀಯ ಕಣೋ ನೀನಿಲ್ಲಿ ..ನೆನಪಲ್ಲಿ ..ಮನಸಲ್ಲಿ, 
ಇಷ್ಟು ಸಾಕು ನಂಗೆ ..
ನಿನ್ನ ನೆನಪುಗಳೊಟ್ಟಿಗೆ ಬದುಕ ಸವೆದೇನು ಹೊರತು, ಹುಡುಕಿ ಬಂದ ಬೇರೊಂದು ಪ್ರೀತಿಯನ್ನ ಅನುಮೋದಿಸಲಾರೆ ನಾ ...ಅನುಸರಿಸಲಾರೆ."

ಟೂರಿಂಗ್ ಟಾಕೀಸ್ ಪೋಸ್ಟರ್ ಹಿಡಿದು ಜಟಕಾ ಬಂಡಿಯಲ್ಲಿ "ನೋಡಿ ನೋಡಿ ಇಂದೇ ನೋಡಿ ಜಂಗ್ಲಿ ಕನ್ನಡ ಚಿತ್ರ.. " ಎಂದು ಹೇಳಿ ಅದರ ಒಂದು ಗೀತೆ ಹಾಕಿದ 

"ನೀನೆಂದರೆ ನನ್ನೊಳಗೆ..  ಏನೋ ಒಂದು ಸಂಚಲನ"

ಹುಡುಗನಿಗೆ ಮನಸ್ಸು ಭಾರವಾಯಿತು ಮಧುರ ಧ್ವನಿಗೆ ಹೇಳಿದ "ನಾನಿವತ್ತೂ ತಪ್ಪಿಲ್ಲದ ನನ್ನ ತಪ್ಪಿಗೆ ಮಂಡಿಯೂರಿ ಕ್ಷಮೆ ಕೇಳುತ್ತಿದ್ದೇನೆ ನಿನ್ನಲ್ಲಿ"


ಆ ಮಧುರ ಧ್ವನಿಗೆ ದುಃಖ ತಡೆಯದಾಯಿತು 

"ನೀ ನನ್ನವನಾಗದಿದ್ದರೂ... ನನ್ನ ಪ್ರೀತಿಯೊಂದಿಗಿನ ಮಧುರ ಭಾವಕ್ಕೆ ಜೊತೆಯಾಗಿದ್ದೆ ಅನ್ನೋ ಕಾರಣಕ್ಕಾದರೂ ಒಮ್ಮೆ ಕ್ಷಮಿಸುಬಿಡು.. ನಿನ್ನ ಪ್ರೀತಿ ಮಾಡಿದ್ದ ,ಮಾಡುತ್ತಿರೋ ನಿನ್ನದೇ ಹುಡುಗಿಯನ್ನ... "  ಕಳಕೊಂಡ ಪ್ರೀತಿಯಲ್ಲಿ ಅವನದೇ ತಪ್ಪು ಅನ್ನೋಕೆ ಒದ್ದಾಡುತ್ತಿರೋ ಭಾವವನ್ನು ಅದುಮಿ ಕಣ್ಣೀರಿಟ್ಟಳು. 

ಅಲ್ಲಿವರೆಗೂ ಸುಮ್ಮನಿದ್ದ ಜೊಂಪೆ ಕೂದಲಿನ ಹುಡುಗಿ  ಆ ಮಧುರಧ್ವನಿಗೆ "ತಪ್ಪಿಲ್ಲದ ತನ್ನನ್ನೂ ತಪ್ಪಾಗಿಸಿಕೊಂಡು ಕ್ಷಮೆ ಕೇಳುತ್ತಿರೋ ಹುಡುಗಿಯ ಮಾತಾಗಿ ಹೇಳುತಿದ್ದೇನೆ, ಪ್ರೀತಿಸೋ ಜೀವವೊಂದನ್ನ ಕಳಕೊಳ್ಳದಿರು...  ಇಂತದ್ದೇ ಪ್ರೀತಿ, ಗೆಳೆಯ ...ಗೆಳೆತನ ಎಲ್ಲರಿಗೂ ದಕ್ಕಲ್ಲ ...ನಿನಗೆ ದಕ್ಕಿದ್ದ ಪ್ರೀತಿಯನ್ನ ನೀ ದೂರ ಮಾಡಿದೆ ...ಮನವೊಂದಕ್ಕೆ ಮೋಸ ಮಾಡಿದ ಪಾಪಪ್ರಜ್ನೆಯಲ್ಲಿ ಅದ್ ಹೇಗೆ ಬದುಕುವೆಯೋ ನೀ" ಎಂದಳು.  


