Wednesday, August 29, 2012

ಲೋಕಿಯ ಜನುಮದಿನಕ್ಕೆ ಅರ್ಪಿತ - ಈ ಪ್ರವಾಸ ಕಥನ (1996)


ಈ ಪ್ರವಾಸ ಕಥನ..ನಮ್ಮ ಗೆಳೆಯ ಲೋಕಿಯ ಜನುಮದಿನಕ್ಕೆ ಅರ್ಪಿತ...ಅವನು ಈ ಪ್ರವಾಸಕ್ಕೆ ಬರಲಿಲ್ಲ..ಅ ನೆನಪನ್ನು ಅವನಿಗೆ ಕೊಡುವ ಒಂದು ಪ್ರಯತ್ನ....ಹಾಗು ಅವನ ಹುಟ್ಟು ಹಬ್ಬಕ್ಕೆ ಶುಭಾಶಯಗಳು ಕೋರುವ ಒಂದು ವಿಭಿನ್ನ ಪ್ರಯತ್ನ...

ಶಶಿ ಮನೆ ಕೋರಮಂಗಲದಲ್ಲಿ...ಅವನ ಮನೆಯ ಸುತ್ತಲು ಅನೇಕ ಸಮಾನ ಮನಸ್ಕ, ವಯಸ್ಕ ಹುಡುಗರಿದ್ದರು. ಒಮ್ಮೆ ಹೀಗೆ ೧೯೯೬ ಅಕ್ಟೋಬರ್ ಕೊನೆಯಲ್ಲಿ ಒಂದು ಪ್ರವಾಸ ಹೋಗುವ ನಿರ್ಧಾರ ಮಾಡಿದರು..ಅವರೆಲ್ಲ ತನ್ನ ಸ್ನೇಹಿತರನ್ನು ಕರೆತರಲು ಶಶಿಗೆ ದಂಬಾಲು ಬಿದ್ದಿದ್ದರು.  ಸರಿ ವೆಂಕಿ, ಜೆ. ಎಂ ಹಾಗು ನಾನು ಜೊತೆಗೆ ಸೇರಿದೆವು.

ನರೇಂದ್ರ, ಗಿರೀಶ, ಆನಂದ್, ಮಹೇಶ್, ರಾಕೇಶ್...ಹೀಗೆ ಸುಮಾರು ಹನ್ನೆರಡು ಹದಿಮೂರು ಹುಡುಗರ ಒಂದು ತಂಡ ಸಿದ್ಧವಾಯಿತು..ಎಲ್ಲಿಗೆ ಹೋಗೋದು ಗೊತ್ತಿಲ್ಲ, ಏನು ಮಾಡೋದು ಪ್ಲಾನ್ ಇಲ್ಲ..ಮನೆಯಲ್ಲಿ ಎಲ್ಲರು ಶಿವಮೊಗ್ಗ ಸುತ್ತ ಮುತ್ತ ಹೋಗಿ ಬರ್ತೇವೆ ಅಂತ ಹೇಳಿದ್ದೆವು..ಯಾಣ, ಜೋಗ ಅಂತೆಲ್ಲ ಅನಿರ್ಧಿಷ್ಟ, ಅಸ್ಪಷ್ಟ ಮಾತುಗಳಲ್ಲಿ ಹೇಳಿದ್ದೆವು..ಒಂದು ಸಂತಸದ ಸಂಗತಿ ಎಂದರೆ ಒಳ್ಳೆಯ ಹುಡುಗರು, ಯಾವುದೇ ದುರಭ್ಯಾಸಗಳು ಇಲ್ಲ ಎನ್ನುವ ಒಂದು ಸುಂದರ ಜಗತ್ತನು ನಾವೆಲ್ಲಾ ಕಟ್ಟಿ ಕೊಂಡಿದ್ದೆವು..ಹಾಗಾಗಿ ಎಲ್ಲರ ಮನೆಯವರು ನಾವು ಬಾಡಿಗೆಗೆ ತಂದ ಮೆಟಡೋರ್ ಗಾಡಿಗೆ ಪೂಜೆ ಸಲಿಸುವ ಸಮಯಕ್ಕೆ ಎಲ್ಲರು ಬಂದು ಶುಭ ಹಾರೈಸಿದರು.
ಚಿತ್ರ ಕೃಪೆ : ಅಂತರ್ಜಾಲ
ತುಮಕೂರು ರಸ್ತೆಯಲ್ಲಿ ಬರ್ರನೆ ಸಾಗಿತು ವಾಹನ...ಎಲ್ಲರಲ್ಲೂ ಸಂತಸ..ಕೆಲವರು ಓದು ಮುಗಿಸಿ ಕೆಲಸಕ್ಕೆ ಸೇರಿದ್ದರು, ಕೆಲವರು ಇನ್ನು ಓದುತ್ತಲಿದ್ದರು..ಆದ್ರೆ ಯಾರಲ್ಲೂ ಮೇಲು ಕೀಳು ಭಾವ ಇರಲಿಲ್ಲ..ಅದೇ ಅಲ್ಲವೇ ಸ್ನೇಹಕ್ಕೆ ಅಡಿಪಾಯ...!