ಆ ಹುಡುಗನನ್ನು ಉದ್ದೇಶಿಸಿ ಹೇಳುತ್ತಾ "ನಿನ್ನಲ್ಲಿದ್ದ ಅವಳ ಮನವನ್ನವಳು ಪೂರ್ತಿಯಾಗಿ ಹಿಂಪಡೆಯೋ ಮುನ್ನ ಅವಳ ಗೆಳೆಯನಾಗು ನೀ ...ಸ್ನೇಹದ ಕಡಲಿನ ಗೆಳೆತನದ ಹಾಯಿ ದೋಣಿಯ ರಾಣಿ ಕ್ಷಮಿಸಿ ಅಪ್ಪಿಯಾಳು ..."


ಆ ಹುಡುಗ ಸಿಳ್ಳೆ ಹಾಕುತ್ತ ಆ ಮಧುರ ಧ್ವನಿಗೆ ಹೇಳಿದ "ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಮ್ಮ"


ಆ ಹುಡುಗಿ ಹುಡುಗನಿಗೆ ಒಂದು ಗುದ್ದು ಕೊಟ್ಟು "ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ನಕ್ಕು ನೀ ಸೆಳೆದಾಗ ಸೋತೆ ನಾನಾಗ" ಎಂದು ಹಾಡಿದಳು. 


ಮಧುರಧ್ವನಿ ತನ್ನ ಕಣ್ಣೀರನ್ನು ಒರೆಸಿಕೊಂಡು ನಸು ನಗುತ್ತಾ "ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸಜೋಡಿಗೆ ಶುಭವಾಗಲಿ" ಎಂದಳು!

23 comments:

  1. ಒಬ್ಬರ ಭಾವಗಳಿಗೆ ಪೂರಕವಾಗಿ ಅದೇ ಸಾಲುಗಳನ್ನ ಒಂದು ಚೂರು ವೆತ್ಯಾಸವಾಗದೆ ಬಳಸಿಕೊಂಡು ಒಂದು ಸುಂದರ ಪ್ರೇಮ ಕಥೆಯನ್ನ ಹೆಣೆಯೋದು ಅಂದ್ರೆ ಕಡಿಮೆ ಕ್ರಿಯೇಟಿವಿಟಿ ಅಲ್ಲ ಶ್ರೀ ಸಾರ್.. ಸೂಪರ್.. :) ಭಾಗ್ಯ ಅವರ ಸಾಲು.. ಅದಕೆ ನಿಮ್ಮ ಕಲ್ಪನೆ ಎರಡೂ ಒಂದೊಳ್ಳೆ ಬರಹ ಆಯ್ತು ನೋಡಿ.. ನಿಜವಾಗಲು ಖುಷಿ ಆಯ್ತು. ಬಳಸಿ ಕೊಂಡ ಆ ಹಾಡುಗಳ ಸಾಲುಗಳೋ.. ಆಹಾ ಬರಹದ ಅಂದವನ್ನ ಮತ್ತೂ ಹೆಚ್ಚಿಸಿದವು.. ಇಷ್ಟ ಆಯ್ತು.