ಸೀದಾ ಜೋಗ ಜಲಪಾತದ ಬಳಿ ನಿಂತಾಗ ಎಲ್ಲರು ಕಣ್ಣನ್ನು ಉಜ್ಜಿಕೊಂಡು...ಒಹ್ ಜೋಗ..ಎಂದು ಕಿರುಚಿದರು...ಬಟ್ಟೆ ಬರೆ, ತಿಂಡಿ ತಿನಿಸು,ಸಾಬೂನು, ಪೇಸ್ಟ್, ಬ್ರಶ್ ಹಾಗು  ಹಣದ ಪರ್ಸ್ ತೆಗೆದುಕೊಂಡು ಗಾಡಿಯಿಂದ ಸೀದಾ ಜಲಪಾತದ ಬುಡಕ್ಕೆ ಲಗ್ಗೆ ಇಟ್ಟೆವು..ಸುಮಾರು ಒಂದುವರೆ ಕಿ.ಮಿ. ಗಳಷ್ಟು ಆಳಕ್ಕೆ ಇಳಿಯಬೇಕಿತ್ತು.(ಇತ್ತೀಚಿಗಷ್ಟೇ ಕೆಳಗಿನ ತನಕ ಸಿಮೆಂಟಿನ ಮೆಟ್ಟಿಲು ಮಾಡಿದ್ದಾರೆ).ಗಿಡ ಗಂಟಿಗಳನ್ನು ಹಿಡಿದು ಕೆಳಗೆ ಇಳಿದೆವು...
ಚಿತ್ರ ಕೃಪೆ : ಅಂತರ್ಜಾಲ
ಅಚ್ಚುಕಟ್ಟಾಗಿ ಸ್ನಾನ, ತಿಂಡಿ ಎಲ್ಲ ಆಯಿತು...ಜಲಪಾತದ ಅಮೋಘ ದರ್ಶನ, ನೀರಲ್ಲಿ ಒದ್ದಾಡಿದ್ದು, ಹೊಟ್ಟೆ ತುಂಬಾ ತಿಂಡಿ, ಹರಟೆ ಮಾತು, ಕೀಟಲೆ ಎಲ್ಲವು ಬಹು ಸಮಾಧಾನ ತಂದಿತು..ಸರಿ ಎಲ್ಲರು ಮೇಲಕ್ಕೆ ಪ್ರಯಾಸಪಟ್ಟು ಬಂದೆವು..

ಮುಂದೇನು ಎನ್ನುವ ಯೋಚನೆ ಕಾಡಿತು...ಗಿರೀಶ್ ಹೇಳಿದ..ಹೇ ಉಂಚಳ್ಳಿ ಜಲಪಾತ ಇಲ್ಲೇ ಹತ್ತಿರ ಇದೆಯಂತೆ...ಅಲ್ಲಿಗೆ ಹೋಗೋಣ..ಬೇರೆ ಮಾತೆ ಇಲ್ಲ..ಗಾಡಿ ಹೊರಟಿತು..

ಮಧ್ಯಾಹ್ನ ದಾಟಿತ್ತು...ಡ್ರೈವರ್ ಹೆಸರು ಕುಟ್ಟಿ (ನರೇಂದ್ರ ಕರೆಯುತ್ತಿದ್ದ ರೀತಿ)..ಗಾಡಿ ನಿಲ್ಲಿಸಿದರು..ಅಲ್ಲಿದ್ದ ಸ್ಥಳೀಯರು..ಉಂಚಳ್ಳಿ ಜಲಪಾತಕ್ಕೆ ಹೋಗುವ ಮಾರ್ಗ ತೋರಿಸಿದರು..ಮಳೆ ಬರುತಿತ್ತು...ಮಾರ್ಗ ಮಣ್ಣಿನ ಇಳಿಜಾರು ರಸ್ತೆಯಾಗಿತ್ತು..ಗಾಡಿ ಅಲ್ಲೀಗೆ ಹೋಗುವ ಸಾಧ್ಯತೆ ಕಡಿಮೆ ಇದ್ದದರಿಂದ ನಾವೆಲ್ಲಾ ನಡೆದೆ ಹೊರಟೆವು..

ಜಲಪಾತದ ದರ್ಶನ ಸರಿಯಾಗಿ ಆಗಿರಲಿಲ್ಲ..ಕಾರಣ, ಮಳೆ, ಇಬ್ಬನಿ, ಮಂಜು ಎಲ್ಲವು ಸೇರಿತ್ತು..ಅಚಾನಕ್ಕಾಗಿ ಸೂರ್ಯ ತನ್ನ ಹಲ್ಲನ್ನು ತೋರಿಸಿ ಸ್ವಲ್ಪ ಬಿಸಿಲನ್ನು ತೋರಿದ..ಮಬ್ಬು ಮೆಲ್ಲನೆ ಸರಿಯಿತು...
ಚಿತ್ರ ಕೃಪೆ : ಅಂತರ್ಜಾಲ
"ಶಿಟ್ ಮಾನ್ ವಾಟ್ ಅ ಫಾಲ್ಸ್..." ಶಶಿ ಉದ್ಗಾರ ತೆಗೆದ...ಎಲ್ಲರು ಓಡಿ ಬಂದೆವು...ಜಲಪಾತದ ಸೌಂದರ್ಯ ಅಬ್ಬ...ಮಾತಿನಲ್ಲಿ ಹೇಳಲಾರೆನು...ಗೀತೆಯಲ್ಲಿ ಬರೆಯಲಾರೆನು.....ಅದ್ಭುತ ಜಲಪಾತ ನೋಡಿದ ಕಣ್ಣುಗಳು  ಪಾವನವಾಯಿತು...ಸುಮಾರು ಹೊತ್ತು ಅಲ್ಲೇ ಕಳೆದೆವು...ಜಲಪಾತದ ಬುಡಕ್ಕೆ ಹೋಗುವ ಸಾಹಸಕ್ಕೆ ಇಳಿಯೋಣ ಅನ್ನಿಸಿತು..ಆದ್ರೆ ಅಲ್ಲಿದ್ದ ಸ್ಥಳೀಯರು ಎಚ್ಚರಿಕೆ ಕೊಟ್ಟರು..ಮಣ್ಣು ಜಾರುತ್ತಿತ್ತು..ಮಳೆ, ಇಬ್ಬನಿ...ಹಠ ಮಾಡುವುದು ಬೇಡ ಎಂದು ಕಣ್ಣಲ್ಲೇ ತುಂಬಿಕೊಳ್ಳುವ ಪ್ರಯತ್ನ ಪಟ್ಟೆವು...ಅತಿ ಸುಂದರ ಜಲಪಾತ "ಉಂಚಳ್ಳಿ/ಕೆಪ್ಪ ಜೋಗ/ಲಶಿಂಗ್ಟನ್ ಜಲಪಾತ"

ಮುಂದ...ಈ ಪ್ರಶ್ನೆ ಎಲ್ಲರನ್ನು ಕಾಡಿತು...

ಸಿರ್ಸಿಗೆ ಹೋಗೋದು ಎನ್ನುವುದು ಗಾಡಿಯಲ್ಲಿ ನಿರ್ಧಾರ ವಾಯಿತು...ಸಿರ್ಸಿಗೆ ಬಂದಾಗಲೇ ರಾತ್ರಿ ಬಹು ಹೊತ್ತಾಗಿತ್ತು...ವೆಂಕಿಗೆ ಮಾರನೆ ದಿನ ಸರ್ಕಾರಿ ಕೆಲಸಕ್ಕೆ ಇಂಟರ್ವ್ಯೂ ಗೆ ಹೋಗಬೇಕಿತ್ತು..ಅವನು ಸಿರ್ಸಿಯಿಂದ ಹೊರಟೆ ಬಿಟ್ಟ...ಬೆಂಗಳೂರಿಗೆ...