    ReplyDelete
    Replies
    1. ಕಟ್ಟಿದ ಮನೆಯನ್ನು ಅಲಂಕರಿಸಲು ಕೊಟ್ಟ ಪುಟ್ಟಿಗೆ ಇದರ ಯಶಸ್ಸು ಸಲ್ಲಬೇಕು. ಸುಂದರವಾಗಿ ಬರೆದದ್ದಕ್ಕೆ ಒಂದಷ್ಟು ಪದಗಳ ಸಿಂಗಾರ ಮಾಡಿದೆ ಅಷ್ಟೇ. ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು ಸತೀಶ್

      Delete
  2. ಶ್ರೀಕಾ೦ತ್....
    ಹೊಸ ಪ್ರಯೋಗ ಚೆನ್ನಾಗಿದೆ!!! ವ್ಯಥೆ ತು೦ಬಿದ ಲೇಖನಕ್ಕೊ೦ದು ಟ್ವಿಸ್ಟ್ ಕೊಟ್ಟು, ನಿಮ್ಮದೇ ಶೈಲಿಯಲ್ಲಿ ಕಥೆ ಎಣೆದ ರೀತಿ ಸೊಗಸಾಗಿದೆ.
    ಬೈ ದ ವೇ, ನಿಮ್ಮ ಜೊತೆ ನಾವು ಕನ್ನಡ ಅ೦ತ್ಯಾಕ್ಷರಿ ಹಾಡಬೇಕು.... ಎಲ್ಲಾ ಚಿತ್ರದ ಹಾಡುಗಳು ಥಟ್ ಅ೦ತ ಹೇಳಿ ಬಿಡ್ತೀರ.........!!!

    ReplyDelete
    Replies
    1. ಧನ್ಯವಾದಗಳು ರೂಪ. ಏನೋ ಯೋಚನೆಗೆ ಬಂತು ಹಾಗೆ ಧರೆಗಿಳಿಸಿದೆ. ಅಂತ್ಯಾಕ್ಷರಿ ಹಾಡುವಾಗ ಬರಿ ಕಂಪ್ಯೂಟರ್ ನ ಕೀ ಬೋರ್ಡ್ ಇದ್ದರೇ ನಾ ರೆಡಿ.

      Delete
  3. What an improvisation sir ji !! :-)
    ಒಂದೇ ಕತೆಯನ್ನು ಇಟ್ಟುಕೊಂಡು ಒಂದು ಪದವನ್ನೂ ಬದಲಾಯಿಸದೇ ಮತ್ತೊಂದು ರೂಪ ಕೊಡೋ ಪ್ರಯತ್ನವೇ ಒಂದು ಹೊಸ ಕಲ್ಪನೆ.. superb

    ReplyDelete
    Replies
    1. ನಿಮ್ಮ ಹೆಸರಲ್ಲೇ ನಮಗೆ ನೀವು ಕೊಡಬೇಕಾದ್ದು ಸಿಕ್ಕಿ ಬಿಟ್ಟಿದೆ. ಧನ್ಯವಾದಗಳು ನಿಮ್ಮ ಅನಿಸಿಕೆಗೆ. ಇದರ ಯಶಸ್ಸು ಬಿ ಪಿ ಗೆ ಸಲ್ಲಬೇಕು

      Delete
  4. ಗೆಳೆಯತಿ ಭಾಗ್ಯ ಭಟ್ ಮತ್ತು ಅಲೆಮಾರಿ ಶ್ರೀಮಾನ್ ಅವರ ಬ್ಲಾಗ್ ಬರಹಗಳು ಒಂದೇ ನಾಣ್ಯದ ಎರಡು ಮುಖಗಳಾಗಿರುವ ಕಾರಣದಿಂದ ಇಬ್ಬರಿಗೂ ಸೇರಿ ಒಂದೇ ಕಾಮೆಂಟ್ ಬರೆಯುವ ಸ್ವಾತಂತ್ರ್ಯ ತೆಗೆದುಕೊಳ್ಳುತ್ತಿದ್ದೇನೆ.

    ಮೊದಲು ಭಾಗ್ಯಾ ಭಟ್ ಅವರ ಮೂಲ ಬ್ಲಾಗ್ ಬರಹವನ್ನು ಓದುತ್ತಾ ಹೋದ ಹಾಗೆಲ್ಲಾ ನನಗೆ ಇದು ನನ್ನ ಹದಿ ಹರಯದಲ್ಲೂ ತೀವ್ರವಾಗಿ ಕಾಡಿದ ಪರಿತಾಪ ಅನಿಸ ಹತ್ತಿತ್ತು. ಇಲ್ಲಿ ಲೇಖಕಿ ದೃಷ್ಟಿಯಲ್ಲಿ 'ಅವನು' ಹೇಗೋ ಹಾಗೆಯೇ ನನ್ನ ದೃಷ್ಟಿಯಲ್ಲಿ 'ಅವಳು'. ಅವಳಾಗಲಿ ಅಥವಾ ಅವನಾಗಲೀ ಒಲುಮೆ - ಬಿಟ್ಟು ಹೋಗುವಿಕೆ - ಬದುಕಿನ ಪೂರಾ ಕಾಡುವ ವಿರಹದ ಛಾಯೆ ಬದಲಾಗೋಲ್ಲ. ಬಿಟ್ಟು ಹೋದ ವ್ಯಕ್ತಿಗೆ ಮರೆವು ವರವಾದರೆ ನಮಗೆ ಅವರ ನೆನಪೇ ಶಾಪ. ಭಾವ ವ್ಯಕ್ತಪಡಿಸುವ ಈ ಬರಹದ ತೀವ್ರತೆ ಖಂಡಿತ ನಮಗೆ ತಟ್ಟುತ್ತದೆ.

    ಬಹುಶಃ ಅದೇ ಕಾರಣಕ್ಕಿರಬೇಕು ಶ್ರೀ. ಶ್ರೀಕಾಂತ್ ಅವರು ಬರೆಯುತ್ತಾ, 'ನನಗಿಂತ ನಿನ್ನ ಮೇಲೇ ಜಾಸ್ತಿ ವ್ಯಾಮೋಹ ನೋಡು!' ಎನ್ನುತ್ತಾರೆ. ಪರಸ್ಪರ ಪ್ರೇಮಿಗಳು ಒಬ್ಬರ ಮನಸ್ಸಿನಲ್ಲಿ ಒಬ್ಬರು ನೆಲೆ ನಿಂತು ಬಿಟ್ಟಿರುತ್ತಾರೆ ಹಾಗಾಗಿ ಅವನುಎಂದರೆ ಅವಳು. ಅವಳು ಎಂದರೆ ಅವನೇ! ಅದಕ್ಕಾಗಿಯೇ ಶ್ರೀಮಾನ್ ಬೇರೆ ಕಡೆ ವಾಲಿ ಬಿಟ್ಟವರನ್ನು ತಿದ್ದುವ ಉದ್ದೇಶದಿಂದ
    "ನಿನ್ನಲ್ಲಿದ್ದ ಅವಳ ಮನವನ್ನವಳು ಪೂರ್ತಿಯಾಗಿ ಹಿಂಪಡೆಯೋ ಮುನ್ನ ಅವಳ ಗೆಳೆಯನಾಗು ನೀ ...ಸ್ನೇಹದ ಕಡಲಿನ ಗೆಳೆತನದ ಹಾಯಿ ದೋಣಿಯ ರಾಣಿ ಕ್ಷಮಿಸಿ ಅಪ್ಪಿಯಾಳು ..." ಎಂಬ ಅತ್ಯುತ್ತಮ ಪರಿಹಾರ ಸೂಚಿಸುತ್ತಾರೆ, ಓದುಗ ವನಾಗಿದ್ದಾರೆ ಈ ತಿದ್ದುವಿಕೆಯನ್ನು ಅವನು ಎಂದೂ ಓದಿಕೊಳ್ಳಬಹುದು.

    ಒಟ್ಟಾರೆ, ಭಾಗ್ಯ ಅವರ ಕಾವ್ಯಾತ್ಮಾಕ ಬರವಣಿಗೆ ಮತ್ತು ಶ್ರೀಮಾನ್ ಅವರು ಗೀತೆಗಳನ್ನು ಬಳಸಿ ಬರಹವನ್ನು ಒಗ್ಗಿಸಿ - ರುಚಿಸುವಂತೆ ಮಾಡುವ ಅಪೂರ್ವ ಕಲೆ ಎರಡೂ ಮನಸ್ಸಿನಾಳಕ್ಕೆ ಇಳಿಯುತ್ತವೆ.