ಮಿಕ್ಕವರೆಲ್ಲರೂ ಅಲ್ಲಿಯೇ ಒಂದು ಹೋಟೆಲ್ನಲ್ಲಿ ರಾತ್ರಿ ಕಳೆದು...ಬೆಳಿಗ್ಗೆ ತಿಂಡಿ ಆದ ಮೇಲೆ ಏನು..? ಪ್ರಶ್ನೆ ಶುರುವಾಯಿತು..

ಮತ್ತೆ ಗಿರೀಶ್ ಆಪದ್ಭಾಂಧವನಾದ..."ಯಾಣ"ಕ್ಕೆ ಹೋಗೋಣ...ಅಲ್ಲಿಯೇ ಹೋಗುವ ಮಾರ್ಗ ಕೇಳಿದಾಗ ರಸ್ತೆ ಹೇಳಿದರು...ಯಾಣಕ್ಕೆ ಮೊದಲು ಮುಖ್ಯ ಹೆದ್ದಾರಿಯಿಂದ ನಡೆಯಬೇಕಿತ್ತು (ಸುಮಾರು ೧೨-೧೬ ಕಿ.ಮಿ)...ಆದ್ರೆ ನಾವು ಹೋಗುವ ಸ್ವಲ್ಪ ವರ್ಷಗಳ ಹಿಂದೆ..ಯಾಣದ ತನಕ ರಸ್ತೆ ಮಾಡಿದ್ದರು..ಕೇವಲ ಒಂದೆರಡು ಕಿ.ಮಿ.ಗಳು ಮಾತ್ರ ನಡೆಯಬೇಕಿತ್ತು..

ಯಾಣದ ಬಗ್ಗೆ ಒಂದು ಮಾತು..ಈ ಮಹಾನ್ ತಾಣವನ್ನು ಮೊದಲು ಚಿತ್ರದಲ್ಲಿ ತೋರಿಸಿದ್ದು ಆಗಂತುಕ ಎನ್ನುವ ಕನ್ನಡ ಸಿನಿಮಾದಲ್ಲಿ..ದೇವರಾಜ್, ವನಿತಾವಾಸು, ಸುರೇಶ ಹೆಬ್ಳಿಕರ್, ವಾಸುದೇವರಾವ್ ನಟಿಸಿದ್ದ ಈ ಚಿತ್ರ ತುಂಬಾ ಸೊಗಸಾಗಿತ್ತು...ದೇವರಾಜ್ ಗಡುಸು ಮುಖ, ವನಿತಾವಾಸು ಸುಂದರ ಮುಖ, ಯಾಣದ ಚೆಲುವು ಚಿತ್ರವನ್ನ ತುಂಬಿತ್ತು..
ನಂತರ ನಮ್ಮೂರ ಮಂದಾರ ಹೂವೆ ಚಿತ್ರದಲ್ಲಿ ತೋರಿಸಿದ ಮೇಲೆ ಎಲ್ಲರಿಗು ಚಿರಪರಿಚಿತ ತಾಣವಾಯಿತು
ಚಿತ್ರ ಕೃಪೆ : ಅಂತರ್ಜಾಲ
ಎಲ್ಲರು ಗಾಡಿಯಿಂದ ಇಳಿದು ಯಾಣದ ದರುಶನ ಮಾಡಿದೆವು...ಅಮೋಘ ಶಿಖರಗಳು...ಜ್ವಾಲಾಮುಖಿಯಿಂದ ಸಿಡಿದ ಲಾವಾರಸ ಹೀಗೆ ಶಿಖರವಾಯಿತು ಅಂತ ಇತಿಹಾಸ...ಮೋಹಿನಿ ಭಸ್ಮಾಸುರ ಕತೆ ಇದು ಎಂದು ಪೌರಾಣಿಕ ಕತೆಗಳು ಸಾರುತಿದ್ದವು..ಏನೇ ಅಗಲಿ ಇದರ ಸೊಗಸು ಬಲು ರೋಮಾಂಚನ ಮಾಡಿದವು...