    ಶ್ರೀಮಾನ್ ಅವರ ಶೈಲಿಯಲ್ಲೇ ನಮ್ಮದೂ ಉಪ ಸಂಹಾರ...
    "ಎಲ್ಲೇ ಇರು ಹೇಗೆ ಇರು..."





    ReplyDelete
    Replies
    1. ಒಂದೇ ಕಥೆ 2D ಯಲ್ಲಿ ನೋಡಿದ ಅನುಭವ...!!!

      ಭಾಗ್ಯಾಳ ಲೇಖನದಲ್ಲಿ ಭಾವಗಳ ಅಲೆಗಲ್ಲಿ ತೇಲುವ ನಾವೆ ನಾವಾದರೆ.. ನಿಮ್ಮ ಕಥೆಯಲ್ಲಿ ಅದೇ ನಾವೆಯ ನಡೆಸುವ ತಂಗಾಳಿಯಾಗಿ ಹಾಡುಗಳು ಮಿಳಿತವಾಗಿವೆ..

      ದುಖಾಃ೦ತದ ಭಾವಗಳನ್ನು ಸುಮಧುರ ಗೀತೆಗಳೊಂದಿಗೆ ಸವಿ ಪ್ರೆಮರಾಗವಾಗಿಸಿದ್ದು ನಿಮ್ಮೊಳಗಿನ ಕಥೆಗಾರ...

      Delete
    2. ಬದರಿ ಸರ್ ಸಾಷ್ಟ್ರಾಂಗ ಪ್ರಣಾಮಗಳು. ಭಾಗ್ಯ ಪುಟ್ಟಿ ಕೊಟ್ಟ ಪದಗಳ ಮೆರವಣಿಗೆಯ ಹಾದಿಯಲ್ಲಿ ಅಕ್ಕ ಪಕ್ಕದ ಗಿಡಗಳಿಗೆ ನೀರು ಹಾಕಿದೆ ಅಷ್ಟೇ. ಸೂಪರ್ ಪ್ರತಿಕ್ರಿಯೆ ಹಾಗೆಯೇ ಪ್ರತಿಯೊಬ್ಬರ ಬರಹವನ್ನು ನೀವು ಓದಿ ಪೋಷಿಸುವ ಪರಿ ಸೂಪರ್! ಈ ಲೇಖನದ ಪೂರ್ಣ ಕೀರ್ತಿ ಭಾಗ್ಯ ಪುಟ್ಟಿಯದು

      Delete
    3. ಅನೇಕ ಹೂವುಗಳಿಂದ ಹೀರಿ ಬೆಳೆದ ಜೇನು ಕಟ್ಟುವ ಲೋಕವೇ ಜೇನುಗೂಡು. ನಿನ್ನಂತಹ ಸುಮಧುರ ಓದುಗರ , ಬರಹಗಾರರ ಸಂಗದಲ್ಲಿ ಅರಳಿದ ಲೇಖನ ಇದು. ಓದುಗರಿಗೆ ಇಷ್ಟವಾಗಿದ್ದರೆ ಅದರ ಬಹುಪಾಲು ಯಶಸ್ಸು ನಮ್ಮ ಭಾಗ್ಯ ಪುಟ್ಟಿಯದು. ಸುಂದರ ಪ್ರತಿಕ್ರಿಯೆ ನಿನ್ನದು. ಧನ್ಯವಾದಗಳು

      Delete
  5. ತುಂಬಾ ಚೆನ್ನಾಗಿದೆ ಪ್ರೀತಿ-ಪ್ರೇಮ ಒಬ್ಬೊಬ್ಬರದೂ ಒಂದೊಂದು ಭಾವನೆ ಮತ್ತು ನಿವೇದನೆ... ಭಾಗ್ಯರವರ ಕಥೆಯೂ ಚೆನ್ನಾಗಿದೆ ಅದಕ್ಕೆ ಮತ್ತೊಂದು ರೂಪ ಕೊಟ್ಟಿದ್ದೀರಿ ಶ್ರೀಕಾಂತ್ ...