ಎಲ್ಲಿಗೆ ಹೋಗುವುದು ಎನ್ನುವ ಮಾತು ನಡೆಯುತ್ತಿದ್ದಾಗ ನಾನು ಸಮುದ್ರ ನೋಡೇ ಇರಲಿಲ್ಲ..ಇಲ್ಲಿಂದ ಗೋಕರ್ಣ ಹತ್ತಿರ ಎಂದು ಗಿರೀಶ ಹೇಳಿದ..ಹೇಗಾದರೂ ಸರಿ ಸಮುದ್ರದ ಅಲೆಗಳನ್ನ ಒಮ್ಮೆ ಮುಟ್ಟಿ ನೋಡುವ ಬಯಕೆ ಕಾಡಿತ್ತು..ಗಿರೀಶನಿಗೆ ಹೇಳಿದೆ "ಹೇಗಾದರೂ ಸರಿ ಗೋಕರ್ಣಕ್ಕೆ ಹೋಗೋಣ ಎಂದು" ಎಲ್ಲರು ಸಮ್ಮತಿ ಕೊಟ್ಟರು...

ಸರಿ ಗಾದೆ ಮಾತನ್ನು ನಿಜ ಮಾಡಲು ಹೊರಟೆವು..."ಕೈಯಲ್ಲಿ ರೊಕ್ಕ ಇದ್ದರೆ ಗೋಕರ್ಣ..ಮೈಯಲ್ಲಿ ಸೋಕ್ಕಿದ್ದರೆ ಯಾಣ"

ಇಷ್ಟರಲ್ಲಿ ಒಂದು ಅದ್ಭುತ ಘಟನೆ ನಡೆಯಿತು...ಯಾಣದಿಂದ ಹೊರಟೆವು..ಕಾಡಿನ ದಾರಿ ಮಧ್ಯದಲ್ಲಿ ಒಂದು ವ್ಯಕ್ತಿ ಬಿಳಿ ಅಂಬಾಸೆಡರ್ ಕಾರಿನ ಬಳಿ ನಿಂತಿದ್ದರು..ನಾವೆಲ್ಲ..ಈ ಡಬ್ಬ ರಸ್ತೆಯಲ್ಲಿ ಇಲ್ಲೇಕೆ ಬರುತ್ತಾರೆ ಎಂದು ಅಂದು ಕೊಂಡೆವು..ಹತ್ತಿರ ಹತ್ತಿರ ಬರುತ್ತಲೇ...

ನರೇಂದ್ರ ಕೂಗಿದ "ಶಶಿ ನಿಮ್ಮ ಅಪ್ಪ....?!!!!

ಎಲ್ಲರಿಗೂ ಆಶ್ಚರ್ಯ.....ಗಾಡಿಯಿಂದ ಇಳಿದೆವು...

" ಏನ್ ಡ್ಯಾಡಿ ಇಲ್ಲಿ...?"
"ಗೋದ್ರೆಜ್ ಕಂಪನಿಯಲ್ಲಿ ನಿನಗೆ ಸೋಮವಾರ ಇಂಟರ್ವ್ಯೂ ಇದೆ...ಯಾವಾಗ ಬರ್ತೀರಾ ಬೆಂಗಳೂರಿಗೆ?"
"ಸೋಮವಾರ ಬೆಳಿಗ್ಗೆ ಬರ್ತೀವಿ ಡ್ಯಾಡಿ"
"ಸರೀನಪ್ಪ...ಹುಷಾರಾಗಿ ಹೋಗಿ ಬನ್ನಿ...ಬೇಗ ಬಂದು ಬಿಡಿ ಆಯ್ತಾ..."
"ಅದು ಸರಿ ಡ್ಯಾಡಿ ನಾವು ಇಲ್ಲಿದ್ದೀವಿ ಅಂತ ನಿಮಗೆ ಹೇಗೆ ಗೊತ್ತಾಯ್ತು?"
"ನೀವೆಲ್ಲ ಯಾಣ ಅಂತ ಮಾತಾಡ್ತಾ ಇದ್ದರಲ್ಲಾ ಇಲ್ಲೇ ಇರಬೇಕು ಅಂತ ಬೆಂಗಳೂರಿಂದ ಬಂದೆ..ಹೆದ್ದಾರಿಯಲ್ಲಿ ಕೇಳಿದಾಗ ಹೇಳಿದರು ಒಂದು ಮೆಟಡೋರ್ ನಲ್ಲಿ ಹುಡುಗರೇ ಇದ್ದರು..ಯಾಣದ ರಸ್ತೆ ಕೇಳಿದರು..ಅವಾಗ ಗ್ಯಾರಂಟೀ ಆಯಿತು ಅಂದ್ರು...ಹಾಗಾಗಿ ಇಲ್ಲಿಗೆ ಬಂದೆ..ಇಲ್ಲಿಗೆ ಬಂದಾಗ ಕಾರು ಸ್ವಲ್ಪ ರಿಪೇರಿಗೆ ಬಂತು..ನಮ್ಮ ಡ್ರೈವರ್ ರಿಪೇರಿ ಮಾಡ್ತಾ ಇದ್ದರು...ನಿಮ್ಮ ಗಾಡಿ ನೋಡಿದೆ ಖುಷಿ ಆಯಿತು" (ಶಶಿ ತಪ್ಪಿದ್ದರೆ ಸರಿ ಮಾಡು)

ನಮಗೆಲ್ಲ ಆಶ್ಚರ್ಯ ಅಂದ್ರೆ ಆಶ್ಚರ್ಯ...ಮೊಬೈಲ್ ಇಲ್ಲದಿದ್ದ ಕಾಲದಲ್ಲಿ ಎಂತಹ ಸಂಪರ್ಕ ವ್ಯವಸ್ಥೆ..ಮಕ್ಕಳ ಮೇಲೆ ನಂಬಿಕೆ ದೇವರಿದ್ದಾನೆ ಅನ್ನೋದಕ್ಕೆ ಇದು ಒಳ್ಳೆಯ ಉದಾಹರಣೆ...ನಿಜಕ್ಕೂ ಸೂಪರ್..

"ನೀವು ಹೊರಡ್ರಪ್ಪ...ಹೊತ್ತಾಗುತ್ತೆ...ನಾನು ಕಾರ್ ರಿಪೇರಿ ಮಾಡಿಸಿಕೊಂಡು ಬೆಂಗಳೂರಿಗೆ ಹೋಗುತ್ತೇನೆ..ನೀವೆಲ್ಲ ಬೇಗ ಬೆಂಗಳೂರಿಗೆ ಬಂದು ಬಿಡಿ..ಅವನಿಗೆ ಇಂಟರ್ವ್ಯೂ ಇದೆ.."
"ನೀವು ಏನು ಯೋಚನೆ ಮಾಡಬೇಡಿ ಅಂಕಲ್...ನಾವು ಸೋಮವಾರ ಬೆಳಿಗ್ಗೆ ಬಂದು ಬಿಡ್ತೀವಿ.....ಬೈ ಅಂಕಲ್" ಅಂತ ಹೇಳಿ ಹೊರಟೆವು...
(ಶಶಿಯ ಅಪ್ಪ ತಮ್ಮ ಮಗನಿಗೆ ಕೆಲಸ ಸಿಕ್ಕರೆ ಮತ್ತೆ ಕುಟುಂಬ ಸಮೇತ ಯಾಣಕ್ಕೆ ಬರುತ್ತೇನೆ ಎಂದು ಹರಸಿಕೊಂಡರು....ಶಶಿಗೆ ಗೋದ್ರೆಜ್ ಕಂಪನಿಯಲ್ಲಿ ಕೆಲಸ ಸಿಕ್ಕಿತು..ಅದು ಮುಂಬೈನಲ್ಲಿ...ಆಮೇಲೆ ಕಟ್ಟಿ ಕೊಂಡಿದ್ದ  ಹರಕೆಯನ್ನು ೨೦೦೨ ರಲ್ಲಿ ತಮ್ಮ ಕುಟುಂಬದೊಡನೆ ಹೋಗಿ ಬಂದು ಹರಕೆ ಸಲ್ಲಿಸಿದರು ..ಸುಂದರ ನೆನಪು..ಮಕ್ಕಳ ಏಳಿಗೆಗಾಗಿ ಅಪ್ಪ ಅಮ್ಮ ಮಾಡುವ ತ್ಯಾಗ...ಅಹ ಬಲು ದೊಡ್ಡದು...ಬೆಲೆಕಟ್ಟಲಾರದ್ದು)  