    ReplyDelete
    Replies
    1. ಧನ್ಯವಾದಗಳು ಅಕ್ಕಯ್ಯ. ಇಷ್ಟವಾಯಿತು ನಿಮ್ಮ ಪ್ರತಿಕ್ರಿಯೆ. ಸುಂದರ ಚಿತ್ರಕ್ಕೆ ಚೌಕಟ್ಟು ಹಾಕಿದ ಕೆಲಸ ಮಾತ್ರ ನನ್ನದು. ಸುಂದರ ಚಿತ್ರ ಬಿಡಿಸಿದ ಕೀರ್ತಿ ಭಾಗ್ಯ ಪುಟ್ಟಿಯದು

      Delete
  6. ಶ್ರೀಕಾಂತ್ ಜೀ ಮೆಚ್ಚಬೇಕು ನಿಮ್ಮ ಕಸರತ್ತಿಗೆ......

    ಅದೇ ಪದಗಳು.... ಎಲ್ಲ ಅದೇ... ಆದರೆ ಭಾವಗಳು
    ಶುದ್ಧ ಅಪರಾ ತಪರಾ.....
    ಪ್ರೀತಿಯ ಕಳೆದುಕೊಂಡ ಶುದ್ಧ ಬೇಸರದ ಭಾವ ಅಲ್ಲಾದರೆ...
    ಪ್ರೀತಿಯಲ್ಲೇ ಒಂದಾದ ಬಾವ ಇಲ್ಲಿ...
    ಆ ಮೀನು ಮಾರುವವ..ಆಯ್ಸ್ ಕ್ಯಾಂಡಿ ಗಾಡಿಯವ...
    ಜಟಕಾ ಬಂಡಿಯವ.... ಚುರುಮುರಿ ಗಾಡಿಯವ...ಎಲ್ಲರೂ ಸಮಯಕ್ಕೆ ಸರಿಯಾಗಿ ಬಂದು
    ಚಂದಗಾಣಿಸಿಕೊಟ್ಟರು..
    ತುಂಬಾ ಸೊಗಸಾಯಿತು ಓದುವಾಗ.....
    ಚನ್ನಾಗಿದೆ.....

    ReplyDelete
    Replies
    1. ಜಗತ್ತೇ ಒಂದು ತಳಕ ಮಳಕ ಪ್ರಪಂಚ. ನೋಡುವ ನೋಟದ ಮೇಲೆ ಅವಲಂಬಿತ ಈ ಜಗತ್ತು
      ಸುಂದರ ಪ್ರತಿಕ್ರಿಯೆ ಧನ್ಯವಾದಗಳು. ಕನಸು ಕಂಗಳ ಹುಡುಗನಲ್ಲಿಮೂಡಿ ಬಂದ ಸುಂದರ ಮಾತಿಗೆ ನನ್ನ ಧನ್ಯವಾದಗಳು

      Delete
  7. ಮೊದಲಾಗಿ ಮತ್ತೊಬ್ಬರ ಬರಹವನ್ನು ಮೆಚ್ಚಿ ಮತ್ತಷ್ಟು ಸ್ಪೂರ್ತಿಯನ್ನು ತಂದುಕೊಟ್ಟ ನಿಮಗೆ ಧನ್ಯವಾದಗಳು ... ಪ್ರೀತಿಯ ಒಂದಷ್ಟು ಮದುರ ಭಾವಗಳು ಬಿಡಿ ಬಿಡಿಯಾಗಿ ಹರಡಿಕೊಂಡು ಓದುಗನ ಮನಸ್ಸಿಗೆ ಕಚಗುಳಿಯಿಡುತ್ತದೆ ... ಮತ್ತೆ ಮತ್ತೆ ಓದಬೇಕೆನಿಸುವ ಭಾವ ಲಹರಿ ...

    ReplyDelete
    Replies
    1. ಹುಸ್ಸೇನ್ ಸುಂದರ ನಿಮ್ಮದು ಮಾತುಗಳು ನಿಮ್ಮದು. ಅಕ್ಷರಕ್ಕೆ ಅಂಕೆ ಭಾವಕ್ಕೆ ಭಾವಕ್ಕೆ ಮಿತಿ ಎಲ್ಲೆ ಇಲ್ಲ .... ಒಬ್ಬರ ಬರಹ ಮತ್ತೊಬ್ಬರಿಗೆ ಸ್ಫೂರ್ತಿ ಅಲ್ಲವೇ. ನಿಮ್ಮ ಮಾತುಗಳು ಇಷ್ಟವಾದವು. ಧನ್ಯವಾದಗಳು

      Delete
  8. ಅಣ್ಣಯ್ಯ... ಸೂಪರ್..
    ನಮ್ಮ ಮುದ್ದಕ್ಕ ನ ಬರಹಕ್ಕೆ ಈ ಪರಿಯ ಸ್ಪೂರ್ತಿಯಾಗಿ ಬರೆದಿದ್ದು ಒಂದು ರೀತಿಯ ರೋಮಾಂಚನ ಉಂಟು ಮಾಡಿದೆ.. u r rocking annayya.... :)

    ReplyDelete
    Replies
    1. ಪಿ ಎಸ್ ರವಿಯ ಕಿರಣಗಳಿಂದ ಅರಳಿದರೆ.. ಸೂರ್ಯ ಕಾಂತಿ ಅವ ಹೋದೆಡೆ ಮುಖ ತಿರುಗಿಸಿಕೊಳ್ಳುತ್ತದೆ ..ಇದು ಇದು ಅಲ್ಲವೇ ಒಬ್ಬರ ಸ್ಪೂರ್ತಿಗೆ ಇನ್ನೊಬ್ಬರು ಹೆಗಲು ಕೊಡುವುದು. ನಿನಗೆ ಇಷ್ಟವಾಯಿತು ನನಗೆ ಸಂತಸವಾಯಿತು. ಧನ್ಯವಾದಗಳು!

      Delete
  9. ಶ್ರೀಕಾಂತಣ್ಣ ,
    ಮೊದಲಿಗೆ ನಿಮಗೊಂದು ಪ್ರೀತಿಯ ನಮನ .

    ಪ್ರೀತಿ ಇಲ್ಲದ ಮೇಲೂ .....ಪ್ರೀತಿಯೇ ನನ್ನುಸಿರು ...!!

    Ultimate disappointing ಕಥೆಯೊಂದನ್ನ ಹ್ಯಾಪಿ ಎಂಡಿಂಗ್ ಗೆ ತಂದಿಡ್ತೀರ ಅನ್ನೋ ಸಣ್ಣ ಕಲ್ಪನೆಯೂ ನಂದಿರಲಿಲ್ಲ ...
    ಈ ಭಾವವ ಓದಿ ನಿಜಕ್ಕೂ ಆಶ್ಚರ್ಯವಾಗಿತ್ತು ನಂಗೆ ..
    ಪದಗಳ ಜೊತೆ ನೀವಿತ್ತ ಹಾಡುಗಳ ಪೋಷಾಕು ಹೇಳಿ ಮಾಡಿಸಿದಂತಿದೆ ...

    ಬಹುಷಃ ಶ್ರೀಕಾಂತಣ್ಣ ಮಾತ್ರ ಕಥೆಗೆ ಈ ತರಹದ ಟ್ವಿಸ್ಟ್ ಕೊಡೋಕೆ ಸಾಧ್ಯವೇನೋ ...

    ಖುಷಿ ಕೊಡ್ತು .