ಗೋಕರ್ಣ ತಲುಪಿದಾಗ ರಾತ್ರಿಯಾಗಿತ್ತು...ಅಲ್ಲಿಯೇ ಒಂದು ಮನೆ ಸಿಕ್ಕಿತು..ಒಂದು ದೊಡ್ಡ ಹಜಾರ..ಎಲ್ಲರು ಅಲ್ಲಿಯೇ ಮಲಗೋಕೆ ಅವಕಾಶ,  ಸೌಕರ್ಯ ಮಾಡಿಕೊಟ್ಟರು...ಊಟದ ವ್ಯವಸ್ಥೆ   ಕೂಡ ಮಾಡಿದರು...ಊಟವೆಲ್ಲ ಆದ ಮೇಲೆ..ಹಾಗೆ ಸುತ್ತಾಡಿ ಬರ್ತೇವೆ ಅಂತ..ಸಮುದ್ರ ತಡಿಗೆ ಹೋದೆವು...ನನಗೆ ಸಮುದ್ರ ಮೊತ್ತ ಮೊದಲಿಗೆ ನೋಡಿದ (ಕತ್ತಲಲ್ಲೂ) ಅನುಭವ...ಸಮುದ್ರದ ನೀರು ಉಪ್ಪು ಅಂತ ಹೇಳ್ತಾರಲ್ಲ ಅಂತ..ಒಂದು ಸರಿ ಪರೀಕ್ಷೆ ಮಾಡೋಣ ಅಂತ..ಒಂದು ತೊಟ್ಟು ನೀರನ್ನು ಬಾಯಿಗೆ ಹಾಕಿಕೊಂಡೆ ಗೊತ್ತಾಯ್ತು...:-)...

ಅಲೆಗಳ ಸೆಳೆತ ಅನುಭವಿಸಿ ಖುಷಿಯಾಯಿತು...ಬೆಳಿಗ್ಗೆ ಆಗುವುದನ್ನೇ ಕಾಯುತಿದ್ದೆ...ಮತ್ತೆ ಸಮುದ್ರದೊಡಲು ಸೇರಲು...
ಚಿತ್ರ ಕೃಪೆ : ಅಂತರ್ಜಾಲ
ಬೆಳಿಗ್ಗೆ ಎದ್ದ ಕೂಡಲೇ, ನಾನು, ಆನಂದ, ನರೇಂದ್ರ ಓಡಿದೆವು ಸಮುದ್ರದ ಕಡೆಗೆ...ತುಂಬಾ ಹೊತ್ತು ನೀರಲ್ಲಿ ಆಟಾಡಿ..ಬಂದು..ಸ್ನಾನ ಮಾಡಿ...ತಿಂಡಿ ತಿಂದು..ಮಹಾಬಲೇಶ್ವರ ದೇವಸ್ತಾನಕ್ಕೆ ಹೊರಟೆವು...
ಆ ಆತ್ಮಲಿಂಗದ ದರುಶನ...ಹತ್ತು ರುಪಾಯಿ ಕೊಟ್ಟು ಲಿಂಗದ ತುದಿ ಮುಟ್ಟಿದ್ದು..ಗಣಪನ ತಲೆಯನ್ನು ಮುಟ್ಟಿ ನೋಡಿದ್ದು...ಎಲ್ಲವು ಮನದಾಳದಲ್ಲಿ ಹಾಗೆಯೇ ನಿಂತು ಬಿಟ್ಟಿತು...

ಉಡುಪಿ ದರ್ಶನ ಮಾಡೋಣ ಅಂತ ಕೆಲವರು..ಇಲ್ಲ ಹೊತ್ತಾಗುತ್ತೆ ಅಂತ ಕೆಲವರು..ಸರಿ...ಯಾವುದು ಬೇಡ ಸೀದಾ ಬೆಂಗಳೂರಿಗೆ ಹೋಗೋಣ ಅಂತ ಮಾತಾಯಿತು...ಡ್ರೈವರ್ ನರೇಂದ್ರನಿಗೆ
"ಸರ್...ಈಗ ಮತ್ತೆ ghat section ಗೆ ಹೋಗೋದು ಕಷ್ಟ..ನಿಮಗೆಲ್ಲ ತುಂಬಾ ಸುಸ್ತಾಗಿದೆ..ಒಂದು ಸ್ವಲ್ಪ ಕಿ.ಮಿ.ಜಾಸ್ತಿ ಆಗುತ್ತೆ..ಆದ್ರೆ ಮಂಗಳೂರಿಗೆ ಹೋಗಿ ಅಲ್ಲಿಂದ ಹೋದರೆ ರಸ್ತೆ ಕೂಡ ಚೆನ್ನಾಗಿದೆ..ಹಾಗು ಬೇಗ ಕೂಡ ಹೋಗಬಹುದು"...
"ಎನ್ರಪ್ಪ ಏನು ಮಾಡೋಣ" ನರೇಂದ್ರ ಕೇಳಿದ..
ಎಲ್ಲರು ಒಂದು ಮಾತು "ಸರಿ ಹಂಗೆ ಮಾಡೋಣ"
ಡ್ರೈವರ್ ನಗುತ್ತ "ಸರಿ ಸರ್" ಎಂದು ಹೇಳಿ ಆರಾಮಾಗಿ ೧೦೦-೧೨೦ ರ ವೇಗದಲ್ಲಿ ಮಂಗಳೂರು ಹೆದ್ದಾರಿ ಕಡೆ ಪ್ರಯಾಣ ಆರಂಭವಾಯಿತು...