    ReplyDelete
    Replies
    1. ಬಿ ಪಿ ಅರಿವಿಲ್ಲದೆ ಮುಟ್ಟುವ ಆನೆಯನ್ನು ನಾಲ್ವರು ನಾನಾ ರೀತಿಯಲ್ಲಿ ಅರ್ಥೈಸುವಂತೆ ಪ್ರತಿ ಬರಹವು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಪ್ರೇರಣೆ ನೀಡುತ್ತದೆ. ನಿನ್ನ ಬರಹದ ಶೈಲಿ ಸೊಗಸಾಗಿತ್ತು.. ಮೊದಲೇ ಬೆಳ್ಳಗಿದ್ದ ಚಂದ್ರನಿಗೆ ಮತ್ತೆ ಸುಣ್ಣ ಹೊಡೆಯುವ ವ್ಯರ್ಥ ಸಣ್ಣ ಪ್ರಯತ್ನ ನನ್ನದು. ಸುಂದರ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಹಾಗೂ ಉತ್ತಮ ಲೇಖನ ಬರೆದು ಅದಕ್ಕೆ ಇನ್ನೊಂದು ಆಯಾಮ ಕೊಡುವ ಹಾಗೆ ಮಾಡಿದ ನಿನಗೆ ಅಭಿನಂದನೆಗಳು.

      Delete
  10. ಯಾರದ್ದೋ ಕಲ್ಪನೆಯನ್ನು ಅವರು ನಿರ್ಮಿಸಿದ ಕಟ್ಟುಗಳನ್ನು ಮುರಿಯದೆ ಅದಕ್ಕೆ ಬೇರೆ ದಿಕ್ಕು ಕೊಡುವುದು ತುಂಬ ಕಷ್ಟ. ಅಂತಹ ಒಂದು ಪ್ರಯತ್ನದಲ್ಲಿ ನೀವು ಗೆದ್ದಿದ್ದೀರಿ. ಬಹಳ ಚೆನ್ನಾಗಿ ಮೂಡಿಬಂದಿದೆ ಈ ಹೊಸ ದಿಕ್ಕುಗಳು. ಒಂದು ಒಳ್ಳೆ ಕಥೆಯನ್ನು ಸಿನಿಮಾ ಮಾಡೋಕೆ ಬಹಳ ಒಳ್ಳೆ ನಿರ್ದೇಶಕ ಬೇಕು. ನಿಮ್ಮ ನಿರ್ದೇಷನ ಸೊಗಸಾಗಿದೆ.

    ReplyDelete
    Replies
    1. ನಿವಿ ಸೂಪರ್ ಪ್ರತಿಕ್ರಿಯೆಗೆ ಸೂಪರ್ ಧನ್ಯವಾದಗಳು. ನೀವು ಓದಿ ಮೆಚ್ಚ್ಚಿ ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ಧನ್ಯವಾದಗಳು

      Delete
  11. ಶ್ರೀಕಾಂತು..
    ನಿಮ್ಮ ಪ್ರತಿಭೆಗೆ ನನ್ನ ಶರಣು..

    ಭಾಗ್ಯ ಬರೆದ ಭಾವವೂ ಚೆನ್ನಾಗಿದೆ..
    ನಿಮ್ಮ ಟ್ವಿಸ್ಟ್ ಕೂಡ ಸೂಪರ್...!

    ಅದೇ ಶಬ್ಧ ಭಾವಗಳನ್ನು ಇಟ್ಟುಕೊಂಡು...
    ನಿಮ್ಮ ಶಬ್ಧ ಮೋಡಿಯಲ್ಲಿ ಟ್ವಿಸ್ಟ್ ಕೊಟ್ಟಿದ್ದೀರಿಲ್ಲಾ... ಇದು ಪ್ರತಿಭೆ... !

    ಬ್ಲಾಗ್ ಲೋಕದಲ್ಲಿ ಇದು ಹೊಸ ಪ್ರಾಯೋಗ...

    ಇಂಥಹ ಪ್ರಯೋಗ ಮತ್ತೂ ಮಾಡೋಣ...

    ನಿಮಗೂ..
    ಭಾಗ್ಯ ಪುಟ್ಟಿಗೂ ಶುಭಾಶಯಗಳು..

    ಗಣೇಶ ಹಬ್ಬದ ಶುಭಾಶಯಗಳು.. ಶ್ರೀಕಾಂತು...

    ReplyDelete