ದಾರಿಯಲ್ಲಿ  ಮಂಗಳೂರು ಬಂದರು, ಉಡುಪಿ ವೃತ್ತದಲ್ಲಿದ್ದ ಕೃಷ್ಣಾರ್ಜುನ ರಥದಲ್ಲಿದ್ದ ಭಂಗಿ..ಎಲ್ಲವನ್ನು ಹಾಗೆ ಕಣ್ಣು ತುಂಬಿಕೊಂಡೆವು.....ಜೆ. ಎಂ..ಹಾಸನದಲ್ಲೇ ಇಳಿದುಕೊಂಡ....ಸುಮಾರು ಮಧ್ಯರಾತ್ರಿಯ ಹೊತ್ತಿಗೆ ಬೆಂಗಳೂರು ತಲುಪಿದೆವು...ಶಶಿ ಮನೆಯಲ್ಲಿ ರಾತ್ರಿ ಮಲಗಿ ಬೆಳಗ್ಗೆ ಎದ್ದು ಮನೆ ಸೇರಿಕೊಂಡೆವು...

ಒಂದು ಅಮೋಘ...ಗೊತ್ತು ಗುರಿಯಿಲ್ಲದ ಒಂದು ಪ್ರವಾಸ ರೋಮಾಂಚನ ಅನುಭವ ಕೊಟ್ಟಿತು..ಎಲ್ಲರ ಮುಖದಲ್ಲೂ ಸಂತಸ...ಈ ಸಂತಸಕ್ಕೆ ನಾವು ಕೊಟ್ಟ ಬೆಲೆ ಕೇವಲ ನಾನೂರ ಐವತ್ತು ರೂಪಾಯಿಗಳು...ಆದ್ರೆ ಅದು ಕೊಟ್ಟ ಸಂತಸ ಬೆಲೆಕಟ್ಟಲಾಗದು...ಅಲ್ಲವೇ...!!!!

4 comments:

  1. ಅಪ್ಪನ ಒಲುಮೆ ಎಂತದಲ್ಲವೇ? ಅಲ್ಲಿಗೂ ಹುಡುಕಿಕೊಂಡು ಬಂದರು ಎಂದರೆ, ಅವರು ಗ್ರೇಟ್.

    ಗೊತ್ತು ಗುರಿಯಿಲ್ಲದ ಸಾರ್ಥಕ ಪ್ರವಾಸಕ್ಕೂ ಯೋಗ ಬೇಕು. ನೀವು ನಿರಂತರ ಯಾತ್ರಿಕ.

    ReplyDelete
  2. ಹೌದು..ಇಂದಿಗೂ ನನಗೆ ಕಣ್ಣಿಗೆ ಕಟ್ಟಿದಂತಿದೆ..ಆ ದೃಶ್ಯ..ತಂದೆ ಮಕ್ಕಳು ಇಬ್ಬರು ಯೋಚಿಸುವುದರಲ್ಲಿ, ಮಾತಾಡುವುದರಲ್ಲಿ, ನಡೆ ನುಡಿ ಎಲ್ಲದರಲ್ಲೂ ಒಬ್ಬರಿಗೊಬ್ಬರು ಮೀಟುತ್ತಾರೆ..ಒಂದು ತರಹ ಇಬ್ಬರು ಗೆಳೆಯರು ಮಾತಾಡಿದಂತೆ ಇರುತ್ತದೆ..ಅವರಿಬ್ಬರ ಒಡನಾಟ...ಧನ್ಯವಾದಗಳು ಬದರಿ ಸರ್..!

    ReplyDelete
  3. nice blog kano....ella kanna munde 14 reel movie tara:-)

    ReplyDelete
  4. Thank you Venki..yes..those days are invaluable...Thanks for your comments.

    ReplyDelete